ಮಿತ್ರರೆ,
ಕಳೆದ ವಾರ, ೧೯೮೦ರಲ್ಲಿ ನಡೆದ ಒಂದು ಸಂಪೂರ್ಣ ಸೂರ್ಯಗ್ರಹಣದ ಬಗ್ಗೆ ನನ್ನ ಅನುಭವ ಕಥನವನ್ನು ಓದಿ ಹತ್ತಾರು ಮಂದಿ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ನಿಮಗೆಲ್ಲ ಹೃದಯ ತುಂಬಿದ ಧನ್ಯವಾದಗಳು.
ನಿಜಕ್ಕೂ ನಾನು ಬರೆಯಲು ಹೊರಟಿದ್ದು ಕಳೆದ ಜನವರಿ ೧೫ರಂದು ಆಕಾಶದಲ್ಲಾದ ವಿಸ್ಮಯಕರ ಘಟನೆಯನ್ನು. ಈ ಸಂಪೂರ್ಣ ಸೂರ್ಯಗ್ರಹಣ ಬಹು ಅಪರೂಪವಾದದ್ದು ಯಾಕೆ ಎಂದರೆ, ಅದೊಂದು ಅಪೂರ್ವ ಕಂಕಣ ಗ್ರಹಣ. ಹಾಗೆಂದರೇನು ಅಂತ ನೀವು ಕೇಳಬಹುದು. ಪ್ರೊ. ಜಿ. ಟಿ. ನಾರಾಯಣರಾವ್ರವರ ಖಡಕ್ ಕನ್ನಡದಲ್ಲಿ ಹೇಳಬೇಕೆಂದರೆ, ದೀರ್ಘವೃತ್ತದ ಒಂದು ನಾಭಿಯಲ್ಲಿ ನೆಲೆಸಿರುವ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಚಂದ್ರ ಅಪರವಿಯಲ್ಲಿ ಹಾದುಹೋಗುವ ವೇಳೆಯಲ್ಲಿಯೇ ಸೂರ್ಯನನ್ನು ಕುರಿತಂತೆ ಭೂಮಿಯು ಪುರರವಿಯಯಲ್ಲಿ ಹಾದುಹೋಗುವ ರಾಶಿಚಕ್ರದ ಎರಡು ಸ್ಪಷ್ಟನೆಲೆಗಳಲ್ಲಿ ಸೂರ್ಯನೂ ಸಮಾಗಮಿಸಿದರೆ ಆಗ ಸುದೀರ್ಘ ಕಂಕಣ ಸೂರ್ಯಗ್ರಹಣ ಘಟಿಸುತ್ತದೆ. ಪಾಮರರ ಭಾಷೆಯಲ್ಲಿ ಹೇಳುವುದಾದರೆ ಆವತ್ತು ಆದದ್ದಿಷ್ಟೆ: ಚಂದ್ರ ಭೂಮಿಯಿಂದ ಬಹಳ ದೂರದಲ್ಲಿದ್ದ, ಚಿಕ್ಕದಾಗಿ ತೋರುತ್ತಿದ್ದ; ಸೂರ್ಯ ಹತ್ತಿರದಲ್ಲಿದ್ದ, ಸ್ವಲ್ಪ ದೊಡ್ಡದಾಗಿ ತೋರುತ್ತಿದ್ದ. ಹೀಗಾಗಿ ಗ್ರಹಣದ ವೇಳೆ ಚಂದ್ರನ ತಟ್ಟೆ ಸೂರ್ಯನನ್ನು ಸಂಪೂರ್ಣ ಮುಚ್ಚಲು ವಿಫಲವಾಯ್ತು, ಚಂದ್ರನ ಸುತ್ತ ಬಳೆಯ ಹಾಗೆ ಸೂರ್ಯ ಕಂಡುಬಂದ! ಚಂದ್ರ ಸೂರ್ಯನ ಅಡ್ಡವಾಗಿ ಹಾದುಹೋಗಲು ಸುಮಾರು ಏಳು ನಿಮಿಷಗಳ ಸುದೀರ್ಘಕಾಲ ತೆಗೆದುಕೊಂಡದ್ದು, ಅಲ್ಲದೆ ಅದು ಭೂಮಧ್ಯ ರೇಖೆಯ ಆಸುಪಾಸಿನಲ್ಲೆ ಘಟಿಸಿದ್ದು ಈ ಗ್ರಹಣದ ವಿಶೇಷ. ಮತ್ತೊಮ್ಮೆ ಇಂತಹ ಸುದೀರ್ಘ ಕಂಕಣಗ್ರಹಣ ನಡೆಯುವುದು ಇನ್ನು ಒಂದು ಸಾವಿರ ವರ್ಷಕ್ಕೂ ಹೆಚ್ಚು ಸಮಯದ ನಂತರ!
ಈ ಖಂಡಗ್ರಾಸ ಗ್ರಹಣ ಕರ್ನಾಟಕದ ಎಲ್ಲೆಡೆ ಕಂಡರೂ ಖಗ್ರಾಸ ಗ್ರಹಣ (ಅಂದರೆ ಸಂಪೂರ್ಣಗ್ರಹಣ) ಕಂಡದ್ದು ಭೂಮಧ್ಯರೇಖೆಯಿಂದ ೭ ಡಿಗ್ರಿ ಉತ್ತರದವರೆಗೆ ವಾಸಿಸುವವರಿಗೆ ಮಾತ್ರ. ಹಾಗಾಗಿ ನಾನು ದಕ್ಷಿಣದ ತಮಿಳುನಾಡು ಅಥವಾ ಕೇರಳ ರಾಜ್ಯಗಳಲ್ಲಿ ಯಾವುದಾದರೂ ಸ್ಥಳಕ್ಕೆ ಮೊದಲೇ ಹೋಗಿ ತಳವೂರಬೇಕಾಗಿತ್ತು.
ದೇಶದ ಹಾಗೂ ಪರದೇಶಗಳ ಎಷ್ಟೋ ವಿಜ್ಞಾನಿಗಳು, ಹವ್ಯಾಸಿ ಖಗೋಳವೀಕ್ಷಕರು ಇಂತಹ ಸಂದರ್ಭಗಳಿಗೆ ಕಾಯುತ್ತಿರುತ್ತಾರೆ. ಅವರು ಹಿಂದಿನ ಎಷ್ಟೋ ವರ್ಷಗಳ ದಾಖಲೆಗಳನ್ನು ಸಂಶೋಧಿಸಿ, ಪರಾಮರ್ಶಿಸಿ ಯಾವ ಜಾಗ ವೀಕ್ಷಣೆಗೆ ಅತಿ ಸೂಕ್ತ ಎಂದು ತೀರ್ಮಾನಿಸುತ್ತಾರೆ. ಅಂದರೆ, ಆ ಸ್ಥಳದಲ್ಲಿ ಆ ದಿನ ಯಾವುದೇ ಹವಾಮಾನ ವೈಪರೀತ್ಯಗಳಿಲ್ಲದೆ, ಯಾವುದೇ ಅಡೆತಡೆಗಳಿಲ್ಲದೆ, ಮಂಜು-ಮೋಡಗಳಿಲ್ಲದೆ ಶುಭ್ರವಾಗಿ ಕಾಣುವಂತಿರಬೇಕು.
ನಾನು ಆ ಸಮಯಕ್ಕೆ ನೇರವಾಗಿ ಕನ್ಯಾಕುಮಾರಿಗೇ ಹೋಗುವ ತಯಾರಿ ನಡೆಸಿದ್ದೆ. ಈ ಮಧ್ಯೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಖಗೋಳ ವಿಜ್ಞಾನದ ಮೂರು ದಿನಗಳ ಸಮ್ಮೇಳನ ನಡೆಯಿತು. ಅಲ್ಲಿಯೂ ದೇಶ-ವಿದೇಶಗಳಿಂದ ಅನೇಕ ಸಂಶೋಧಕರು ಜಮಾಯಿಸಿದ್ದರು. ಅವರಲ್ಲಿ ಹಲವರೊಂದಿಗೆ ಈ ಗ್ರಹಣದ ಬಗ್ಗೆ ಮಾತನಾಡಿದೆ. ಎಲ್ಲರೂ ರಾಮೇಶ್ವರದ ಕಡೆ ಬೆರಳು ತೋರಿದಾಗ ಅಶ್ಚರ್ಯವಾಯಿತು! ಏಕೆಂದರೆ, ರಾಮೇಶ್ವರ ಸಂಪೂರ್ಣ ಸೂರ್ಯಗ್ರಹಣ ಕಂಡುಬರುವ ಅತಿ ಉತ್ತರ ರೇಖಾಂಶದಲ್ಲಿರುವ ಊರು. ಅಂತರ್ಜಾಲದಲ್ಲಿ ಹಲವು ವಿಜ್ಞಾನಿಗಳು ಕೂಡ ಅದೇ ಜಾಗವನ್ನು ಆರಿಸಿಕೊಂಡಿದ್ದು ಕಂಡುಬಂದಿತು. ರಾಮೇಶ್ವರವು ಕನ್ಯಾಕುಮಾರಿಗಿಂತ ಸುಮಾರು ೨೫೦ ಕಿಮೀ ಹತ್ತಿರವೂ ಆಗುತ್ತದೆ, ಆರು ಘಂಟೆ ಪ್ರಯಾಣದ ಹೊತ್ತೂ ಉಳಿಯುತ್ತದೆ. ಆದ್ದರಿಂದ ನಾನೂ ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿದೆ.
ಜೊತೆಗೆ ಯಾರು ಯಾರು ಬರುತ್ತಾರೆ? ಇಂತಹ ವಿಷಯಗಳಲ್ಲಿ ಆಸಕ್ತಿಯಿರುವವರೆಂದರೆ ಅನುಪಮ್ ರೇ, ಪ್ರೊ. ಪೂವಣ್ಣ ಮತ್ತು ಶ್ರೀಕಾಂತ್. ಮೂವರೂ ‘ಬೇರೆ ಕೆಲಸವಿದೆ, ನೀವು ಹೋಗಿಬನ್ನಿ’ ಎಂದುಬಿಟ್ಟರು. ಕೊನೆಗೆ ನನ್ನ ಹೆಂಡತಿ ಪುಷ್ಪ, ಕಿರಿಯ ಮಗಳು ಅಭಿಜ್ಞ, ತಮ್ಮನ ಮಗಳು ಅಂಜಲಿ ಮತ್ತು ನಾನು ಇಷ್ಟು ಜನ, ನಮ್ಮ ಕಾರಿನಲ್ಲಿಯೇ ಹೋಗುವುದೆಂದು ನಿಶ್ಚಯಿಸಿದೆವು.
ನಮ್ಮ ಸಂಕ್ರಾಂತಿ ಹಬ್ಬವನ್ನು ತಮಿಳರು ಪೊಂಗಲ್ ಎಂದು ಆಚರಿಸುತ್ತಾರೆ. ಆಗ ಆ ರಾಜ್ಯದಲ್ಲೆಲ್ಲ ಮೂರು ದಿನ ರಜಾ. ಜೊತೆಗೆ ಭಾನುವಾರವೂ ಸೇರಿ ಬಂದಿದ್ದರಿಂದ ಬಹಳ ಜನಜಂಗುಳಿ ಇರಬಹುದು, ಉಳಿದುಕೊಳ್ಳಲು ಲಾಡ್ಜ್ ಮೊದಲೇ ನಿಗದಿ ಪಡಿಸಿಕೊಳ್ಳುವುದು ಒಳ್ಳೆಯದೆಂದು ಊರೂರು ತಿರುಗಾಡುವ ಹವ್ಯಾಸವಿರುವ ನನ್ನ ಭಾವನವರನ್ನೇ ವಿಚಾರಿಸಿದೆ.
ರಾಮನಾಡಿನಲ್ಲಿ ಅವರಿಗೆ ತಿಳಿದಿದ್ದ ಒಂದು ಹೋಟೆಲಿನ ನಂಬರ್ ಕೊಟ್ಟರು. ‘ಬನ್ನಿ ಪರವಾಗಿಲ್ಲ, ರೂಂ ಬುಕ್ ಮಾಡಿರುತ್ತೇನೆ’ ಎಂದು ಆ ಮುಸ್ಲಿಂ ಹೋಟೆಲಿನ ಒಡೆಯನೇ ಆಶ್ವಾಸನೆ ಕೊಟ್ಟ.
ದೂರದ ಹಾಗೂ ಮೂರು ದಿನಗಳ ಪ್ರಯಾಣವಾದ್ದರಿಂದ ಒಬ್ಬ ಡ್ರೈವರ್ನ್ನು ಹುಡುಕಬೇಕಾಯಿತು. ಕೊನೆಗೆ ರಫೀಕ್ ಸಿಕ್ಕಿದ. ಈ ರಫೀಕ್ ಬಗ್ಗೆ ಮೊದಲೇ ಹೇಳಿಬಿಡುತ್ತೇನೆ. ಅವನು ನನ್ನ ಕ್ಲಿನಿಕ್ಕಿನಲ್ಲಿ ಬಹಳ ಹಿಂದೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದವ. ಈಗ ಡ್ರೈವರ್ ಆಗಿದ್ದಾನೆ. ಒಂದೆರಡು ಕಡೆಗೆ ನಮ್ಮ ಜೊತೆ ಬಂದಿದ್ದಾನೆ ಕೂಡ. ಎಷ್ಟೋ ರಾಜ್ಯಗಳನ್ನು ಸುತ್ತಿರುವುದರಿಂದ ಸ್ಥಳಗಳ ಪರಿಚಯವೂ ಇದೆ. ಮಾತು ಮಾತ್ರ ಸ್ವಲ್ಪ ವಿಚಿತ್ರ. ಮಾತನಾಡಲು ಬಾಯಿ ತೆರೆದರೆ ಶಕಾರಮೂರ್ತಿ! ‘ನಿಮ್ಗೆ ಯೋಚನೆ ಬೇಡ ಡಾಕ್ಟ್ರೆ, ನಂಗೆ ಬಿಟ್ಬಿಡಿ. ರೂಟ್ ನಾನು ವಿಚಾರಿಶ್ತೇನೆ!’
ಜನವರಿ ೧೪ರಂದು ಬೆಳಿಗ್ಗೆ ಐದೂವರೆಗೆ ವೀರಾಜಪೇಟೆ ಬಿಟ್ಟೆವು. ಮೈಸೂರು, ನಂಜನಗೂಡು, ಚಾಮರಾಜನಗರದ ದಾರಿಗಾಗಿ ಸತ್ಯಮಂಗಲ ತಲುಪಿದೆವು. ದಾರಿಯಲ್ಲಿ ರಸ್ತೆ ಬದಿಯ ಒಂದು ಕಬ್ಬಿನ ತೋಟದಲ್ಲಿ ಬೆಳಗ್ಗಿನ ಉಪಹಾರಕ್ಕೆ ನಾವು ಕಟ್ಟಿಕೊಂದು ಬಂದಿದ್ದ ಇಡ್ಲಿ ಮುಗಿಸಿದೆವು. ಬಹುಶಃ ಅಲ್ಲಿಂದ ಹಿಡಿದು, ಹಿಂದಿರುಗುವವರೆಗೂ ನಾವು ತಿಂದ ಚೊಕ್ಕ-ರುಚಿಕರ ಆಹಾರ ಅದೊಂದೆ!
![](https://blogger.googleusercontent.com/img/b/R29vZ2xl/AVvXsEh_HnCbL_o19ETHfX3q7Cq1n3y4Ma-x6GYqMyBAcS_b0X313vF2EhQpCrapaQxYtSxj6Ve7ue4oE6KGwXYha_M7HkDqSHHoYCnezYlfMzpfJlt9VqqO40TtXJzE2UuPenyalmkoS50j5fk/s320/DSCN0604.jpg)
ಹದಿನೈದರಂದು ಬೆಳಿಗ್ಗೆ ಎದ್ದು, ಏಳು ಘಂಟೆಗೆ ಲಾಡ್ಜ್ನಿಂದ ಹೊರಬಂದು ಮೊದಲು ನೋಡಿದ್ದು ಆಕಾಶವನ್ನು! ಸುತ್ತಲೂ ಮೋಡ ತುಂಬಿದ ವಾತಾವರಣ, ಪಿರಿಪಿರಿ ಮಳೆ, ಎಲ್ಲವೂ ನಮ್ಮ ಗ್ರಹಣ ನೋಡುವ ಸಂಭ್ರಮವನ್ನು ತಣ್ಣಗಾಗಿಸಿಬಿಟ್ಟಿತು. ಅದೇ ಹೊತ್ತಿಗೆ ನಮ್ಮ ಲಾಡ್ಜ್ನಲ್ಲಿಯೇ ಹಿಂದಿನ ರಾತ್ರಿ ತಂಗಿದ್ದ ಗುವಾಹಟಿಯ ನಾಲ್ಕು ಜನರ ತಂಡ ಟೆಲಿಸ್ಕೋಪು, ಕ್ಯಾಮೆರಾ ಮುಂತಾದ ಸಲಕರಣೆಗಳನ್ನು ತಮ್ಮ ವ್ಯಾನಿಗೆ ತುಂಬಿಸತೊಡಗಿದರು. ನನ್ನ ಪರಿಚಯ ಮಾಡಿಕೊಂಡೆ. ಎಲ್ಲರ ಮುಖದಲ್ಲಿಯೂ ಆತಂಕ ತುಂಬಿತ್ತು. ಆಕಾಶ ಹೀಗಿದ್ದರೆ ಸೂರ್ಯನನ್ನು ಕಂಡ ಹಾಗೆಯೇ! ಈ ಭಾಗ್ಯಕ್ಕೆ ದೇಶವಿದೇಶಗಳಿಂದ ಇಲ್ಲಿಗೆ ಬರಬೇಕಿತ್ತೇ! ಎಲ್ಲರೂ ರಾಮೇಶ್ವರವನ್ನು ಏಕೆ ಆಯ್ಕೆ ಮಾಡಿಕೊಂಡರು? ನಾನೂ ಇಲ್ಲಿಗೇ ಬಂದೆನಲ್ಲ? ಏನಾದರಾಗಲಿ, ಸೂರ್ಯನ ಇಣುಕು ನೋಟವನ್ನಾದರೂ ನೋಡಿಕೊಂಡು ಹೋಗುವುದೆಂದು ತೀರ್ಮಾನಿಸಿದೆವು.
ಪಕ್ಕದ ಭಯಂಕರ ಹೋಟೆಲಿನಲ್ಲಿ ಉಪಾಹಾರ ಮುಗಿಸಿ ರಾಮೇಶ್ವರಕ್ಕೆ ಪ್ರಯಾಣ ಬೆಳೆಸಿದೆವು. ರಾಮನಾಡಿನಿಂದ ರಾಮೇಶ್ವರದ ದಾರಿಯಲ್ಲಿ ಪಾಂಬನ್ ಸೇತುವೆ ದಾಟಬೇಕು. ವಾಹನಗಳಿಗೆ ಎತ್ತರದಲ್ಲಿ ಒಂದು ರಸ್ತೆ, ಅನತಿ ದೂರದಲ್ಲಿಯೇ ಸಮಾನಂತರದಲ್ಲಿ ಆದರೆ, ಸಮುದ್ರಮಟ್ಟದಲ್ಲಿ ರೈಲು ಪ್ರಯಾಣಕ್ಕೆ ದಾರಿ! ಮೂವತ್ತೆರಡು ವರ್ಷಗಳ ಹಿಂದೆ ರೈಲಿನಲ್ಲಿ ಈ ದಾರಿಗಾಗಿ ಬಂದಿದ್ದೆ. ಆ ಥ್ರಿಲ್ ರಸ್ತೆಯ ಮೇಲಿಲ್ಲ.
![](https://blogger.googleusercontent.com/img/b/R29vZ2xl/AVvXsEictWdBbwl8nOaY6hqZ3a6KBJh8KvnjsjI4QaVrUJ3XjHIiYHHaVf4h4z9M4-T8SbVsaDkWNhG-NcBEcuXFhKdIuIlMo5JE3EQxtU8_299LcexDxjxa1llRFQJ7ntBQ-LSw4M4jRmydcI4/s320/DSCN0619.jpg)
ಮೊದಲು ರಾಮೇಶ್ವರದ ದೇವಸ್ಥಾನವನ್ನು ನೋಡಿಕೊಂದು ಅಲ್ಲಿಂದ ಗ್ರಹಣ ವೀಕ್ಷಣೆಗೆ ಸೂಕ್ತ ಜಾಗದಲ್ಲಿ ಠಿಕಾಣಿ ಹೂಡಬೇಕೆಂಬುದು ನಮ್ಮ ಕಾರ್ಯಕ್ರಮ. ನಾವಂದುಕೊಂಡಂತೆ ರಾಮೇಶ್ವರವು ಯಾತ್ರಾರ್ಥಿಗಳಿಂದ, ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆವತ್ತು ಅಲ್ಲಿ ಸುಮಾರು ಎರಡು ಲಕ್ಷ ಜನ ಸೇರಿದ್ದಿರಬಹುದು.
ಗ್ರಹಣದ ದಿನವಾದ್ದರಿಂದ ದೇವಸ್ಥಾನವನ್ನು ಹತ್ತು ಘಂಟೆಗೇ ಮುಚ್ಚುತ್ತಾರೆಂದು ತಿಳಿದು ಬೇಗಬೇಗನೆ ಹೆಜ್ಜೆ ಹಾಕಿದೆವು. ರಾಮೇಶ್ವರ ದೇವಸ್ಥಾನ ನಿಜಕ್ಕೂ ಒಂದು ಅತಿ ಬೃಹತ್ತಾದ ಕಟ್ಟಡ ಸಮೂಹ. ದೇವಸ್ಥಾನದ ಹೊರಗಿನ ಎರಡು ಪ್ರಾಕಾರಗಳನ್ನು ಸುತ್ತಿ ಹೆಬ್ಬಾಗಿಲಿಗೆ ಬರುವುದರೊಳಗೆ ಬಾಗಿಲು ಮುಚ್ಚಿಬಿಟ್ಟಿದ್ದರು! ಇನ್ನೂ ಒಂಭತ್ತು ಘಂಟೆ, ಆಗಲೇ ಮುಚ್ಚಿಬಿಟ್ಟರಲ್ಲ? ಈಗಾಗಲೇ ಒಳಗೆ ಇರುವ ಯಾತ್ರಾರ್ಥಿಗಳು ದೇವರ ದರ್ಶನವನ್ನು ಪಡೆದು ಹೊರಬರಲು ಒಂದು ತಾಸು ಆಗುವುದರಿಂದ ಈ ವ್ಯವಸ್ಥೆ ಎಂದು ತಿಳಿಯಿತು. ಈಗೇನು ಮಾಡುವುದು? ಗ್ರಹಣ ಹಿಡಿಯಲು ಇನ್ನೂ ಎರಡು ಘಂಟೆಯಿದೆ. ಸುತ್ತಲೂ ಇದ್ದ ಜನಕ್ಕೆ ಗ್ರಹಣದ ಬಗ್ಗೆ ಯಾವ ಆಸಕ್ತಿಯೂ ಇದ್ದಂತಿರಲಿಲ್ಲ. ದೇವಸ್ಥಾನದ ಪೂರ್ವಕ್ಕೆ ಇರುವ ಸಮುದ್ರ ತೀರದಲ್ಲಂತೂ ಸಾವಿರಾರು ಜನ! ಸರಿಯಾಗಿ ನಿಲ್ಲಲೂ ಆಗದಿರುವ ಇಂತಹ ಜಾಗದಲ್ಲಿ ನಾವು ಗ್ರಹಣ ವೀಕ್ಷಣೆ ಮಾಡುವುದಾದರೂ ಹೇಗೆ? ನಮ್ಮೊಂದಿಗೆ ತಂಗಿದ್ದ ಗುವಾಹಟಿಯವರು ಏನಾದರು? ಇಲ್ಲಿ ನಮಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಸುಮಾರು ಒಂಭತ್ತು ಘಂಟೆಗೆಲ್ಲ ಆಗಸ ಶುಭ್ರವಾಗತೊಡಗಿತ್ತು. ಅಲ್ಲಿಂದ ಸಾಯಂಕಾಲದವರೆಗೂ ಆಕಾಶದಲ್ಲಿ ಒಂದೇ ಒಂದು ಮೋಡದ ತುಣುಕೂ ಇಲ್ಲದೆ ಇಡೀ ಆಕಾಶ ಗ್ರಹಣವೀಕ್ಷಣೆಗೆ ಅನುವು ಮಾಡಿಕೊಟ್ಟಿತ್ತು!
![](https://blogger.googleusercontent.com/img/b/R29vZ2xl/AVvXsEicoT9JLPa7dOshlglZP8lrLkJfZosAZ3K8VUnagIWAR026Ma91-wEVSgwJibA8oNCynmtBKkLvLZSmyZv2h4a_3k-Wkp2x9lnDJBL_TNw2JqdoGM75wZxuMdaMx5_zXbVyOo9tfwKa9NI/s320/DSCN0627.jpg)
ನಮ್ಮ ಕೈಯಲ್ಲಿ ಸೋನಿ ವಿಡಿಯೋ ಕ್ಯಾಮೆರಾ, ನಿಕಾನ್ P90 ಕ್ಯಾಮೆರಾ ಮತ್ತು ಬೈನಾಕ್ಯುಲರ್ ಇವಿಷ್ಟಿದ್ದವು. ನನ್ನ ಒಂದು ಕೊರತೆ ಟ್ರೈಪಾಡ್ ಇಲ್ಲದಿದ್ದದ್ದು. ಹೊರಡುವ ಸಂಭ್ರಮದಲ್ಲಿ ಅದೊಂದನ್ನು ಮರೆತು ಬಂದಿದ್ದೆ. ಧನುಷ್ಕೋಟಿ ತಲುಪಿದಾಗ ಬಹಳ ಸಂತೋಷವಾಯಿತು. ಏಕೆಂದರೆ, ಅಲ್ಲಿ ಈಗಾಗಲೇ ಸುಮಾರು ಸಾವಿರ ಮಂದಿ ಸೇರಿದ್ದರು ಮತ್ತು ಅವರೆಲ್ಲ ಸೂರ್ಯಗ್ರಹಣದ ವೀಕ್ಷಣೆಗೇ ಬಂದಿದ್ದರು. ದೇಶವಿದೇಶಗಳಿಂದ ನೂರಾರು ಸಲಕರಣೆಗಳೊಂದಿಗೆ ಎಲ್ಲರೂ ಸಜ್ಜಾಗಿ ಬಂದಿದ್ದರು. ಅಲ್ಲದೆ ದೂರದಲ್ಲಿ ಪೆಂಡಾಲ್ ಮತ್ತು ಮೈಕು ಹಾಕಿಕೊಂಡು ವಿವಿಧ ರೇಡಿಯೋ-ಟಿವಿ ಮಾಧ್ಯಮದ ಮಂದಿಯೊಂದಿಗೆ, ಹಲವು ಶೈಕ್ಷಣಿಕ ಸಂಸ್ಥೆಗಳು, ವಿಜ್ಞಾನ ಸಂಘಗಳು ಗ್ರಹಣದ ಬಗ್ಗೆ ಸೂಕ್ತ ಮಾಹಿತಿ ಮತ್ತು ನೇರವರದಿಯನ್ನು ಬಿತ್ತರಿಸುತ್ತಿದ್ದರು.
ಆದರೆ ಅತಿ ಕಿರಿದಾದ ರಸ್ತೆ, ಹೋಗಲು-ಬರಲು ವಾಹನಗಳಿಗೆ ಬಹಳ ತ್ರಾಸಾಗುತ್ತಿತ್ತು. ಮುಂದೆ ಹೋದ ವಾಹನಗಳು ರಿವರ್ಸ್ನಲ್ಲಿ ಹಿಂದಿರುಗಬೇಕು. ರಸ್ತೆಯ ಎರಡೂ ಬದಿಯಲ್ಲಿ ಅಗಾಧ ಮರಳು ರಾಶಿ. ರಫೀಕನಿಗಂತು ತುಂಬಾ ಕೋಪ ಬಂದಿರಬೇಕು. ‘ಈ ಜನಕ್ಕೆ ಬುದ್ದಿ ಇಲ್ಲ, ಶ್ರೈಟ್ ಮರಳು ಮೇಲೆ ಇಳಿಕೊಂಡು ಹಾಗೇ ಒಂದು ಶುತ್ತು ತಿರುಗಿಶಿ ವಾಪಾಶ್ ರಶ್ತೆಗೆ ಬಂದುಬಿಡೋಣ’, ಅಂದ. ನನಗೇಕೋ ಸಂಶಯ ಬಂತು. ಇಷ್ಟು ವಾಹನಗಳಲ್ಲಿ ಒಂದಾದರೂ ವಿಶಾಲವಾದ ಮರಳ ಮೇಲೆ ಪಾರ್ಕ್ ಮಾಡಿಲ್ಲ ಅಂದ ಮೇಲೆ, ಏನೋ ಐಬು ಇರಬೇಕು ಎಂದುಕೊಂಡು ‘ಬೇಡ ಮಾರಾಯ ಇಲ್ಲೇ ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊ. ನಾವೆಲ್ಲ ಇಳಿದುಬಿಡುತ್ತೇವೆ, ಆಮೇಲೆ ನೀನೆಲ್ಲಾದರೂ ಪಾರ್ಕ್ ಮಾಡು’ ಎಂದು ಹೇಳುವುದರೊಳಗೆ ಬಲಬದಿಗೆ ಇಳಿದೇಬಿಟ್ಟ.
ಕಾರಿನ ನಾಲ್ಕು ಚಕ್ರಗಳು ಮರಳಿಗೆ ಇಳಿದವೋ ಇಲ್ಲವೋ ಕಾರು ಒಮ್ಮೆಲೇ ನಿಂತು ಹೋಯಿತು! ಜಂ ಅಂತ ಮೊದಲನೆ ಗೇರು ಹಾಕಿ ರಿವ್ವನೆ ಬಿಟ್ಟ. ಚಕ್ರಗಳು ತಿರುಗಿದವೇ ವಿನಃ ಕಾರು ಒಂದಿಂಚೂ ಅಲುಗಲಿಲ್ಲ. ಕೆಳಗೆ ಇಳಿದು ನೋಡಿ ದಂಗಾಗಿಹೋದ. ಕಾರಿನ ಚಕ್ರಗಳು ಸೊಂಟದವರೆಗೆ ಹೂತುಹೋದವು! ರಫೀಕನಿಗೆ ಮೈಯೆಲ್ಲಾ ಬೆವತು ಹೋಯಿತು. ‘ಎಲ್ಲಾರೂ ಶ್ವಲ್ಪ ಇಳಿದು ತಳ್ಳಿದರೆ ಶಾಕು’, ಅಂದ. ಯಾರಿದ್ದಾರೆ? ಎಲ್ಲರೂ ಆಕಾಶ ನೋಡುತ್ತಿದ್ದರು. ಅಷ್ಟರಲ್ಲಿ ನನ್ನ ಹೆಂಡತಿ-ಮಕ್ಕಳು ತಮ್ಮ ಸ್ಪೆಶಲ್ ಕನ್ನಡಕದೊಂದಿಗೆ ಸುತ್ತಮುತ್ತ ಇದ್ದ ಕೆಲವರಿಗೆ ಸೂರ್ಯನನ್ನು ತೋರಿಸತೊಡಗಿದ್ದರು. ರಫೀಕನಿಗಂತೂ ತಡೆಯಲಾಗಲಿಲ್ಲ. ‘ಶಾರ್, ಶಾರ್, ಎಲ್ಲಾರು ವಾಂಗೊ. ಶಕ್ತಿ ಪೋಡುಂಗೊ!’ ಎಂದು ತನಗೆ ತಿಳಿದ ತಮಿಳಿನಲ್ಲೇ ದೈನ್ಯನಾಗಿ ಕೂಗತೊಡಗಿದ. ಒಂದೆರಡು ಧಾಂಡಿಗರು ಮತ್ತಿಬ್ಬರನ್ನು ಸೇರಿಸಿಕೊಂಡು ಮೊದಲು ರಫೀಕನನ್ನು ಕಾರಿನಿಂದ ಇಳಿಸಿದರು. ಚಕ್ರದ ಸುತ್ತ ಮರಳನ್ನು ಬಿಡಿಸಿ, ಎಲ್ಲಾ ಸೇರಿ ಕಾರನ್ನೇ ಗುಂಡಿಯಿಂದ ಅನಾಮತ್ತಾಗಿ ಪಕ್ಕಕ್ಕೆ ಎತ್ತಿಟ್ಟರು. ಅಲ್ಲಿಂದ ಹಿಂದಕ್ಕೆ ನೂಕಿ ರಸ್ತೆಗೆ ತಂದಿಟ್ಟರು. ನನಗಂತೂ ಸಾಕಾಗಿ ಹೋಗಿತ್ತು, ‘ಇನ್ನಾದರೂ ಸುರಕ್ಷಿತವಾಗಿ ಎಲ್ಲಾದರೂ ಪಾರ್ಕ್ ಮಾಡು’ ಎಂದು ಹೇಳಿದವನೆ ಎಲ್ಲರೊಂದಿಗೆ ಸಮುದ್ರ ತೀರಕ್ಕೆ ಬಂದೆ.
ಗ್ರಹಣ ಈಗಾಗಲೇ ಪ್ರಾರಂಭವಾಗಿದ್ದರಿಂದ ಸಮುದ್ರ ತೀರದುದ್ದಕ್ಕೂ ಎಲ್ಲೆಡೆ ಸಕಲ ಸಲಕರಣೆಗಳೂ ಸಿದ್ಧಗೊಂಡು ಸೂರ್ಯನತ್ತ ತಿರುಗಿ ನಿಂತಿದ್ದವು. ಹಲವು ವಿಜ್ಞಾನಿಗಳು, ಹವ್ಯಾಸೀ ಖಗೋಳತಜ್ಞರು, ನನ್ನಂತಹ ಆಕಾಶರಾಯರು ಎಲ್ಲರೂ ಸಂಪೂರ್ಣ ವಿದ್ಯಮಾನಗಳನ್ನು ನಿರಂತರವಾಗಿ ಚಿತ್ರೀಕರಿಸುತ್ತ, ಮಧ್ಯೆಮಧ್ಯೆ ಫೋಟೊ ತೆಗೆಯುತ್ತ, ಕುತೂಹಲದಿಂದ ಕಂಕಣ ಸೂರ್ಯಗ್ರಹಣವನ್ನು ನಿರೀಕ್ಷಿಸುತ್ತ ನಿಂತಿದ್ದರು. ಚಂದ್ರ ಆಗಲೇ ಸೂರ್ಯನನ್ನು ಮುಕ್ಕಾಲು ಭಾಗ ನುಂಗಿದ್ದ. ನನ್ನಲ್ಲಿ ಟ್ರೈಪಾಡ್ ಇಲ್ಲದಿದ್ದುದು ಬಹು ದೊಡ್ಡ ಕೊರತೆಯಾಯಿತು. ಫಿಲ್ಟರ್ ಹಾಳೆಯನ್ನು ಲೆನ್ಸ್ ಮುಂದೆ ಹಿಡಿದು, ಜೂಂ ಮಾಡಿ, ಸ್ವಲ್ಪವೂ ಕೈ ನಡುಗಿಸದೆ ಸೂರ್ಯನ ಛಾಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ನಿಜಕ್ಕೂ ಅಸಾಧ್ಯವಾದ ಕೆಲಸ. ಪ್ರತಿ ಸಾರಿ ಒಬ್ಬೊಬ್ಬರನ್ನು ಮುಕ್ಕಾಲಿ ದಯಪಾಲಿಸಲು ಬೇಡುವಂತಾಯಿತು. ಬೀಸುತ್ತಿದ್ದ ಗಾಳಿಯ ತೀವ್ರತೆಯಿಂದಾಗಿ ಸಾಧಾರಣ ಮುಕ್ಕಾಲಿಗಳು ತರತರನೆ ನಡುಗುತ್ತಿದ್ದವು.
ಜಮಾಯಿಸಿದ್ದ ಜನರಲ್ಲಿ ಹಲವರು ಕರ್ನಾಟಕದವರೂ ಇದ್ದರು. ದೂರದ ನಾಡಿಗೆ ಹೋದಾಗ ಕನ್ನಡದಲ್ಲಿ ಮಾತನಾಡುವವರು ಸಿಕ್ಕಿದರೇ ಒಂದು ರೀತಿಯ ಸಂತೋಷ! ನಾವು ನಿಂತ ಜಾಗದ ಹತ್ತಿರದಲ್ಲಿಯೇ ಬೆಂಗಳೂರಿನ ಸಹೋದರರರಿಬ್ಬರು ಗ್ರಹಣವನ್ನು ವೀಕ್ಷಿಸುವುದರೊಂದಿಗೆ ಸಂಪ್ರದಾಯಬದ್ಧರಾಗಿ ಮಂತ್ರಜಪವನ್ನೂ ಮಾಡುತ್ತಿದ್ದರು. ಮಕ್ಕಳು ಆಗಲೇ ಸಮುದ್ರಕ್ಕೆ ಇಳಿದಾಗಿತ್ತು. ವಿಡಿಯೋಚಿತ್ರಗಳನ್ನು, ಮತ್ತು ಫೋಟೋಗಳನ್ನು ತೆಗೆದುಕೊಳ್ಳಬೇಕಾಗಿದ್ದರಿಂದ ಮತ್ತು ಆಗಾಗ ಇತರರ ಸಲಕರಣೆಗಳನ್ನು ಮುಟ್ಟುತ್ತಿದ್ದರಿಂದ, ಹಾಗೂ ಜೊತೆಗೆ ಅವುಗಳನ್ನು ಹಿಡಿದುಕೊಂಡು ನನ್ನ ಹಿಂದೆ ತಿರುಗಬೇಕಾಗಿದ್ದರಿಂದ ನಾನೂ ನನ್ನ ಹೆಂಡತಿಯೂ ಕೊನೆಯವರೆಗೂ ಮೈಕೈ ನೀರು ಮಾಡಿಕೊಳ್ಳದೆ ಎಚ್ಚರ ವಹಿಸಬೇಕಾಯಿತು. ಇನ್ನೊಂದು ತಮಾಷೆಯೆಂದರೆ, ಒಬ್ಬ ತನ್ನ ದೂರದರ್ಶಕದ ಮೂಲಕ ಸೂರ್ಯನನ್ನು ನೋಡಿದ ಮೇಲೆ ಪಕ್ಕದಲ್ಲಿ ಸ್ಥಾಪಿತವಾದ ಮತ್ತೊಬ್ಬನ ದೂರದರ್ಶಕದೊಳಗೆ ಇಣುಕುತ್ತಿದ್ದ; ಅಲ್ಲಿ ಕಾಣುತ್ತಿದ್ದದ್ದೂ ಅದೇ!
![](https://blogger.googleusercontent.com/img/b/R29vZ2xl/AVvXsEi46hWHKH-X9etruRJ9OUJejhzGZH-Gx6QMvs7wel6eKSJWB_8ysxxqDtCH-RG-bXfZfAfuLmoPCLYofWjU0wAD_ncDLljszloGENN1OQ5fpmip1IVJmq9YDkbvWWV9u9ZdvJK2FWU6Xb0/s320/DSCN0666.jpg)
![](https://blogger.googleusercontent.com/img/b/R29vZ2xl/AVvXsEhgxfZNljHWJ7KUBcT8nUDeys15FVvuaVQhWU1yxD00oMRe-HXCdf-YNiTftRH0U2SfEzdH_kXUFBkxDYh6UqzO6n_UxJvnZxi0IDEtz4H4Hv5rZLp1ugJ9zrDJpKSb_RGpaJ2wKTEE534/s400/DSCN0672.jpg)
![](https://blogger.googleusercontent.com/img/b/R29vZ2xl/AVvXsEgQoIyw8BUfWuOpIDdM5FuwxVg8d-aZc8sX7h4CEKyGkPpCAcBqNGEObanInPEOuzPi-5UuddxY4ozKbt0z728Oo_StSKNbDr52Mim6lv8jbJ15QjBMegraLx0ZXGweG2WupE86tnzoITg/s320/DSCN0683.jpg)
![](https://blogger.googleusercontent.com/img/b/R29vZ2xl/AVvXsEizXFJ6FnDDu1nTKKgSK2SaTRISzSAQ-gr7c4-m6FXpQpjT3QSSpnWQTPwR04JA_FUsv27MWzozSrYf8OiFfz44HD3dku_pKeFZzyiNe8GoFv8cwSmEAQ2Hu4RmgOyUpBuajxlg_3QApvU/s400/RameshwaramMap.jpg)
ಧನುಷ್ಕೋಟಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮುದ್ರ ಒಂದಿಷ್ಟೂ ಆಳವಿಲ್ಲ. ನಡೆದೇ ಎಷ್ಟೋ ದೂರ ಸುತ್ತಬಹುದು. ಅಲ್ಲದೆ ಅಲ್ಲಿಂದ ಇನ್ನೂ ಹತ್ತು ಕಿಲೋಮೀಟರುಗಳ ದೂರದಲ್ಲಿ ರಾಮಸೇತುವಿದೆ. ಅಲ್ಲಿಗೆ ನಾಲ್ಕು ಗೇರ್ಗಳಿರುವ ವಾಹನಗಳಲ್ಲಿ ಹೋಗಬಹುದು. ಅದೊಂದು ವಿಶಿಷ್ಟ ಅನುಭವ. ಅದನ್ನೂ ಮುಗಿಸಿ, ಸಂಜೆ ಆರೂವರೆಗೆ ಭಾರವಾದ ಉಪ್ಪುದೇಹವನ್ನು ಹೊತ್ತು ರಾಮೇಶ್ವರಕ್ಕೆ ಬಂದು, ಅಲ್ಲಿಂದ ರಾಮನಾಡ್ಗೆ ಹಿಂದಿರುಗಿದೆವು. ರಾತ್ರಿ ಊಟ ಮಾಡುವಾಗ ಏಳೂವರೆ ಘಂಟೆ! ಮಾರನೆ ದಿನ ಮಧುರೆಗೆ ತೆರಳಿ ಅಲ್ಲಿ ದೇವಸ್ಥಾನವನ್ನೂ ನೋಡಿಕೊಂಡು, ಹಾಗೇ ತಿರುಪ್ಪೂರಿನ ಮಾರ್ಗವಾಗಿ ಬಂದು ಕೊನೆಗೆ ನಂಜನಗೂಡಿನ ತಮ್ಮನ ಮನೆ ತಲುಪುವಾಗ ರಾತ್ರಿ ಹತ್ತು ಘಂಟೆ ಮೀರಿತ್ತು.
ಕೊನೆಗೂ ಕಂಕಣ ಸೂರ್ಯಗ್ರಹಣವನ್ನು ನೋಡಬೇಕೆಂಬ ನನ್ನ ಹಲವು ವರ್ಷಗಳ ಕನಸು ನನಸಾಗಿತ್ತು. ನಿಜಕ್ಕೂ ಅದೊಂದು ಅದ್ಭುತ ಅನುಭವ!