Sunday, October 25, 2020

ಕರೋನಾ ವಿರುದ್ಧ ಹೋರಾಡಿ ಜಯ ಗಳಿಸಿದ ವೈದ್ಯ

 ಕರೋನಾ ವಿರುದ್ಧ ಹೋರಾಡಿ ಜಯ ಗಳಿಸಿದ ವೈದ್ಯ

ಕರೋನಾ ರೋಗ ಪ್ರಪಂಚದಾದ್ಯಂತ ಹರಡಿ ಫ಼ೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ಏಳು ತಿಂಗಳುಗಳು ಕಳೆದಿದ್ದವು. ಈ ಸಮಯದಲ್ಲಿ ನಾನು ನನ್ನ ಕ್ನಿನಿಕ್ಕನ್ನು ಯಾವತ್ತೂ ಮುಚ್ಚಿಯೇ ಇರಲಿಲ್ಲ. ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಸರ್ ಬಳಸುತ್ತಿದ್ದೆ. ಅದು ಬಿಟ್ಟರೆ, ಪ್ರತಿಯೊಂದು ರೋಗಿಯನ್ನೂ ಪರೀಕ್ಷೆ ಮಾಡಲೇ ಬೇಕಾದ್ದರಿಂದ, ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ. ಆದರೂ ನನಗೆ ಈ ಖಾಯಿಲೆ ಅಂಟಿರಲಿಲ್ಲ. ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗಲೂ ನೆಗೆಟಿವ್ ಬಂದಿತ್ತು. ನನಗೂ ಕರೋನಾ ರೋಗ ಬರುತ್ತದೆಂದು ನಾನು ಎಣಿಸಿಯೇ ಇರಲಿಲ್ಲ!

ಇದೆಲ್ಲ ಶುರುವಾದದ್ದು ನಮ್ಮ ತಾಯಿ ತೀರಿಕೊಂಡ ನಂತರ. ಕುಟುಂಬದ ಹಿರಿಯ ಮಗನಾದ ನನ್ನ ಅಣ್ಣ ದೂರದ ಬ್ರುನೈ ದೇಶದಲ್ಲಿದ್ದು, ಅಲ್ಲಿಂದ ಯಾವುದೇ ವಿಮಾನ ಪ್ರಯಾಣಕ್ಕೂ ನಿರ್ಬಂಧವಿದ್ದುದರಿಂದ, ನಾನು ಮತ್ತು ನನ್ನ ತಮ್ಮ ಸೇರಿ ಅಮ್ಮನ ಮುಂದಿನ ಕೆಲಸಗಳನ್ನು ಮಾಡಬೇಕಾಯಿತು. ಅವರ ಅಂತ್ಯಕ್ರಿಯೆ ವಿರಾಜಪೇಟೆಯಲ್ಲಿಯೇ ಆಯಿತು. ಅದಾದ ಮಾರನೆಯ ದಿನ ಅಸ್ತಿ ಸಂಗ್ರಹ ಹಾಗೂ ಕಾವೇರಿ ನದಿಯಲ್ಲಿ ವಿಸರ್ಜನೆ ಆಯಿತು.

ನಮ್ಮ ಸಂಪ್ರದಾಯದಲ್ಲಿ, ಅಲ್ಲಿಂದ ಮುಂದೆ ಹನ್ನೆರಡನೆಯ ದಿನದವರೆಗೆ ಅಪರಕ್ರಿಯೆ ನಡೆಯುತ್ತದೆ. ಹದಿಮೂರನೆಯ ದಿನ ಶುಭಸ್ವೀಕಾರ. ಆವತ್ತು ಹಬ್ಬದ ಅಡಿಗೆ ಮಾಡಿ ನೆಂಟರಿಷ್ಟರನ್ನು ಕರೆದು ಔತಣವೀಯುತ್ತೇವೆ. ಕರೋನಾ ಕಾಟವಿದ್ದುದರಿಂದ ನಾವು ಹೆಚ್ಚು ಜನರನ್ನು ನಿರೀಕ್ಷಿಸುವಂತಿರಲಿಲ್ಲ. ಈ ಎಲ್ಲ ಕಲಾಪಗಳಿಗೆ ಪುರೋಹಿತರು, ಬಂಧು-ಬಳಗದವರೆಲ್ಲ ವಿರಾಜಪೇಟೆಯವರೆಗೆ ಬರುವುದಕ್ಕಿಂತ ಮೈಸೂರಿನಲ್ಲಿಯೇ, ನಮ್ಮ ತಂಗಿಯ ಮನೆಯಲ್ಲಿಯೇ, ಮಾಡುವುದೆಂದು ತೀರ್ಮಾನಿಸಿದೆವು.

ಎಂಟನೆಯ ದಿನ ಬೆಳಿಗ್ಗೆ ನನ್ನಕ್ಕ, ನನ್ನ ಪತ್ನಿ ಜೊತೆಯಲ್ಲಿ ಕಾರಿನಲ್ಲಿ ಮೈಸೂರು ತಲುಪಿದೆವು. ಆ ಮಧ್ಯಾಹ್ನ ಮಾರ್ಕೆಟ್ಟಿನಲ್ಲಿ ವಿಶೇಷ ದಿನಗಳಿಗೆ ಬೇಕಾದ ಸಾಮಾನುಗಳನ್ನು ತರಲು ಸುತ್ತಿದೆವು. ಒಂಭತ್ತನೆಯ ದಿನ ಸಂಜೆ ನನಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತು. ಬಹುಶಃ ಅದು ಶುರು!

ಪ್ರತಿದಿನ ನನಗೆ ಜ್ವರ ಬರುತ್ತಲೇ ಇತ್ತು. ಬೆಳಿಗ್ಗೆ ಸ್ವಲ್ಪ ಕಡಿಮೆಯೆಂದು ತೋರುತ್ತಿದ್ದುದರಿಂದ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗಲಿಲ್ಲ. ಆದರೆ, ಸಂಜೆಯಾಗುತ್ತಿದ್ದಂತೆ ಮೈಕೈ ನೋವು, ಜ್ವರ ಹೆಚ್ಚುತ್ತಿತ್ತು. ಇದು ಸಾಮಾನ್ಯ ಶೀತಜ್ವರವಿರಬಹುದೆಂದು ಎರಡು ದಿನ ನಾನು ಮಾತ್ರೆಗಳನ್ನು ತೆಗೆದುಕೊಂಡು ತಳ್ಳಿದೆ. 

ಮೈಸೂರಿಗೆ ಹೋದ ಮೂರನೆಯ ದಿನ ಮಧ್ಯಾಹ್ನ ಇದ್ದಕ್ಕಿದ್ದಂತೆ ಯಾವ ವಾಸನೆಯೂ ತಿಳಿಯದಾಯಿತು! ನನಗೆ ಸಂಶಯವಾಯಿತು, ಇದೇನಾದರೂ ಕರೋನಾ ಖಾಯಿಲೆಯೇ? ಈ ಸಮಯದಲ್ಲಿ ಕೋವಿಡ್-೧೯ರ ಪರೀಕ್ಷೆ ಮಾಡಿಸಿಕೊಂಡು ಏನಾದರೂ ಇದೆಯೆಂದಾದರೆ ಕಾರ್ಯಗಳೂ ನಿಂತುಹೋಗಬಹುದು ಎಂದು ಸುಮ್ಮನಾದೆ. ಆ ಸಂಜೆಯೂ ಜ್ವರವಿತ್ತು, ಆದರೆ ಹಸಿವೆಯೇನೂ ಇಂಗಿರಲಿಲ್ಲ. ತಡ ಮಾಡದೆ ಕ್ರಮಪ್ರಕಾರ ಕೋವೀಡ್-೧೯ರ ಔಷಧಿಗಳನ್ನು ತರಿಸಿಕೊಂಡು ನುಂಗತೊಡಗಿದೆ. ಕಿರಿಯ ಮಗಳು ಜ್ವರಕ್ಕೆ ಇಂಜೆಕ್ಷನ್ ಕೊಟ್ಟಳು. ಹೆಚ್ಚಿನ ಸಮಯ ಮಲಗಿಯೇ ಇರುತ್ತಿದ್ದೆ. ದಿನಕ್ಕೆ ಎರಡು ಸಾರಿ ಆವಿಯನ್ನು ಮೂಗು-ಬಾಯಿಯಿಂದ ತೆಗೆದುಕೊಂಡೆ. ಪ್ರತಿದಿನ ಎರಡು-ಮೂರು ಬಾರಿ ಸ್ನಾನ, ಒದ್ದೆ ಬಟ್ಟೆಯಲ್ಲಿಯೇ ಕಲಾಪಗಳು...... ಸದ್ಯ, ಇನ್ನೆರಡು ದಿನಗಳನ್ನು ಹೇಗಾದರೂ ಕಳೆದರೆ, ಮೈಸೂರಿನ ಕಾರ್ಯಕ್ರಮಗಳು ಮುಗಿಯುತ್ತವೆ. ಅಲ್ಲಿಯವರೆಗೆ ಎಚ್ಚರದಿಂದ ಇರಲು ತೀರ್ಮಾನಿಸಿದೆ.

ಮನೆಯಲ್ಲೂ ಮುಖಕ್ಕೆ ಮಾಸ್ಕ್ ಧರಿಸತೊಡಗಿದೆ. ಯಾರನ್ನೂ ಹತ್ತಿರದಿಂದ ಮಾತನಾಡಿಸಲಿಲ್ಲ. ಬರಬರುತ್ತ ಸುಸ್ತು ಅಧಿಕವಾಗತೊಡಗಿತು. ಕರೋನಾ ಪೀಡೆಯಿದ್ದುದರಿಂದ ಹೆಚ್ಚು ನೆಂಟರನ್ನು ಆಹ್ವಾನಿಸಿರಲಿಲ್ಲ. ಆದರೂ ಹದಿಮೂರನೆಯ ದಿನದ ಕಾರ್ಯಕ್ರಮಕ್ಕೆ ಸುಮಾರು ೬೦-೭೦ ಜನ ಸೇರಿದ್ದರು. ಏನಾದರಾಗಲಿ, ವಿರಾಜಪೇಟೆಗೆ ಹಿಂದಿರುಗಬೇಕು ಎನ್ನುವ ಚಡಪಡಿಕೆ ಶುರುವಾಯಿತು. ಒಬ್ಬ ಬಾಡಿಗೆ ಡ್ರೈವರ್‌ನನ್ನು ಕರೆದುಕೊಂಡು ಊರು ಸೇರಬೇಕೆಂಬ ತವಕದಿಂದ ನನ್ನ ಭಾವನಿಗೆ ಹೇಳಿದೆ. ಅರೆಮನಸ್ಸಿನಿಂದಲೇ ಗೊತ್ತು ಮಾಡಿಕೊಟ್ಟರು.

ಡ್ರೈವರ್ ಬರುವಾಗಲೇ ಕತ್ತಲೆಯಾಗಿತ್ತು. ಆದರೂ ತಡ ಮಾಡದೆ ಹೊರಟೆವು. ರಾತ್ರಿ ಅವನಿಗೆ ಹಿಂದಿರುಗಲು ಬಸ್ ಸೌಕರ್ಯದ ಬಗ್ಗೆ ವಿಚಾರಿಸಿದೆ. ರಾತ್ರಿ ಹತ್ತು ಗಂಟೆಗೆ ಕೊನೆಯ ಬಸ್ ಇತ್ತಾದರೂ ಆ ರಾತ್ರಿ ವೇಳೆ ನಂಬುವಂತಿರಲಿಲ್ಲ. ಆದ್ದರಿಂದ ಅವನನ್ನು ಗೋಣಿಕೊಪ್ಪಲಿನಲ್ಲಿ ಇಳಿಸಿ, ನಾನೇ ಡ್ರೈವ್ ಮಾಡಿಕೊಂಡು ಊರನ್ನು ತಲುಪಿದೆ. 

ಮನೆಯೊಳಗೆ ಬಂದ ಕೂಡಲೇ ಸುಸ್ತು ಬಹಳ ಅಧಿಕವಾಯಿತು, ಅಲ್ಲದೆ ಇದ್ದಕ್ಕಿದ್ದಂತೆ ಉಸಿರಾಡಲೂ ಕಷ್ಟವೆನಿಸತೊಡಗಿತು. ತಡ ಮಾಡದೆ, ಡಾ. ಕಾರಿಯಪ್ಪ ಹಾಗೂ ಡಾ. ದೀಪಕ್‌ರವರಿಗೆ ಫೋನ್ ಮಾಡಿದೆ. ಒಡನೆ ಸರ್ಕಾರಿ ಆಸ್ಪತ್ರೆಯ ಡಾ. ವಿಶ್ವನಾಥ ಶಿಂಪಿಯವರು ಅಲ್ಲಿಂದಲೇ ತುರ್ತು ವಾಹನವನ್ನು ಕಳುಹಿಸಿದರು. ಅದರೊಂದಿಗೆ ಬಂದ ಸಿಬ್ಬಂದಿ ಕೋವಿಡ್-೧೯ ಪರೀಕ್ಷಾ ಕಿಟ್‌ನ್ನು ತಂದಿದ್ದ. ಪರೀಕ್ಷೆ ಮಾಡಿದಾಗ ಕೋವಿಡ್-೧೯ ಪಾಸಿಟಿವ್ ಎಂದು ತಿಳಿಯಿತು. ಅದೇ ವ್ಯಾನ್‌ನಲ್ಲಿ ನೇರವಾಗಿ ಮಡಿಕೇರಿಯ ಕೋವಿಡ್ ಆಸ್ಪತ್ರೆ ತಲುಪಿದೆ. ಕರೋನಾ ರೋಗ ಇಷ್ಟು ತೀವ್ರಗತಿಯಲ್ಲಿ, ಈ ಮಟ್ಟಕ್ಕೆ ಉಲ್ಬಣವಾಗುತ್ತದೆಂದು ನಾನು ಎಣಿಸಿಯೇ ಇರಲಿಲ್ಲ!

ನನ್ನ ಜೀವನದ ೬೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಪತ್ರೆಯ ವಾಸ ನನಗೆ ಒದಗಿ ಬಂದಿತು!

ಕರೋನಾ ವೈರಸ್ ಮತ್ತು ಕೋವಿಡ್-೧೯

ವೈರಸ್ ಅಥವಾ ವೈರಾಣುಗಳು ಭೂಮಿಯ ಮೇಲೆ ವಿಕಾಸ ಹೊಂದಿದ ಮೊದಮೊದಲ ಜೀವಿಗಳು. ಭೂಮಿಯಲ್ಲಿ ನಡೆದ ಹಲವಾರು ಅತ್ಯಂತ ಭಯಂಕರ ಆಘಾತ-ಆಪತ್ತು ಮತ್ತು ಉಪಪ್ಲವ-ದುರಂತಗಳನ್ನು ಎದುರಿಸಿ ಬದುಕಿ ಉಳಿದಿವೆ! ಇದು ವೈರಾಣುಗಳಿಗಿರುವ ಎರಡು ವಿಶೇಷ ಗುಣಗಳಿಂದ ಸಾಧ್ಯವಾಗಿದೆ. 

೧. ವೈರಸ್‌ಗಳು ಏಕಾಣುಜೀವಿಗಳು ಮತ್ತು ಅವುಗಳ ದೇಹ ಯಃಕಶ್ಚಿತ್ ಜೀವದ ಮೂಲದ್ರವ್ಯದಿಂದ ಕೂಡಿದೆ. ಸಂತಾನವೃದ್ಧಿಗೆ ಅವಶ್ಯವಾದ ಜೀವದ್ರವ್ಯಗಳನ್ನು ತಯಾರು ಮಾಡಿಕೊಳ್ಳುವ ಸಾಮರ್ಥ್ಯ ಅವುಗಳಿಗಿಲ್ಲ. ಆದ್ದರಿಂದ ಆ ಜೀವದ್ರವ್ಯಗಳನ್ನು ಪಡೆದುಕೊಳ್ಳಲು ಅವು ಯಾವುದಾದರೂ ಇತರ ಜೀವಿಗಳ ಜೀವಕೋಶವನ್ನು ಅವಲಂಬಿಸಿರುತ್ತವೆ. ಆ ನಿರ್ದಿಷ್ಟ ಜೀವಕೋಶದ ಒಳಹೊಕ್ಕು, ಅದನ್ನು ನಾಶಮಾಡಿ, ತಮಗೆ ಅವಶ್ಯವಿರುವ ಜೀವದ್ರವ್ಯವನ್ನು ಪಡೆದುಕೊಂಡು ಬೆಳೆಯುತ್ತವೆ! ಹಾಗಾಗಿ ಸಾಮಾನ್ಯ ನೆಗಡಿ, ದಢಾರದಿಂದ, ಪೋಲಿಯೋ, ಸರ್ಪಸುತ್ತು, ಏಯ್ಡ್ಸ್, ಡೆಂಗಿಯವರೆಗೆ ಎಲ್ಲ ವೈರಸ್ ರೋಗಗಳೂ ನಮ್ಮ ದೇಹದ ಪ್ರತ್ಯೇಕ ಜೀವಕೋಶವನ್ನು ಧಾಳಿ ಮಾಡುತ್ತವೆ.

೨. ವೈರಾಣುಗಳಿಗೆ ಅವುಗಳ ದೇಹದ ಮೇಲ್ಮೈ ಅಥವಾ ಜೀವದ್ರವ್ಯದ ರೂಪಾಂತರ ಹೊಂದುವ ಗುಣವಿದೆ. ಇದರಿಂದಾಗಿ ಅದೇ ವೈರಸ್ ಸೋಂಕು ಮತ್ತೊಮ್ಮೆ ತಟ್ಟಿದರೆ, ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಗೆ ಅದನ್ನು ಪತ್ತೆ ಹಿಡಿಯಲು ಸಾಧ್ಯವಾಗುವುದಿಲ್ಲ!

ಕೋವಿಡ್-೧೯ ಎಂಬುದು ಕರೋನಾ ವೈರಸ್ ಕುಟುಂಬಕ್ಕೆ ಸೇರಿದ ಹೊಸ ತಳಿ! 

ಚೀನಾ ದೇಶದ ವುಹಾನ್ ನಗರದಲ್ಲಿ ನವೆಂಬರ್-ಡಿಸೆಂಬರ್ ೨೦೧೯ರಲ್ಲಿ ಉದ್ಭವವಾಗಿ, ಇಂದು ಇಡೀ ವಿಶ್ವವನ್ನು ಆವರಿಸಿಕೊಂಡಿದೆ. 

ಕೋವಿಡ್-೧೯ ವೈರಾಣು ಮನುಷ್ಯನ ಶ್ವಾಸಕೋಶದ ಜೀವಕೋಶಗಳನ್ನು ಆಕ್ರಮಿಸುತ್ತವೆ. 

ಮನುಷ್ಯನಿಂದ ಮನುಷ್ಯನಿಗೆ, ಸೀನಿದಾಗ-ಕೆಮ್ಮಿದಾಗ ಉಂಟಾಗುವ ತುಂತುರು ಹನಿಗಳಿಂದ, ಈ ಸಾಂಕ್ರಮಿಕ ರೋಗ ಹರಡುತ್ತದೆ. ಮತ್ತು ಅವು ಆರು ಅಡಿಗಳಿಗಿಂತ ಹೆಚ್ಚು ದೂರ ಹಾರುವುದಿಲ್ಲ. 

ಆದರೆ, ಸುತ್ತಮುತ್ತಲ ವಸ್ತುಗಳ ಮೇಲೆ ಬಿದ್ದು ಅಲ್ಲಿಯೇ ೨-೩ ದಿನಗಳ ಕಾಲ ಜೀವಂತವಾಗಿರುತ್ತವೆ. 

ಒಂದು ಬಾರಿ ನಮ್ಮ ದೇಹವನ್ನು ಹೊಕ್ಕರೆ, ೨ರಿಂದ ೧೪ ದಿನಗಳಲ್ಲಿ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

ಅತ್ಯಂತ ಶೀಘ್ರವಾಗಿ ವೈರಾಣುಗಳು ಶ್ವಾಸಕೋಶವನ್ನು ನಾಶ ಮಾಡುತ್ತವೆ.

ಕರೋನಾ ರೋಗಲಕ್ಷಣಗಳು:

ಜಿಲ್ಲಾ ಕೋವಿಡ್ ಆಸ್ಪತ್ರೆ

೩೫೦ ಹಾಸಿಗೆಗಳಿರುವ ಮಡಿಕೇರಿಯ ಸರ್ಕಾರಿ ಅಸ್ಪತ್ರೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಕೇಂದ್ರವಾಗಿದೆ. ಈ ಅಸ್ಪತ್ರೆಯನ್ನು ಈಗ ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಕರೋನಾ ರೋಗದ ನಿಯಂತ್ರಣಕ್ಕಾಗಿ ಈ ಆಸ್ಪತ್ರೆಯನ್ನು ಅತ್ಯಂತ ಸಮರ್ಥವಾಗಿ ಸುಸಜ್ಜಿತಗೊಳಿಸಲಾಗಿದೆ. ಒಂದು ಕೋಣೆಯಲ್ಲಿ ನಾಲ್ಕು ರೋಗಿಗಳಿರುವ ೨೦ ಐಸಿಯು ಹಾಸಿಗೆಗಳು, ಎಂಟೆಂಟು ಹಾಸಿಗೆಗಳಿರುವ ಸಾಮಾನ್ಯ ವಾರ್ಡ್‌ಗಳು, ಅಲ್ಲದೆ ವಿಶೇಷ ವಾರ್ಡ್‌ಗಳೂ ಇವೆ. 

ನಾನು ಆಸ್ಪತ್ರೆಯನ್ನು ತಲುಪುವಾಗ ರಾತ್ರಿ ೧೧.೩೦ ದಾಟಿತ್ತು. ಉಸಿರಾಡಲು ನನಗೆ ಬಹಳ ಕಷ್ಟವಾಗುತ್ತಿತ್ತು. ಆ ವೇಳೆಗಾಗಲೇ ಡಾ. ಸಿಂಪಿಯವರು ಇಲ್ಲಿಯ ಮುಖ್ಯಸ್ಥ ಡಾ. ರಶೀದ್ ಹಾಗೂ ಡ್ಯೂಟಿ ವೈದ್ಯರಿಗೆ ನನ್ನ ಬಗ್ಗೆ ಹೇಳಿದ್ದರು. ಹೋದೊಡನೆ ನನ್ನ ಎದೆಯ ಸಿ.ಟಿ. ಸ್ಕ್ಯಾನ್ ಮಾಡಿ, ನಂತರ ನೇರವಾಗಿ ಐಸಿಯುಗೆ ನನ್ನನ್ನು ಅಡ್ಮಿಟ್ ಮಾಡಿದರು. ಐಸಿಯು ವಾರ್ಡ್‌ಗಳಲ್ಲಿ ಯಾವುದೇ ಹಾಸಿಗೆಯೂ ಖಾಲಿ ಇರಲಿಲ್ಲವಾದ್ದರಿಂದ, ಅದರ ಪಕ್ಕದಲ್ಲಿಯೇ ಇದ್ದ ಒಂದು ಕೋಣೆಯನ್ನು ನನಗಾಗಿ ಪರಿವರ್ತನೆಗೊಳಿಸಿ ಸುಸಜ್ಜಿತಗೊಳಿಸಲಾಗಿತ್ತು. ಡಾ. ಶ್ರೀಧರ್ ಮೊದಲು ಬಂದು ನನಗೆ ಧೈರ್ಯ ಹೇಳಿ, ಎಲ್ಲ ಏರ್ಪಾಡುಗಳನ್ನು ಒಂದು ಸಾರಿ ಪರಿಶೀಲಿಸಿದರು. ನನ್ನ ಮೂಗಿಗೆ ಆಮ್ಲಜನಕದ ಮಾಸ್ಕ್ ಹಾಕಿದ ನಂತರ ಜೀವ ಬಂದಂತಾಯಿತು! ರಾತ್ರಿಯಿಡೀ ನನಗೆ ಜ್ವರವಿತ್ತೆಂದು ಕಾಣುತ್ತದೆ.

ಪಿಎಂ ಕೇರ್‍ಸ್ (PM Cares)

ಆಸ್ಪತ್ರೆಯಲ್ಲಿ ಕೋವಿಡ್ ರೋಗಕ್ಕೆ ಸಂಬಂಧಪಟ್ಟ ಎಲ್ಲ ಉಪಕರಣಗಳೂ ಪಿಎಂ ಕೇರ್‍ಸ್ ನಿಧಿಯಿಂದಲೇ ಬಂದಿವೆ! ಇದನ್ನು ನೋಡಿದಾಗ ನನಗೆ ಬಹಳ ಹೆಮ್ಮೆಯಾಯಿತು. ನಾವು ನಿಧಿಗೆ ಕಳುಹಿಸಿದ ಹಣ ವ್ಯರ್ಥವಾಗಿಲ್ಲ! 

ಈ ಹಿಂದೆ, ಮಾರ್ಚ್ ತಿಂಗಳಲ್ಲಿ, ಕೊಡಗಿನ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ವೈದ್ಯರುಗಳನ್ನೂ ಕರೆಸಿ ಒಂದು ಸಭೆ ನಡೆಸಿದ್ದರು. ಆಗ ಅವರು “ಎಲ್ಲ ವೈದ್ಯಕೀಯ ಮಿತ್ರರೂ ಕರೋನಾ ಪಿಡುಗನ್ನು ಎದುರಿಸಬೇಕು, ಆ ನಿಟ್ಟಿನಲ್ಲಿ ನೇರವಾಗಿ ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕು, ನಿಮ್ಮ ಯಾವುದೇ ಯೋಜನೆಗೂ ಸರ್ಕಾರದಲ್ಲಿ ಹಣವಿದೆ. ಒಂದು ಬಿಡಿಗಾಸೂ ಪೋಲಾಗುವುದಿಲ್ಲ” ಎಂದು ಹೇಳಿದ ಮಾತು ನಿಜವೆನ್ನಿಸಿತು. ಅದಾದ ಒಂದೇ ವಾರದಲ್ಲಿ ಇಡೀ ಆಸ್ಪತ್ರೆಯನ್ನು ಕೋವಿಡ್ ಕೇಂದ್ರವನ್ನಾಗಿ ಬದಲಾಗಿಸಲಾಗಿತ್ತು! ಸರ್ಕಾರದ ವ್ಯವಸ್ಥೆಯ ಎಲ್ಲ ಇಲಾಖೆಗಳೂ ಒಂದೇ ಉದ್ದೇಶದಿಂದ ಮನಸ್ಸು ಮಾಡಿದರೆ, ಯಾವ ಯೋಜನೆಯನ್ನೂ ಕರಗತಗೊಳಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಇದು ಹೇಳುವಷ್ಟು ಸುಲಭವಾದ ವಿಷಯವಲ್ಲ. ಏಕೆಂದರೆ, ಇಡೀ ಆಸ್ಪತ್ರೆಯ ಪ್ರತಿ ಕೋಣೆಗೂ ಆಮ್ಲಜನಕದ ಕೊಳವೆಗಳನ್ನು ಎಳೆದು ತಂದು, ಪ್ರತಿಯೊಂದು ಹಾಸಿಗೆಗೂ ಆಮ್ಲಜನಕದ ಸರಬರಾಜಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಅಷ್ಟಲ್ಲದೆ, ಉಳಿದ ಎಲ್ಲ ವೈದ್ಯಕೀಯ ಶಾಖೆಗಳನ್ನು ಮಡಿಕೇರಿಯ ಅಶ್ವಿನೀ ಅಸ್ಪತ್ರೆಗೆ ಸ್ಥಳಾಂತರಗೊಳಿಸಲಾಗಿತ್ತು.

ಕೋವಿಡ್-೧೯ ಪಾಸಿಟಿವ್ ಇರುವ ಎಲ್ಲಾ ರೋಗಿಗಳನ್ನೂ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುವುದಿಲ್ಲ. ಹೆಚ್ಚಿನ ಮಂದಿ ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದು, ಯಾರೊಂದಿಗೂ ಬೆರೆಯದೆ, ೧೦ ದಿನಗಳ ಕಾಲ ‘ಸಂಪರ್ಕ ನಿಷೇಧ’ದಲ್ಲಿ ಇದ್ದು ನಿಯಮಿತವಾಗಿ ಔಷಧಿಗಳನ್ನು ಸೇವಿಸಬಹುದು. ಉಸಿರಾಟದ ತೊಂದರೆ ಮತ್ತು ಇನ್ನಾವುದೇ ಕೇಡು ರೋಗಗಳಿದ್ದಲ್ಲಿ ಮಾತ್ರ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಆದರೆ, ಒಂದು ಸಾರಿ ಕೋವಿಡ್-೧೯ ಆಸ್ಪತ್ರೆಗೆ ಸೇರಿದ ನಂತರ, ಅಲ್ಲಿಂದ ಬಿಡುಗಡೆ ಹೊಂದುವ ತನಕ ರೋಗಿಯನ್ನು ಭೇಟಿ ಮಾಡಲು ಯಾರನ್ನೂ ಆಸ್ಪತ್ರೆಯ ಒಳಗೆ ಬಿಡುವುದಿಲ್ಲ.

ಕರೋನಾ ರೋಗದಿಂದ ಆಪತ್ತು ಯಾರಿಗೆ? 

ಕೋವಿಡ್-೧೯ರ ಬಗ್ಗೆ ಜನಸಾಮಾನ್ಯರು ಭಯ ಪಡಬೇಕಾದ ಪ್ರಮೇಯವೇ ಇಲ್ಲ. ಮಕ್ಕಳಲ್ಲಿ ಹಾಗೂ ಯುವವಯಸ್ಸಿನವರಿಗೆ ಈ ರೋಗ ಹೆಚ್ಚಾಗಿ ಬಾಧಿಸುವುದಿಲ್ಲ. ಆದರೆ, ಅಂತಹವರಿಂದ ಅವರ ಸಂಪರ್ಕದಲ್ಲಿರುವ ವಯಸ್ಸಾದವರಿಗೆ ಆಪತ್ತು ತಪ್ಪಿದ್ದಲ್ಲ.

ಉಬ್ಬಸ, ಕ್ಷಯ, ಹಾಗೂ ಆಗಾಗ ಶ್ವಾಸಕೋಶದ ಯಾವುದೇ ತೊಂದರೆಯನ್ನು ಅನುಭವಿಸುತ್ತಿರುವವರಿಗೆ                                      ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧದ ರೋಗವಿರುವವರಿಗೆ                                                                                  ಮಧುಮೇಹ ರೋಗಿಗಳಿಗೆ                                                                                                                                        ಮೂತ್ರಪಿಂಡಗಳ ವಿಫಲತೆ ಇರುವ ರೋಗಿಗಳಿಗೆ                                                                                                                            ನಿಶ್ಶಕ್ತಿ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ

ಮುಂಜಾಗ್ರತಾ ಕ್ರಮಗಳು:

ಅನವಶ್ಯವಾಗಿ, ಯಾವುದೇ ಕೆಲಸವಿಲ್ಲದೆ, ಮನೆಯಿಂದ ಹೊರಗೆ ಬೀದಿ ಸುತ್ತಲು ಹೋಗಕೂಡದು.                                    ಹೊರಗೆ ಯಾವಾಗಲೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರಬೇಕು.                                                                                                    ಕನಿಷ್ಟ ಆರು ಅಡಿಗಳ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.                                                                              ಮನೆಯಿಂದ ಹೊರಗೆ ಹೋದಲ್ಲಿ, ಯಾವುದೇ ವಸ್ತುವನ್ನು, ಮುಖ್ಯವಾಗಿ ಟೇಬಲ್, ಕುರ್ಚಿ, ಕಂಬಗಳು, ಸರಪಣಿ-ಕಂಬಿಗಳು, ಮುಂತಾದುವುಗಳನ್ನು ಅನವಶ್ಯವಾಗಿ ಮುಟ್ಟಕೂಡದು.                                                                                                                  ಕೈಗಳನ್ನು ಆಗಾಗ ಸ್ಯಾನಿಟೈಸರ್‌ನಿಂದ ಶುದ್ಧವಾಗಿಟ್ಟುಕೊಳ್ಳಬೇಕು.                                                                                                  ಮನೆಗೆ ಹಿಂದಿರುಗಿದ ನಂತರ ಮೊದಲು ಉಡುಪುಗಳನ್ನು ಬದಲಿಸಿ, ಕೈಕಾಲುಮುಖ ತೊಳೆದುಕೊಂಡು ನಂತರವೇ ಉಳಿದ ಕೆಲಸ!

ಮೊದಲ ದಿನ: ಸುಸ್ತು ಮತ್ತು ಉಸಿರಾಟದ ತೊಂದರೆಯಿಂದಾಗಿ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ. ಬೆಳಿಗ್ಗೆ ಆರು ಗಂಟೆಗೆ ನನಗೆ ಕ್ರಮಬದ್ಧವಾಗಿ ಕೋವಿಡ್-೧೯ರ ಔಷಧಿಗಳನ್ನು ಕೊಡಲು ಶುರುಮಾಡಿದರು. ನನಗೆ ಎದ್ದು ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಹಲ್ಲುಜ್ಜಲು ಎದ್ದು, ಅಲ್ಲಿಯೇ ಇದ್ದ ಸಿಂಕಿನ ಹತ್ತಿರ ಹೋದರೂ, ಮರುಕ್ಷಣವೇ ಏದುಸಿರು ಬಂದು, ಹಿಂದಿರುಗಿ ಮೂಗಿಗೆ ಆಮ್ಲಜನಕದ ಮಾಸ್ಕ್ ಹಾಕಿಕೊಳ್ಳಬೇಕಾಯಿತು! ಒಂದೊಂದು ಬಾರಿ ಮಗ್ಗಲು ಬದಲಾಯಿಸುವಾಗಲೂ ಸುಸ್ತಾಗಿ ಸುಧಾರಿಸಿಕೊಳ್ಳಲು ಒಂದೆರಡು ನಿಮಿಷಗಳೇ ಬೇಕಾಗುತ್ತಿತ್ತು. ಹಾಗೂ ಹೀಗೂ ಮುಂಜಾನೆಯ ಆಹ್ನಿಕಗಳನ್ನು ಮುಗಿಸಿದೆ.

ಬೆಳಿಗ್ಗೆ ಸುಮಾರು ಎಂಟು ಗಂಟೆಗೆ ದೋಸೆಯನ್ನು ನೀಡಿದರು. ಉಸಿರಾಡಲು ಬಹಳ ಕಷ್ಟವಾಗುತ್ತಿದ್ದುದರಿಂದ ನನಗಂತೂ ಆ ಪರಿಸ್ಥಿತಿಯಲ್ಲಿ ಮಾಸ್ಕ್ ತೆಗೆದು ತಿನ್ನಲು ಕಷ್ಟವೇ ಅಯಿತು. ದೋಸೆಯೊಂದಿಗೆ ಸಾಂಬಾರ್ ಮತ್ತು ಚಟ್ನಿಯಿತ್ತು. ನನಗೆ ಅವುಗಳ ರುಚಿ-ವಾಸನೆ ಒಂದಿಷ್ಟೂ ತಿಳಿಯಲಿಲ್ಲ!

ನಾವು ಉಸಿರಾಡುವಾಗ, ಗಾಳಿಯಿಂದ ಎಷ್ಟು ಆಮ್ಲಜನಕವನ್ನು ನಮ್ಮ ದೇಹ ಹೀರಿಕೊಂಡಿದೆ, ನಮ್ಮ ರಕ್ತದಲ್ಲಿ ಎಷ್ಟು ಆಮ್ಲಜನಕ ಹರಿಯುತ್ತಿದೆ ಎಂಬುದನ್ನು SpO2 ಮಾಪನದಿಂದ ಆಳೆಯಲಾಗುತ್ತದೆ. ಆಕ್ಸಿಮೀಟರ್ ಎಂಬ ಸಣ್ಣದೊಂದು ಯಂತ್ರದಲ್ಲಿ ಕೈಬೆರಳಿನ ತುದಿಯನ್ನು ಇಟ್ಟು ಆ ಮೂಲಕ SpO2ವನ್ನು ತಿಳಿಯಲಾಗುತ್ತದೆ. ಶ್ವಾಸಕೋಶದ ಯಾವುದೇ ರೋಗದಿಂದ ಬಳಲುತ್ತಿರುವ ಒಬ್ಬ ರೋಗಿಯ SpO2 ಶೇಕಡಾ ೯೦ಕ್ಕಿಂತ ಕಡಿಮೆಯಿದ್ದರೆ, ಉಸಿರಾಡಲು ಕಷ್ಟವಾಗುತ್ತಿದೆ ಎಂದರ್ಥ. ನೆನ್ನೆ ನಾನು ಆಸ್ಪತ್ರೆಯನ್ನು ಸೇರುವಾಗ ಇದು ೮೩% ಇತ್ತು ಎಂದರೆ, ನನಗಿದ್ದ ಕರೋನಾ ರೋಗದ ತೀವ್ರತೆ ನಿಮಗೆ ಅರ್ಥವಾಗಬಹುದು! ಆಮ್ಲಜನಕದ ಮಾಸ್ಕ್‌ನ್ನು ನಾನು ಬಳಸುವಾಗಲೂ ೯೨-೯೩% ದಾಟಲಿಲ್ಲ ಮತ್ತು ನಾಡಿ ಬಡಿತದ ವೇಗ ೧೦೦ರಷ್ಟಿತ್ತು. ಐಸಿಯುಗಳಲ್ಲಿ ಒಬ್ಬೊಬ್ಬ ರೋಗಿಯ ಹಾಸಿಗೆಗೂ SpO2, ರಕ್ತದೊತ್ತಡ, ನಾಡಿ ಬಡಿತ, ಇಸಿಜಿ, ಮತ್ತು ಇತರ ವಿವಿಧ ಮೌಲ್ಯಗಳನ್ನು ಅಳೆಯುವ ಮಾನಿಟರ್ ಯಂತ್ರವನ್ನು ಅಳವಡಿಲಾಗಿರುತ್ತದೆ.  
ಹನ್ನೊಂದು ಗಂಟೆಯ ವೇಳೆಗೆ ವೈದ್ಯರ ಮೊದಲನೆ ಸುತ್ತಿನ ರೌಂಡ್ಸ್. ಕೋವಿಡ್ ಆಸ್ಪತ್ರೆಯಲ್ಲಿ ನುರಿತ ಹಾಗೂ ದಕ್ಷ ವೈದ್ಯರುಗಳ ಒಂದು ತಂಡ ನಿಯತವಾಗಿ ಕೆಲಸ ಮಾಡುತ್ತದೆ. ಕೋವಿಡ್-೧೯ ಶ್ವಾಸಕೋಶದ ಖಾಯಿಲೆಯಾದುದರಿಂದ ಈ ತಂಡದಲ್ಲಿ ಮುಖ್ಯವಾಗಿ ಒಬ್ಬ ಅರಿವಳಿಕೆ ತಜ್ಞರು ಇದ್ದೇ ಇರುತ್ತಾರೆ. ನನಗೆ ಚಿಕಿತ್ಸೆ ನೀಡುತ್ತಿದ್ದ ತಂಡದಲ್ಲಿ ಡಾ. ಕಸ್ತೂರಿಯವರಿದ್ದರು. ಅವರು ಈ ಮೊದಲು ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಪರಿಚಯವಿತ್ತು. ಅದೇ ಆಸ್ಪತ್ರೆಯಲ್ಲಿ ನಾನು ದಂತವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ, ಅಲ್ಲದೆ ಭಾರತೀಯ ವೈದ್ಯಕೀಯ ಸಂಸ್ಥೆಯ ಶಾಖೆಯ ಕಾರ್ಯದರ್ಶಿ ಮತ್ತು ಅಧ್ಯಕ್ಷನಾಗಿದ್ದಾಗ ಅವರು ನಮ್ಮ ಕಾರ್ಯಕ್ರಮಗಳಿಗೆ ಬರುತ್ತಿದ್ದರು. 

ಡಾ. ಗುರುದತ್ತ: ಕೋವಿಡ್-೧೯ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳೆಲ್ಲರೂ ಒಂದೇ ರೀತಿಯ ವೈಯ್ಯಕ್ತಿಕ ರಕ್ಷಣಾ ಉಡುಪು, PPE, ಧರಿಸುವುದರಿಂದ ಸುಲಭವಾಗಿ ಗುರುತು ಹಚ್ಚುವುದು ಸಾಧ್ಯವಿಲ್ಲ. ಡಾ. ಕಸ್ತೂರಿಯವರೇ ತಮ್ಮ ಪರಿಚಯ ಮಾಡಿಕೊಂಡರು. ಆಶ್ಚರ್ಯದ ಸಂಗತಿಯೇನೆಂದರೆ, ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ಪ್ರೊ. ಗುರುದತ್ತರವರು ಕಸ್ತೂರಿಯವರ ಗುರುಗಳಾಗಿದ್ದರಂತೆ!

ಕ್ಯಾಪ್ಟನ್ ಪ್ರೊಫೆಸರ್ ಗುರುದತ್ತ, ನನ್ನ ಮೈಸೂರು ಮೆಡಿಕಲ್ ಕಾಲೇಜಿನ ಸಹಪಾಠಿ. ನೂರಾರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ, ವಿಷಯಪಾಂಡಿತ್ಯ, ಶಿಸ್ತು, ನಮ್ರತೆ ಹಾಗೂ ಮಾನವೀಯ ಗುಣಗಳುಳ್ಳ, ದೇಶದಾದ್ಯಂತ ಹೆಸರುವಾಸಿಯಾದ, ಅರಿವಳಿಕೆ ತಜ್ಞ. ನನ್ನ ಪರಿಸ್ಥಿತಿಯನ್ನು ಡಾ. ಕಸ್ತೂರಿಯವರು ಅವನಿಗೆ ಹೇಳಿದ್ದರೆಂದು ತೋರುತ್ತದೆ. ಮಾರನೆಯ ರಾತ್ರಿ ಫೋನ್ ಮಾಡಿ ನನ್ನೊಡನೆ ಮಾತನಾಡಿದ. ಕೋವಿಡ್-೧೯ರ ಅಪಾಯದ ಬಗ್ಗೆ ವಿವರವಾಗಿ ಹೇಳಿ, ನನ್ನಲ್ಲಿ ಧೈರ್ಯ ತುಂಬಿ, ಉಸಿರಾಟದ ಹಲವು ವಿಧಾನಗಳನ್ನು ಹೇಳಿಕೊಟ್ಟ. ಆ ವಿಧಾನಗಳು ಮುಂದೆ ನನಗೆ ಬಹಳ ಸಹಾಯಕ್ಕೆ ಬಂದವು. ಆತ ನನ್ನ ಸ್ನೇಹಿತ ಎನ್ನುವುದೇ ಹೆಮ್ಮೆ! ಗುರು, ಈಗ ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನಲ್ಲಿ ಅರಿವಳಿಕೆ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಆತನ ಉಳಿದ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ:
<https://www.google.com/url?sa=t&source=web&rct=j&url=https://m.youtube.com/watch%3Fv%3D-B-frU_IZlw&ved=2ahUKEwj-8M3wwcfsAhWEYysKHeiSARgQjjgwAHoECAEQAQ&usg=AOvVaw0yyQjgqbkYr4U3EHko7WXL&cshid=1603346529265>

ಆ ರಾತ್ರಿ ಡಾ. ಅಯ್ಯಪ್ಪನವರು ರೌಂಡ್ಸ್ ಬಂದಿದ್ದಾಗ ನನ್ನ ಸಿಟಿ ಸ್ಕ್ಯಾನ್ ತಂದು ತೋರಿಸಿ ವಿವರಿಸಿದರು. ಅವರು ಹೇಳಿದ ವಿಷಯ ಭಯವನ್ನೇ ಉಂಟುಮಾಡುತ್ತಿತ್ತು! ಕರೋನಾ ವೈರಾಣುಗಳು ನನ್ನ ಎರಡೂ ಶ್ವಾಸಕೋಶಗಳನ್ನು, ಅದರಲ್ಲೂ ಮಧ್ಯ ಮತ್ತು ಕೆಳಭಾಗದ ಹಾಲೆಗಳನ್ನು, ತಿಂದು ಹಾಕಿದ್ದವು. ಅವರ ಪ್ರಕಾರ ಸುಮಾರು ೫೭% ಶ್ವಾಸಕೋಶ ನಾಶವಾಗಿತ್ತು. ವೈರಸ್ ನಾಶಕ ಔಷಧಗಳನ್ನು ರೋಗಿಗೆ ಕೊಟ್ಟನಂತರ, ಅದು ದೇಹದಲ್ಲಿ ಕೆಲಸ ಮಾಡಿ, ಮೊದಲು ವೈರಸ್‌ಗಳನ್ನು ಕೊಂದು, ಅವುಗಳ ವಿನಾಶಕಾರ್ಯ ಸ್ಥಗಿತಗೊಂಡ ಮೇಲೆ, ಶ್ವಾಸಕೋಶಗಳು ಚೇತರಿಸಿಕೊಂಡು ಪುನಃ ಉಸಿರಾಟದ ಕೆಲಸದಲ್ಲಿ ಭಾಗಿಯಾಗುತ್ತವೆ. ಇದಕ್ಕೆ ಏನಿಲ್ಲವೆಂದರೂ ೩-೪ ದಿನಗಳು ಹಿಡಿಸುತ್ತವೆ.

ರೋಗಿಗೆ ಈ ಮೊದಲೇ ಶ್ವಾಸಕೋಶ, ಹೃದಯ, ಮೂತ್ರಪಿಂಡಗಳಿಗೆ ಸಂಬಂಧಪಟ್ಟ ವ್ಯಾಧಿಯಿದ್ದರೆ, ಅಥವಾ ಆತನಿಗೆ ರಕ್ತದೊತ್ತಡ, ಮಧುಮೇಹ ರೋಗಗಳಿದ್ದಲ್ಲಿ, ಈ ಮೂರು ದಿನಗಳಲ್ಲಿ ಅತ್ಯಂತ ಸಂದಿಗ್ಧ, ಅಪಾಯಸಂಭವದ, ವಿಷಮಾವಸ್ಥೆಯ ಪರಿಸ್ಥಿತಿ ಒದಗಬಹುದು! ಪುಣ್ಯವಶಾತ್ ನನಗೆ ಇಂತಹ ಯಾವುದೇ ಅನಾರೋಗ್ಯಗಳು ಇರಲಿಲ್ಲ. ಆದರೂ ಒಂದು ರೀತಿಯ ಭಯ ನನ್ನನ್ನು ಕಾಡುತ್ತಲೇ ಇತ್ತು. ಒಂದೊಂದು ಉಸಿರನ್ನೂ ತೂಕಮಾಡಿ ಎಳೆದುಕೊಳ್ಳುತ್ತಿದ್ದೆ ಎನಿಸುತ್ತಿತ್ತು! 

ಊಟದ ವ್ಯವಸ್ಥೆ:  ಬೆಳಿಗ್ಗೆ ೮.೩೦ಕ್ಕೆ ಸರಿಯಾಗಿ ಎಲ್ಲ ರೋಗಿಗಳಿಗೂ ಉಪಹಾರ                                                                              ಸುಮಾರು ೧೧-೧೧.೩೦ಕ್ಕೆ ಹಣ್ಣು ಮತ್ತು ಕುಡಿಯಲು ಗಂಜಿ ಅಥವಾ ಸೂಪ್                                                                        ಮಧ್ಯಾಹ್ನ ೧.೩೦ಕ್ಕೆ ಪುಷ್ಕಳವಾದ ಊಟ; ಜೊತೆಗೆ ಮೊಟ್ಟೆ                                                                                                     ಸಂಜೆ ಕಾಫಿ-ಟೀ ಬಿಸ್ಕೆಟ್                                                                                                                                                                    ರಾತ್ರಿ ಎಂಟು ಗಂಟೆಗೆ ಊಟ                                                                                                                                                                ರಾತ್ರಿ ೧೦ ಗಂಟೆಗೆ ಹಾಲು.                                                                                                                                                                   ಇದು ಎಲ್ಲ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಬರಾಜಾಗುವ ಆಹಾರದ ಪಟ್ಟಿ! ಇದರ ಜೊತೆಗೆ ನರ್ಸ್‌ಗಳಿಂದ ಎಲ್ಲ ರೋಗಿಗಳಿಗೂ ಏನನ್ನೂ ಬಿಸಾಡದೆ, ಹೊಟ್ಟೆತುಂಬಾ ತಿನ್ನಲು ತಾಕೀತು! 

ಎರಡನೆಯ ದಿನ: ನನ್ನ ಉಸಿರಾಟದ ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಗಳಾಗಿರಲಿಲ್ಲ. ಎದ್ದು ಕೂರಲು, ಆಚೀಚೆ ಮಗ್ಗಲು ತಿರುಗಲು ಬುಸುಗುಟ್ಟುತ್ತಿದ್ದೆ. ನಿಧಾನವಾಗಿ ಉಸಿರಾಡುತ್ತ ಮಲಗಿದ್ದಲ್ಲಿ, ದೇಹದಲ್ಲಿ ಮತ್ತಾವುದೇ ಸಮಸ್ಯೆಯೂ ಇರಲಿಲ್ಲ. ಆದರೆ ಸ್ವಲ್ಪ ಹೆಚ್ಚಾಗಿ ಶ್ವಾಸ ಎಳೆದುಕೊಂಡರೂ ಉಸಿರುಗಟ್ಟುತ್ತಿತ್ತು. ಆಸ್ಪತ್ರೆಗೆ ಸೇರುವ ತುರಾತುರಿಯಲ್ಲಿ, ಬರುವಾಗ ಅಗತ್ಯವಾದ ಬಟ್ಟೆಗಳನ್ನು ತಂದಿರಲಿಲ್ಲ. ಮಡಿಕೇರಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಅಲ್ಲದೆ ನನ್ನ ಕೋಣೆಯ ಎಲ್ಲ ಕಿಟಕಿಗಳನ್ನು ಮುಚ್ಚಿದ್ದರೂ ಸುಂಯ್ ಎಂದು ಛಳಿ ಗಾಳಿ ಬೀಸುತ್ತಿತ್ತು.

ಡಾ. ಪ್ರಿಯದರ್ಶಿನಿಯವರು ಮಡಿಕೇರಿ ಸರ್ಕಾರಿ ಅಸ್ಪತ್ರೆಯಲ್ಲಿ ರೋಗಲಕ್ಷಣಶಾಸ್ತ್ರ (Pathology) ತಜ್ಞೆ. ಅವರು ವಿರಾಜಪೇಟೆಯ ಖ್ಯಾತ ದಂತವೈದ್ಯರಾದ ಡಾ. ಮಾದಂಡ ಉತ್ತಯ್ಯನವರ ಸೊಸೆ. ವಿರಾಜಪೇಟೆಯಿಂದ ಪ್ರತಿದಿನ ಮಡಿಕೇರಿಗೆ ಹೋಗಿ ಬರುತ್ತಿದ್ದರು. ಅವರಿಗೆ ಫೋನ್ ಮಾಡಿ ನಮ್ಮ ಮನೆಯಿಂದ ನನಗೆ ಕೆಲವು ವಸ್ತುಗಳನ್ನು ತರಲು ಸಾಧ್ಯವೆ ಎಂದು ಕೇಳಿದೆ. ಸಂತೋಷದಿಂದ ಎರಡು ಮಾತನಾಡದೆ ಒಪ್ಪಿಕೊಂಡರು. ಮಾರನೆಯ ದಿನ, ನನ್ನ ಅವಶ್ಯ ವಸ್ತುಗಳ ಜೊತೆಗೆ ಒಂದು ಉಲನ್ ತೊಪ್ಪಿಯನ್ನೂ ತಂದು ಕೊಟ್ಟರು!

ಅಲ್ಲಿಂದ ಮುಂದೆ ೨-೩ ಬಾರಿ ನನಗೆ ಸಹಾಯ ಮಾಡಿದರು. ಅಲ್ಲದೆ ಪ್ರತಿದಿನ ಬಿಡುವು ಮಾಡಿಕೊಂಡು ವಾರ್ಡಿಗೆ ಬಂದು ನನ್ನನ್ನು ಮಾತನಾಡಿಸಿ ಧೈರ್ಯ ತುಂಬಿದರು. ಅವರ ಸಹಾಯವನ್ನು ನಾನು ಜನ್ಮದಲ್ಲಿ ಮರೆಯುವಂತಿಲ್ಲ!

ಮೂರನೆಯ ದಿನ: ನಿಧಾನವಾಗಿ ಉಸಿರಾಡಲು ಅಭ್ಯಾಸ ಮಾಡಿಕೊಂಡಿದ್ದೆ. ಒಂದೊಂದು ಉಚ್ಚ್ವಾಸವನ್ನೂ ದೀರ್ಘವಾಗಿ ಎಳೆದುಕೊಂಡು ಅಷ್ಟೇ ನಿಧಾನವಾಗಿ ಬಿಡುತ್ತಿದ್ದೆ. ಇದರಿಂದ ದೇಹದ SPO2 ಮಟ್ಟ ೯೫-೯೬% ತಲಪುತ್ತಿತ್ತು. ಹೆಚ್ಚು ರಭಸದಿಂದ ಉಸಿರಾಡಲು ಇನ್ನೂ ಆಗುತ್ತಿರಲಿಲ್ಲ. ರಾತ್ರಿ ಎಷ್ಟೋ ಬಾರಿ ಏನಾಗುವುದೋ ಎಂಬ ಭಯ ಕಾಡುತ್ತಿತ್ತು. ಪ್ರತಿದಿನ ಡಾ. ಕಾರಿಯಪ್ಪ, ಡಾ. ಫಾತಿಮಾ ಮತ್ತು ಡಾ. ದೀಪಕ್ ತಪ್ಪದೆ ಫೋನ್ ಮಾಡಿ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಫೋನ್‌ನಲ್ಲಿ ಒಂದರ್ಧ ನಿಮಿಷ ಮಾತನಾಡಬಲ್ಲವನಾಗಿದ್ದೆ. ಎದ್ದು ಸ್ವಲ್ಪ ಹೊತ್ತು ಕೂರಲು ಸಾಧ್ಯವಾಗಿತ್ತು; ಬಿಸಿ ನೀರು ತರಲು ನಾನೇ ಎದ್ದು ಹೋಗುವಂತಾಗಿದ್ದೆ; ಮಾಸ್ಕ್ ಇಲ್ಲದೆ ಅತ್ತಿತ್ತ ರೂಂನಲ್ಲಿಯೇ ಓಡಾಡಬಲ್ಲವನಾಗಿದ್ದೆ. ಈ ದಿನವನ್ನು ಕಳೆದರೆ ನಾಳೆಯಿಂದ ದೇಹ ಸ್ತಿಮಿತಕ್ಕೆ ಬರಬಹುದೆಂಬ ನಂಬಿಕೆ ಬರತೊಡಗಿತು. ಡಾ. ಕಸ್ತೂರಿಯವರು ದಿನಂಪ್ರತಿ ಒಂದು ಬಾರಿ ರೌಂಡ್ಸ್‌ಗೆ ಬರುತ್ತಿದ್ದರು. ಪ್ರತಿ ಬಾರಿಯೂ ಉಸಿರಾಟದ ವಿಧಾನಗಳನ್ನು; ಅಲ್ಲದೆ ಬೆನ್ನು ಮೇಲೆ ಮಾಡಿಕೊಂಡು ಕವುಚಿ ಮಲಗಿ, ಉಸಿರಾಡಲು ಒತ್ತಿ ಹೇಳುತ್ತಿದ್ದರು. ಇದನ್ನು ನಾನು ಎಡೆಬಿಡದೆ ಪ್ರಯತ್ನಿಸುತ್ತಲೇ ಬಂದಿದ್ದೆ. ಆವತ್ತು ಮಧ್ಯಾಹ್ನ ದಾದಿಯರು ಬಂದು, ABG ಪರೀಕ್ಷೆಯ ಸಲುವಾಗಿ, ನನ್ನ ಮಣಿಕಟ್ಟಿನ ಅಪಧಮನಿಯಿಂದ ರಕ್ತವನ್ನು ಸಂಗ್ರಹಿಸಿದರು. ಅವರು ನಾಡಿಯನ್ನು ಚುಚ್ಚುವಾಗ ಆದ ಅಷ್ಟು ತೀವ್ರವಾದ ನೋವನ್ನು ನಾನು ಈವರೆಗೆ ಅನುಭವಿಸಿರಲಿಲ್ಲ! ನಾನು ಆಸ್ಪತ್ರೆಯಲ್ಲಿದ್ದೇನೆ ಎಂಬ ವಿಚಾರ ತಿಳಿದು ಸರ್ಕಾರಿ ಆಸ್ಪತ್ರೆಯ ಹಲವು ವೈದ್ಯರು ಬಂದು ವಿಚಾರಿಸಿಕೊಂಡು ಹೋದರು. ಅವರಲ್ಲಿ ಹಲವರು ನನಗೆ ಪರಿಚಯವೇ ಇರಲಿಲ್ಲ! ಶಸ್ತ್ರತಜ್ಞ ಡಾ. ನವೀನ್ ಕುಮಾರ್, ಡಾ. ಲೋಕೇಶ್ ಮುಂತಾದವರನ್ನು ಮೊದಲ ಸಾರಿ ನಾನು ಕಂಡಿದ್ದು! 

ಪ್ರತಿದಿನ ಸಂಜೆ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದೆ. ಕಳೆದ ಎರಡು ದಿನಗಳಿಂದ ಅದು ಸಾಧ್ಯವಾಗಿರಲಿಲ್ಲ. ಈವತ್ತು ಹೇಳಲು ಸಾಧ್ಯವಾಗದಿದ್ದರೂ, ಕುಳಿತು ಕೇಳಿದೆ.

ನಾಲ್ಕನೆಯ ದಿನ: ದಿನವಿಡೀ ಉಸಿರಾಟದ ವ್ಯಾಯಾಮ ಮುಂದುವರೆಸಿದೆ. ಆಮ್ಲಜನಕದ ಮಾಸ್ಕ್‌ನೊಂದಿಗೆ, ಈಗ ಸುಲಭವಾಗಿ SpO2 ಮಟ್ಟ ೯೭-೯೮% ತಲುಪುತ್ತಿತ್ತು. ನನ್ನ ನಾಡಿ ಬಡಿತ ಕೂಡ ೬೭-೭೦ಕ್ಕೆ ಇಳಿದಿತ್ತು. ಮಾಸ್ಕ್ ಇಲ್ಲದೆಯೂ ಸ್ವಲ್ಪ ಹೊತ್ತು ಕಳೆಯಬಲ್ಲವನಾಗಿದ್ದೆ! ಸುಲಭವಾಗಿ ಕವುಚಿ ಮಲಗಿ ಉಸಿರಾಡಲು ಅಭ್ಯಾಸ ಮಾಡಿಕೊಂಡಿದ್ದೆ. ನನ್ನ ಇಷ್ಟು ದಿನಗಳ ಪ್ರಯತ್ನ ವ್ಯರ್ಥವಾಗಿರಲಿಲ್ಲ! ನನ್ನ ಶ್ವಾಸಕೋಶಗಳನ್ನು ಹಿಂದಿರುಗಿ ಪಡೆದಿದ್ದೆ! ನಾಳೆಯ ದಿನ ಐಸಿಯುನಿಂದ ವಾರ್ಡಿಗೆ ಕಳುಹಿಸಬಹುದು.

ಐದನೆಯ ದಿನ: ಅಪಾಯದ ದಿನಗಳು ಕಳೆದಿದ್ದವು. ವಾರ್ಡಿಗೆ ಶಿಫ಼್ಟ್ ಮಾಡಬಹುದೆಂದು ವೈದ್ಯರುಗಳು ತೀರ್ಮಾನಿಸಿದರು. ಅಂತೆಯೇ ಮಧ್ಯಾಹ್ನ ನಾನು ಹತ್ತಿರವೇ ಇದ್ದ ಒಂದು ಪ್ರತ್ಯೇಕ ವಾರ್ಡಿಗೆ ಬದಲಾಯಿಸಿಕೊಂಡೆ. ಮೊದಲೇ ಹೇಳಿದಂತೆ ಇಲ್ಲಿಯೂ ಆಮ್ಲಜನಕದ ಸರಬರಾಜು ಇದ್ದೇ ಇತ್ತು. ಆದರೆ ಸ್ವಲ್ಪಸ್ವಲ್ಪ ಹೊತ್ತು ಅದಿಲ್ಲದೆಯೇ ಉಸಿರಾಡಲು ಅಭ್ಯಾಸ ಮಾಡತೊಡಗಿದೆ. ಪುಣ್ಯವಶಾತ್, ಅಪಾಯದ ದಿನಗಳು ಕಳೆದಿದ್ದವು. ಡಾ. ಪ್ರಿಯದರ್ಶಿನಿಯವರು ಮನೆಯಿಂದ ಆಕ್ಸಿಮೀಟರ್ ತಂದು ಕೊಟ್ಟಿದ್ದರು. ಒಟ್ಟು ಏಳು ದಿನಗಳ ಕಾಲ ಕೋವಿಡ್-೧೯ರ ಚಿಕಿತ್ಸೆಯಿದ್ದು, ದಾದಿಯರು ಕ್ರಮಪ್ರಕಾರ ಔಷಧಿಗಳನ್ನು ಮುಂದುವರಿಸಿದರು. 

ಆರನೆಯ ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನನಗೆ ಬೆಳಗಿನ ಉಪಾಹಾರದ ವಾಸನೆ ಗಮನಕ್ಕೆ ಬಂತು! ಬರೋಬ್ಬರಿ ಹತ್ತು ದಿನಗಳ ಕಾಲ ಘ್ರಾಣಶಕ್ತಿಯನ್ನು ಕಳೆದುಕೊಂಡಿದ್ದೆ. ಏಳು-ಎಂಟನೆಯ ದಿನಗಳು ಯಾವುದೇ ವಿಶೇಷ ಘಟನೆಗಳಿಲ್ಲದೆ ಕಳೆದವು. 

ಎಂಟನೆಯ ದಿನ ಬೆಳಿಗ್ಗೆ ರೌಂಡ್ಸ್‌ಗೆ ಬಂದ ವೈದ್ಯರು “ಡಾಕ್ಟರೆ, ಈಗ ನಿಮ್ಮ ಆರೋಗ್ಯ ಬಹುತೇಕ ಸುಧಾರಿಸಿದೆ. ಇನ್ನು ನೀವು ಮನೆಗೆ ಹೋಗುತ್ತೀರಾ?” ಎಂದು ಕೇಳಿದರು. 

ನಾನು ಅವರಿಗೆ ಕೈ ಮುಗಿದು ಹೇಳಿದೆ, “ಡಾಕ್ಟರೆ, ನಾನು ನಿಮ್ಮಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿ. ನನ್ನ ಜೀವ ಉಳಿಸಿದ್ದೀರಿ. ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ, ತಿಳಿವಳಿಕೆಯಿದೆ ನಿಮಗೇ ಇದೆ. ಆದ್ದರಿಂದ ಇದನ್ನು ನೀವೇ ತೀರ್ಮಾನ ಮಾಡಬೇಕು.” 

ಆಕೆಗೆ ಏನು ಹೇಳಬೇಕೆಂದೇ ತೋಚಲಿಲ್ಲ.“ ಸರ್, ನೀವು ನನಗಿಂತ ದೊಡ್ಡವರು. ನೀವು ನನಗೆ ನಮಸ್ಕಾರ ಮಾಡಬಾರದು. ನಿಮ್ಮಂತಹ ಹಿರಿಯ ಡಾಕ್ಟರ ಸೇವೆ ಮಾಡಲು ನನಗೊಂದು ಅವಕಾಶ ಸಿಕ್ಕಿದ್ದೇ ಭಾಗ್ಯ! ಆಗಲಿ, ಈವತ್ತು ಮಧ್ಯಾಹ್ನದ ಮೇಲೆ ನಿಮ್ಮನ್ನು ಡಿಸ್ಚಾರ್ಜ್ ಮಾಡಲು ಹೇಳುತ್ತೇನೆ. ಡಿಸ್ಚಾರ್ಜ್ ಸಮ್ಮರಿ ಬರೆಯುತ್ತೇನೆ,” ಎಂದಳು. ಅವಳ ಕಣ್ಣಂಚಿನಲ್ಲಿ ನೀರು ತುಂಬಿತ್ತು!

ಅಂದು ಸಂಜೆ ಟ್ಯಾಕ್ಸಿ ಮಾಡಿಕೊಂಡು ಮನೆ ಸೇರಿದೆ. ಅಷ್ಟರಲ್ಲಿ ಡಾ. ಕಾರಿಯಪ್ಪ ಮತ್ತು ಡಾ. ಫ಼ಾತಿಮಾ ನಮ್ಮ ಮನೆಗೆ ಅವರ ಆಸ್ಪತ್ರೆಯಿಂದ ಒಂದು ಆಮ್ಲಜನಕದ ಸಿಲಿಂಡರ್‌ನ್ನು ತಂದು ಇರಿಸಿದರು: ತುರ್ತಿನ ಪರಿಸ್ಥಿತಿಗೆ ಇರಲೆಂದು. ಆದರೆ ನಾನು ಅದನ್ನು ಬಳಸುವ ಪ್ರಮೇಯವೇ ಬರಲಿಲ್ಲ. 

ಅಲ್ಲಿಂದ ಒಂದು ತಿಂಗಳ ಕಾಲ ನಾನು ಮನೆಯಲ್ಲಿಯೇ ಇರಲು ಆದೇಶ ಕೊಟ್ಟಿದ್ದರು. ಕೆಲವು ಔಷಧಿ ಮಾತ್ರೆಗಳನ್ನು ನುಂಗಲು ಹೇಳಿದ್ದರು.

ಪುನರ್ಜನ್ಮ ಪಡೆಯಲು ನಾನು ಸಾಯಲಿಲ್ಲ: ಮತ್ತೊಮ್ಮೆ ಹುಟ್ಟಿ ಬಂದೆ! ದೇವರ ಕೃಪೆಯಿಂದ ಅಥವಾ ನನ್ನ ದೃಢ ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ನಾನು ಕೋವಿಡ್-೧೯ನ್ನು ಜಯಿಸಿದೆ, ಎಂದು ನಾನು ಖಂಡಿತ ಹೇಳಲಾರೆ. ಇದಕ್ಕೆ ಆಸ್ಪತ್ರೆಯ ವೈದ್ಯರ, ದಾದಿಯರ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ, ಪ್ರತಿಫಲಾಪೇಕ್ಷೆಯಿಲ್ಲದ, ನಿರಂತರ ಸೇವೆಯೇ ಕಾರಣ! ಮತ್ತು ಅಷ್ಟೇ ನಿಸ್ಪೃಹತೆಯಿಂದ ಈ ವ್ಯವಸ್ಥೆಯನ್ನು ನಿರ್ವಹಿಸಿದ ಸರ್ಕಾರ! ಅವರ ಈ ಉದಾರ ಹೃದಯದ ಸೇವೆಯನ್ನು ನಾನು ಮರೆಯುವಂತಿಲ್ಲ! 

ಕರೋನಾ ಬಗ್ಗೆ ಎಚ್ಚರಿಕೆಯ ನಡೆಗಳು

ಸರ್ಕಾರ ಬದಲಾಗಿದೆ, ದೇಶ ಬದಲಾಗುತ್ತಿದೆ. ಸರ್ಕಾರಿ ಕೋವಿಡ್ ಆಸ್ಪತ್ರೆಗಳು ಸಂಪೂರ್ಣವಾಗಿ ಎಲ್ಲ ಸಲಕರಣೆಗಳೊಂದಿಗೆ ಸುಸಜ್ಜಿತವಾಗಿವೆ. ಅಲ್ಲಿ ಎಲ್ಲ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗಳು ತಮ್ಮ ಜೀವವನ್ನು ಪಣತೊಟ್ಟು ನಿಮ್ಮ ಸೇವೆ ಮಾಡುತ್ತಿದ್ದಾರೆ.                                                                                                                                                                                  ಖಾಸಗಿ ಆಸ್ಪತ್ರೆಗಳ ಬಗ್ಗೆ ಜನರಿಗಿದ್ದ ನಂಬಿಕೆ ಕರೋನಾ ಸಂಕಷ್ಟದ ಸಮಯದಲ್ಲಿ ಅಳಿಸಿಹೋಗಿದೆ.                             ಕರೋನಾ ವಿಶ್ವಕ್ಕೆ ಮರೆಯಲಾಗದ ಪಾಠ ಕಲಿಸಿದೆ! ಸೋಂಕು ಯಾರಿಗೂ, ಯಾವತ್ತೂ, ಹೇಗೂ ಅಂಟಬಹುದು.            ಮುಖಕ್ಕೆ ಮಾಸ್ಕ್ ಧರಿಸಿ; ಕೈಗಳನ್ನು ಆಗಾಗ ಸಾಬೂನು-ಸ್ಯಾನಿಟೈಸರ್‌ನಿಂದ ತೊಳೆಯಿರಿ; ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ - ಇವು ಎಲ್ಲಕ್ಕಿಂತ ಮುಖ್ಯ!                                                                                                                            ಮಕ್ಕಳು ಹಾಗೂ ಯುವಜನತೆಗೆ ಇದು ಅಷ್ಟಾಗಿ ಬಾಧಿಸುವುದಿಲ್ಲ. ಆದರೆ, ಎಲ್ಲರೂ ಸದಾ ಎಚ್ಚರ ವಹಿಸಬೇಕು. ಮನೆಯಲ್ಲಿರುವ ವಯಸ್ಸಾದ ಮಂದಿಗೆ ಸೋಂಕು ಹರಡಬಹುದು.                                                                                          ಜ್ವರ, ಮೈ-ಕೈ ನೋವು, ಶೀತ-ನೆಗಡಿ, ಕೆಮ್ಮಲು ಬಂದರೆ ಸಮೀಪದ ಕೋವಿಡ್ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ. ಅಲ್ಲಿಯ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅವರು ಸಲಹೆ ಮಾಡಿದರೆ ಜಿಲ್ಲಾ ಕೋವಿಡ್ ಕೇಂದ್ರದಲ್ಲಿ ದಾಖಲಾಗಿ.        ಸಿದ್ಧ ಆಹಾರ, ಬೇಕರಿ-ಸಿಹಿತಿಂಡಿ ಅಂಗಡಿಗಳಿಂದ ಯಾವ ವಸ್ತುವನ್ನೂ ಕೊಂಡುಕೊಳ್ಳಬೇಡಿ. ನೀವೂ ತಿನ್ನದಿರಿ, ಇತರರಿಗೂ ಹಂಚಬೇಡಿ.                                                                                                                                                                                    ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತಾಜಾ ತರಕಾರಿ-ಹಣ್ಣುಗಳನ್ನು ಬಳಸಿ. ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರಕುವ ಔಷಧಿಗಳು, ಟಾನಿಕ್‌ಗಳು, ಇನ್ನಿತರ ವಸ್ತುಗಳಿಗೆ ಮಾರುಹೋಗಬೇಡಿ.                                                                        ಬಿಸಿಬಿಸಿಯಾಗಿ ಆಹಾರವನ್ನು ಸೇವಿಸಿ. ಕುಡಿಯುವ ಕಾಫಿ-ಟೀ-ಹಾಲು ಎಲ್ಲವೂ ಬಿಸಿಯಾಗಿರಲಿ.                                                    ಬಿಸಿ ನೀರಿನಿಂದ ಆಗಾಗ ಬಾಯಿ ಮುಕ್ಕಳಿಸಿ. ದಿನಕ್ಕೆರಡು ಬಾರಿ ಬಿಸಿ ಹಬೆಯನ್ನು ಮೂಗು-ಬಾಯಿಯಲ್ಲಿ ಉಸಿರಾಡಿ. ೭೦ ಛ್ನಲ್ಲಿ ಕರೋನಾ ವೈರಾಣುಗಳು ಸಾಯುತ್ತವೆ.                                                                                                                                              ವಾರಕ್ಕೆ ಒಂದು ಹೊತ್ತು ಊಟ ಬಿಟ್ಟು ಉಪವಾಸ ಮಾಡಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.            ಸಾಧ್ಯವಾದಷ್ಟೂ ಮನೆಯಲ್ಲಿಯೇ ಕಾಯಿಪಲ್ಲೆ, ಹಣ್ಣುಗಳನ್ನು ಬೆಳೆಯಿರಿ. ಹಾಲು-ಮೊಸರು, ಮೊಟ್ಟೆ, ಮಾಂಸ ಇವೆಲ್ಲ ಸ್ಥಳೀಯವಾಗಿಯೇ ಉತ್ಪನ್ನವಾಗಲಿ.                                                                                                                                                ಆದಷ್ಟೂ ಸ್ಥಳೀಯ ದಿನಸಿ ಅಂಗಡಿಗಳಲ್ಲಿ ವ್ಯಾಪಾರ ಮಾಡಿ. ಮಾಲ್, ಸ್ವ-ಸಹಾಯ ಅಂಗಡಿಗನ್ನು ದೂರವಿಡಿ. ಅಲ್ಲಿ ವಸ್ತುಗಳನ್ನು ಯಾರು ಯಾರೋ ಮುಟ್ಟಿರುತ್ತಾರೆ.                                                                                                                              ಮನೆಗೆ ತಂದ ಹಾಲು, ತರಕಾರಿ, ಹಣ್ಣು ಮುಂತಾದ ವಸ್ತುಗಳನ್ನು ಮೊದಲು ತೊಳೆದು ಶುದ್ಧ ಮಾಡಿ ನಂತರ ಉಪಯೋಗಿಸಿ.

                                                                                                                                                                                                           -ಡಾ.ನರಸಿಂಹನ್, ವಿರಾಜಪೇಟೆ


Tuesday, October 6, 2020

WILDLIFE MESSAGES 2020

 Sunday, 27 September 2020

WHO IS THE MOST EVOLVED ON OUR PLANET?                                                


Dear friend,

 You may think this, a silly question. All of us know the obvious answer: of course, it is we - the humans - who are the most evolved living beings on the Earth! We are the most intelligent, successful and fit of all. Climbing the tall evolutionary ladder, rung by rung, we have come to occupy the highest position!

             But wait! Let us take a look around. Have you observed a colourful fish swimming in an aquarium? The agile and fluid movements of its wing and tails, its adaptability inside the water to ma
neuver itself in all directions, it is a treat to watch the fish! Hold a flower and feel the marvellous soft petals, its bright colours, its pollen-ridden stamens, and the pleasant fragrance! Where did all this come from? From the bark of the plant or the leaves or roots? Every creation of nature appears to be an absolute wonder!

             I prefer to compare the evolutionary process to a large growing tree. Starting from a small seed, this tree has grown in all directions, adding new and diverse branches, for innumerable number of years. During rough times, some of its large branches broke and fell, some twigs snapped and lost. But come spring, it blooms with full majestic beauty and splendour! Now, which tender leaf do you consider the most recent or which flower the most evolved - of all?

             Friends, this is my theory: Since four billion years, life has existed on this Earth and nature has continuously experimented on them. Of the millions of species of plants and animals that were born on the Earth, only one percent of them remain! Rest of them was pushed to extinction for reasons best known to nature itself: Inadvertent errors, failure to coexist with others, burden to other co-occupants...   

            Nature Always Aims At Perfection! In concordance with the nature’s instincts and grand designs, every species that has remained on the planet, including us, slowly but steadily perfected itself into live masterpieces! This process of achieving absolute excellence naturally continues forever. Therefore, at any given point of time on the timeline of the Earth, every single lifeform on our planet is the most evolved!

             We, as humans, happen to be here and now! As witness to the success of all those who have accomplished the pinnacle of achievement and at the same time participating in that symphonic act of being perfect.

 Let us join hands to make our only Earth, a place where all elements of life can live in health, happiness and harmony. Thank you.

SPECIAL WILDLIFE MESSENGER OF THIS YEAR

Red-whiskered Bulbul (Pycnonotus jocosus)  This is the most common garden bird of India. It has a black crest that is turned forwards and has bright red patches on the cheeks and vent. Melodiously vocal, it feeds on fruits, nectar and small insects. Bulbuls are mostly monogamous. They build an open cup-shaped nest made of rootlets and leaves lined with soft fibre. They live for about 10-11 years.

Total of hand-painted cards made: this year 1930; in 36 years 72,655. Total recipients: this year 1010; in 36 years 13,004.        THE WILDLIFE MESSAGE CARDS are individually hand-painted and sent to individuals throughout the world to mark the Wildlife Week.

ಭೂಮಿಯ ಮೇಲೆ ಎಲ್ಲರಿಗಿಂತ ವಿಕಾಸ ಹೊಂದಿದ ಜೀವಿ ಯಾರು? 

ಮಿತ್ರರೆ,

ಇದೆಂಥ ಬಾಲಿಶ ಪ್ರಶ್ನೆ ಎಂದು ನಿಮಗೆ ಅನ್ನಿಸಬಹುದು. ಭೂಮಿಯ ಮೇಲೆ ಎಲ್ಲರಿಗಿಂತ ವಿಕಾಸ ಹೊಂದಿದ ಜೀವಿಗಳು ನಾವು-ಮಾನವರು- ಅಲ್ಲವೆ? ಎಲ್ಲರಿಗಿಂತ ಬುದ್ಧಿವಂತ, ಯಶಸ್ವಿ ಹಾಗೂ ಸಮರ್ಥ ಜೀವಿಗಳು ನಾವು ಎಂಬುದನ್ನು ವಿಶ್ವಕ್ಕೆ ಸಾಧಿಸಿ ತೋರಿಸಿಲ್ಲವೆ? ಜೀವವಿಕಾಸದ ಎತ್ತರವಾದ ಏಣಿಯನ್ನು ಒಂದೊಂದೇ ಮೆಟ್ಟಿಲು ಹತ್ತಿ ಉತ್ತುಂಗವನ್ನು ತಲುಪಿರುವವರು ನಾವಲ್ಲವೆ!

ಒಂದು ಕ್ಷಣ ತಡೆಯಿರಿ; ನಮ್ಮ ಸುತ್ತುಮುತ್ತಲು ಒಮ್ಮೆ ದೃಷ್ಟಿ ಹಾಯಿಸೋಣ. ಗಾಜಿನ ತೊಟ್ಟಿಯಲ್ಲಿ ಈಜಾಡುತ್ತಿರುವ ಬಣ್ಣಬಣ್ಣದ ಮೀನುಗಳನ್ನು ಗಮನಿಸಿ: ಲೀಲಾಜಾಲವಾಗಿ, ಚಾಕಚಕ್ಯತೆಯಿಂದ ರೆಕ್ಕೆ ಮತ್ತು ಬಾಲವನ್ನಾಡಿಸಿಕೊಂಡು ಓಡಾಡುತ್ತಿರುವ ಅವುಗಳನ್ನು ನೋಡಲು ಎರಡು ಕಣ್ಣುಗಳು ಸಾಲವು! ಅದೆಂಥ ಜಾಣ್ಮೆ, ಅದೆಂಥ ಚಾತುರ್ಯ! ಅದೇ ರೀತಿ, ಒಂದು ಸುಂದರವಾದ ಹೂವನ್ನು ಕೈಯ್ಯಲ್ಲಿ ಹಿಡಿದುಕೊಂಡು ಅನುಭವಿಸಿ: ರೇಷ್ಮೆಯಂತಹ ಆ ಹೂವಿನ ಪಕಳೆಗಳು, ಉಜ್ವಲ ಬಣ್ಣ, ನಾಜೂಕಾದ ಆ ಕೇಸರಗಳು ಮತ್ತು ಮಧುರವಾದ ಪರಿಮಳ! ಆ ಮೃದುತ್ವ, ಆ ಕೋಮಲತೆ, ಇವೆಲ್ಲ ಆ ಹೂವಿಗೆ ಎಲ್ಲಿಂ
ದ ಬಂದವು? ಮರದ ಒರಟು ಕಾಂಡದಿಂದಲೆ, ಎಲೆಗಳಿಂದಲೆ ಅಥವಾ ಬೇರುಗಳಿಂದಲೆ? ನಿಸರ್ಗದ ಒಂದೊಂದು ಸೃಷ್ಠಿಯೂ ಸೌಂದರ್ಯದ ಅಪ್ಪಟವಾದ ಶ್ರೇಷ್ಠ ಹಾಗೂ ಅದ್ಭುತ ರಚನೆ ಅನ್ನಿಸುವುದಿಲ್ಲವೆ? 

ವಿಕಾಸದ ಪ್ರಕ್ರಿಯೆಯನ್ನು ನಾನು ಬೆಳೆಯಿತ್ತಿರುವ ಒಂದು ಬೃಹತ್ ವೃಕ್ಷಕ್ಕೆ ಹೋಲಿಸಲು ಬಯಸುತ್ತೇನೆ. ಒಂದು ಸಣ್ಣ ಬೀಜದಿಂದ ಮೊಳಕೆಯೊಡೆದು ವೇಗವಾಗಿ ಎಲ್ಲ ದಿಕ್ಕುಗಳಲ್ಲಿ, ಅದೆಷ್ಟೋ ಶತಮಾನಗಳ ಕಾಲ ಬೆಳೆದು, ಇಂದು ಹೆಮ್ಮರವಾಗಿ ನಮ್ಮೆದುರು ನಿಂತಿದೆ! ಕಾಲನ ಕ್ರೂರ ಜಾಲಕ್ಕೆ ಸಿಕ್ಕು, ಅದರ ಎಷ್ಟೋ ಕೊಂಬೆಗಳು ತುಂಡರಿಸಿ ಬಿದ್ದುಹೋಗಿರಬಹುದು, ಇನ್ನೆಷ್ಟೋ ಟೊಂಗೆಗಳು ಕಳಚಿಕೊಂಡಿರಬಹುದು. ಆದರೆ, ವಸಂತ ಕಾಲ ಬಂದಾಗ, ಇಡೀ ಮರ ತಳಿರೊಡೆದು ಪುಷ್ಪಗಳನ್ನು ತಳೆದಾಗ... ವಾಹ್! ಸೌಂದರ್ಯವೇ ಮೈದಳೆದು ನಳನಳಿಸುತ್ತಿರುವ ಆ ಮರದಲ್ಲಿ ಎಲ್ಲಕ್ಕಿಂತ ಅತ್ಯಂತ ಹೊಸದಾದ ಚಿಗುರು ಯಾವುದು, ಅಥವಾ ಅತ್ಯಂತ ವಿಕಾಸ ಹೊಂದಿದ ಹೂವು ಯಾವುದು ಎಂದು ಹೇಳಲು ಸಾಧ್ಯವೆ? 

ಮಿತ್ರರೆ, ಇದು ನನ್ನ ವಿಚಾರ ಸರಣಿ: ಭೂಮಿಯ ಮೇಲೆ ಮೊದಲ ಜೀವ ಜನ್ಮತಳೆದು ನಾನ್ನೂರು ಕೋಟಿ ವರ್ಷಗಳಾದುವು. ಅಲ್ಲಿಂದ ಇಲ್ಲಿಯವರೆಗೆ ಪ್ರಕೃತಿಯು, ಇಲ್ಲಿ ಜನಿಸಿದ ಜೀವಿಗಳ ಮೇಲೆ ನಿರಂತರವಾಗಿ ಪ್ರಯೋಗಗಳನ್ನು ನಡೆಸಿದೆ. ಇಳೆಯ ಮೇಲೆ ಹುಟ್ಟಿದ ಅದೆಷ್ಟೋ ಕೋಟಿ ಜೀವ ಪ್ರಭೇದಗಳಲ್ಲಿ ಇಂದು ಉಳಿದಿರುವುದು ಕೇವಲ ಶೇಕಡ ಒಂದರಷ್ಟು ಮಾತ್ರ! ಉಳಿದವು ಹೇಳಹೆಸರಿಲ್ಲದಂತೆ ನಶಿಸಿಹೋಗಿವೆ. ಅವು ಸೃಷ್ಟಿಯ ಪ್ರಯೋಗ ದೋಷಗಳೋ, ಅವು ಭೂಮಿಗೆ ಹೊರೆಯಾದವೋ ಅಥವಾ ನಿಷ್ಪ್ರಯೋಜಕ ಜೀವಿಗಳೆನಿಸಿಕೊಂಡವೋ.... ಕಾರಣ ನಿಸರ್ಗಕ್ಕೆ ಮಾತ್ರ ಗೊತ್ತು!

ಪರಿಪೂರ್ಣತೆಯ ಪರಾಕಾಷ್ಠೆಯೇ ನಿಸರ್ಗದ ಗುರಿ! ಪ್ರಕೃತಿಯ ಈ ಹುಟ್ಟರಿವಿನ ಗುಣ, ಅದರ ಉತ್ಕೃಷ್ಟ ವಿನ್ಯಾಸದ ಸಂಕಲ್ಪ, ಇವುಗಳನ್ನು ಅನುಸರಿಸಿ, ಜಗತ್ತಿನಲ್ಲಿ ಉಳಿದು ಬಾಳಿದ ಎಲ್ಲ ಜೀವಿಗಳೂ ದೃಢವಾಗಿ, ನಿರಂತರವಾಗಿ ವಿಕಸಿತಗೊಂಡು, ಒಂದೊಂದೂ ಸೃಷ್ಟಿಯ ಅತ್ಯಂತ ಕೌಶಲ್ಯದ ಕಲಾಕೃತಿಗಳಾಗಿ ರೂಪುಗೊಂಡಿವೆ! ಈ ಕಾರ್ಯಗತಿ ಹೀಗೆಯೇ ಮುಂದುವರಿಯುವುದೂ ನಿಸರ್ಗದ ಸಹಜ ಲಕ್ಷಣವೇ ಆಗಿದೆ. ಆದ್ದರಿಂದ ಈ ಭೂಮಿಯ ಯಾವುದೇ ನಿರ್ದಿಷ್ಟ ಕಾಲಘಟ್ಟದಲ್ಲಿಯೂ, ಇಲ್ಲಿರುವ ಪ್ರತಿಯೊಂದು ಜೀವಿಯೂ ಅತ್ಯಂತ ವಿಕಾಸ ಹೊಂದಿದ ಜೀವಿಯೇ ಆಗಿದೆ!

ನಾವು, ಮನುಷ್ಯರು, ಇಂದೀಗ, ಇಲ್ಲಿದ್ದೇವೆ. ಉತ್ಕೃಷ್ಟತೆಯನ್ನು ಸಾಧಿಸಿರುವ ಇತರ ಜೀವಿಗಳ ಯಶಸ್ಸಿಗೆ ಸಾಕ್ಷಿಗಳಾಗಿ, ಮತ್ತು ಆ ಸಾಧನೆಯ ಪ್ರಕ್ರಿಯೆಯಲ್ಲಿ, ಸಾಮರಸ್ಯದ ವೈದೃಶ್ಯದಲ್ಲಿ ನಾವೂ ಭಾಗಿಗಳಾಗಿ! 

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ. 

ವಂದನೆಗಳು. 

 ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ: ಕೆಮ್ಮೀಸೆ ಪಿಕಳಾರ : ಹೂದೋಟಗಳಲ್ಲಿ ಲವಲವಿಕೆಯಿಂದ ಹಾಡುತ್ತಾ, ಹಾರಾಡುತ್ತಾ ಸಂತೋಷದ ವಾತಾವರಣವನ್ನೇ ಸೃಷ್ಟಿಸುವ ಈ ಹಕ್ಕಿಗೆ ತಲೆಯ ಮೇಲೆ  ಮುಂದಕ್ಕೆ ಬಾಗಿರುವ ಕಪ್ಪು ಕಿರೀಟ; ಕೆನ್ನೆ ಮತ್ತು ಕಿಬ್ಬೊಟ್ಟೆಯ ಮೇಲೆ ಅಚ್ಚ ಕೆಂಪು ಮಚ್ಚೆಗಳು. ಹೂ ಮಕರಂದ, ಹಣ್ಣುಗಳು ಮತ್ತು ಸಣ್ಣ ಕೀಟಗಳೇ ಆಹಾರ. ಪಿಕಳಾರಗಳ ಆಯಸ್ಸು ಸುಮಾರು ೧೦-೧೧ ವರ್ಷ; ಸಾಧಾರಣವಾಗಿ ಏಕಪತಿತ್ತ್ವ ಅನುಸರಿಸುತ್ತವೆ. ಗಿಡಗಂಟಿಗಳ ಕವಲುಗಳಲ್ಲಿ, ನಾರು-ಬೇರುಗಳಿಂದ ಕೂಡಿದ, ಒಳಗೆ ಮೃದುವಾದ ಬಟ್ಟಲಾಕಾರದ ಗೂಡು ಕಟ್ಟುತ್ತವೆ. 

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೧೯೩೦; ಕಳೆದ ೩೬ ವರ್ಷಗಳಲ್ಲಿ ಒಟ್ಟು ೭೨,೬೫೫

ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧೦೧೦; ಕಳೆದ ೩೬ ವರ್ಷಗಳಲ್ಲಿ ಒಟ್ಟು ೧೩,೦೦೪. 



ಕಂಕಣ ಸೂರ್ಯಗ್ರಹಣ 2019

 "ಕಂಕಣ ಸೂರ್ಯಗ್ರಹಣ"

ವಿ. ಸೂ: ಗ್ರಹಣಗಳ ಬಗ್ಗೆ ವಿಶ್ವವಿಖ್ಯಾತರಾಗಿರುವ ಫ಼್ರೆಡ್ ಎಸ್ಪನ್ಯಾಕ್ ಎಂಬುವವರ ಕರಾರುವಕ್ಕಾದ ಲೆಕ್ಕಾಚಾರವನ್ನು ಈ ಲೇಖನದಲ್ಲಿ ಬಳಸಲಾಗಿದೆ.

ಇದೇ ಡಿಸೆಂಬರ್ ೨೬ನೇ ತಾರೀಕು, ಗುರುವಾರ ಬೆಳಿಗ್ಗೆ ಕೊಡಗಿನಲ್ಲಿ ಅತ್ಯಂತ ಅಪರೂಪವಾದ ಸಂಪೂರ್ಣ (ಖಗ್ರಾಸ) ಸೂರ್ಯಗ್ರಹಣ ಘಟಿಸಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ ಮತ್ತು ಆಗ ಚಂದ್ರನು ಸೂರ್ಯನ ಮುಂದೆ ಹಾದು ಹೋಗುತ್ತಾನೆಂದು ನಿಮಗೆಲ್ಲ ಗೊತ್ತೇ ಇದೆ. ಈ ಬಾರಿಯ ವಿಶೇಷ ಗ್ರಹಣವನ್ನು "ಕಂಕಣ ಸೂರ್ಯಗ್ರಹಣ" ಎನ್ನುತ್ತಾರೆ. 

"ಕಂಕಣ ಸೂರ್ಯಗ್ರಹಣ" ಎಂದರೇನು?

ಆಕಾಶದಲ್ಲಿ ನಾವು ನೋಡುವಾಗ, ಸೂರ್ಯ ಮತ್ತು ಚಂದ್ರ, ಇಬ್ಬರ ಗಾತ್ರವೂ ’ತಟ್ಟೆ’ಯ ರೀತಿ, ಒಂದೇ ಸಮನಾಗಿ ತೋರುತ್ತದಲ್ಲವೆ? ಖಗ್ರಾಸ ಸೂರ್ಯಗ್ರಹಣವಾದಾಗ, ಚಂದ್ರ ಸೂರ್ಯನ ಮುಂಭಾಗದಲ್ಲಿ ಹಾದುಹೋಗುತ್ತದೆ. ಇಲ್ಲಿ ನಾವೆಲ್ಲ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ: 

೧. ಮೊದಲಿಗೆ ಸೂರ್ಯ-ಚಂದ್ರರ ಪರಸ್ಪರ ಗಾತ್ರ: ಸೂರ್ಯನ ವ್ಯಾಸ ಅಂದಾಜು ೧೪ ಲಕ್ಷ ಕಿಮೀ ಮತ್ತು ಚಂದ್ರನ ವ್ಯಾಸ ಬರೇ ಮೂರೂವರೆ ಸಾವಿರ ಕಿಮೀ. ಇನ್ನು ಭೂಮಿಯಿಂದ ಸೂರ್ಯ-ಚಂದ್ರರ ಪರಸ್ಪರ ದೂರ: ಸೂರ್ಯ ನಮ್ಮಿಂದ ಸುಮಾರು ೧೫ ಕೋಟಿ ಕಿಮೀ ದೂರದಲ್ಲಿದ್ದರೆ, ಚಂದ್ರನ ದೂರ ಬರೇ ೩ ಲಕ್ಷದ ೭೫ ಸಾವಿರ ಕಿಮೀಗಳು. ಸೂರ್ಯ-ಚಂದ್ರರ ಗಾತ್ರ ಮತ್ತು ಅವರು ನಮ್ಮಿಂದ ಇರುವ ಪರಸ್ಪರ ದೂರ ಇವುಗಳನ್ನು ತಾಳೆ ಹಾಕಿದರೆ ಒಂದು ಆಶ್ಚರ್ಯಕರ ಸಂಗತಿ ನಮ್ಮ ಗಮನಕ್ಕೆ ಬರುತ್ತದೆ. ಅದೇನೆಂದರೆ, ಸೂರ್ಯ-ಚಂದ್ರರ ಗಾತ್ರ ಮತ್ತು ಅವರಿಬ್ಬರು ನಮ್ಮಿಂದ ಇರುವ ದೂರ ಎರಡೂ ಕೂಡ ಪರಸ್ಪರ ೪೦೦ ಪಟ್ಟು ಹೆಚ್ಚು! (೧೪,೦೦,೦೦೦ % ೩೫೦೦ = ೪೦೦ ಮತ್ತು ೧೫,೦೦,೦೦,೦೦೦ % ೩,೭೫,೦೦೦ = ೪೦೦!) ಹೀಗಾಗಿ ನಮಗೆ ಆಕಾಶದಲ್ಲಿ ಇಬ್ಬರೂ ಒಂದೇ ಗಾತ್ರದಲ್ಲಿ ಅಂದರೆ, ಅರ್ಧ ಡಿಗ್ರಿ ಅಳತೆಯ ಬಿಲ್ಲೆಗಳಂತೆ ಕಾಣಿಸುತ್ತಾರೆ.

೨. ಸೂರ್ಯ ಗ್ರಹಣದ ದಿನ ಅಮಾವಾಸ್ಯೆ. ವರ್ಷದಲ್ಲಿ ತಿಂಗಳಿಗೊಂದರಂತೆ ೧೨-೧೩ ಅಮಾವಾಸ್ಯೆಗಳಿರುತ್ತವೆ. ಎಲ್ಲ ಅಮಾವಾಸ್ಯೆಯ ದಿನಗಳಂದೂ ಗ್ರಹಣ ಸಂಭವಿಸುವುದಿಲ್ಲ. ಏಕೆಂದರೆ, ಭೂಮಿಯು ಸೂರ್ಯನನ್ನು ಸುತ್ತುವ ಕಕ್ಷೆ (ಕ್ರಾಂತಿವೃತ್ತ) ಮತ್ತು ಚಂದ್ರನು ಭೂಮಿಯನ್ನು ಸುತ್ತುವ ಕಕ್ಷೆ (ಚಾಂದ್ರಕಕ್ಷೆ) ಇವೆರಡೂ ಪರಸ್ಪರ ೫ ಡಿಗ್ರಿ ೭ ನಿಮಿಷ ವಾಲಿಕೊಂಡಿವೆ. ಯಾವ ಅಮಾವಾಸ್ಯೆಯಂದು ಸೂರ್ಯ-ಭೂಮಿ-ಚಂದ್ರ ಅವರವರ ಪಥದಲ್ಲಿ ಚಲಿಸುತ್ತಿರುವಾಗ, ಮೂವರೂ ಒಂದೇ ಮಟ್ಟದಲ್ಲಿ ಬಂದಾಗ
ಮಾತ್ರ ಸೂರ್ಯಗ್ರಹಣವಾಗುತ್ತದೆ.

೩. ಗ್ರಹಣ ಸಂಭವಿಸುತ್ತಿರುವಾಗ ಸೂರ್ಯನ ಬಿಂಬ ಸ್ವಲ್ಪ ಸ್ವಲ್ಪವಾಗಿ ಮುಚ್ಚುತ್ತಾ ಹೋದಂತೆ, ಅದು ಚಂದ್ರನಿಂದಾಗುತ್ತಿರುವ ಪ್ರಕ್ರಿಯೆ ಎಂದು ನಮಗೆ ಗೊತ್ತಿದ್ದರೂ, ನಂಬಲು ಸಾಧ್ಯವಾಗುವುದಿಲ್ಲ. ಸೂರ್ಯನ ಪ್ರಖರ ಬೆಳಕಿನಲ್ಲಿ ನಮಗೆ ಆ ಜಾಗದಲ್ಲಿ ಚಂದ್ರನಿದ್ದಾನೆ ಎಂದು ಎಷ್ಟು ಪ್ರಯತ್ನ ಪಟ್ಟರೂ ಅಲ್ಲಿ ಚಂದ್ರನು ನಮಗೆ ಕಾಣುವುದಿಲ್ಲ. 

೪. ನೋಡಲು ಇಬ್ಬರ ಗಾತ್ರವೂ ಒಂದೇ ಆಗಿರುವುದರಿಂದ, ಸೂರ್ಯನ ಬಿಂಬವನ್ನು ಚಂದ್ರನು ಸಂಪೂರ್ಣವಾಗಿ ಮುಚ್ಚಿ, ಸ್ವಲ್ಪ ಸಮಯ ಕತ್ತಲು ಆವರಿಸುತ್ತದೆ! ಇದೊಂದು ಅನಿರ್ವಚನೀಯ ಅನುಭವ! ಪ್ರಕೃತಿಯ ಈ ಅದ್ಭುತ ಸನ್ನಿವೇಶಕ್ಕೆ ಎಲ್ಲ ಜೀವರಾಶಿಗಳೂ ಪ್ರತಿಕ್ರಯಿಸುತ್ತವೆ! 

೫. ಹಾಗೆಂದ ಮಾತ್ರಕ್ಕೆ ಪ್ರತಿಯೊಂದು ಖಗ್ರಾಸ ಗ್ರಹಣವೂ ಒಂದೇ ರೀತಿ ಇರುವುದಿಲ್ಲ. ಗ್ರಹಣ ಘಟಿಸುವ ಸಮಯ, ಗ್ರಹಣದ ಸ್ಥಳ, ಅವಧಿ, ಎಲ್ಲವೂ ವ್ಯತ್ಯಾಸವಾಗುತ್ತವೆ. ಇದಕ್ಕೆ ಕಾರಣ, ಭೂಮಿ-ಸೂರ್ಯನ ಸುತ್ತ ಮತ್ತು ಚಂದ್ರ-ಭೂಮಿಯ ಸುತ್ತ ಪರಿಭ್ರಮಿಸುವ ಪಥ ವೃತ್ತಾಕಾರವಾಗಿ ಇರುವುದಿಲ್ಲ. ಅದನ್ನು ದೀರ್ಘವೃತ್ತ ಎನ್ನುತ್ತೇವೆ. ಹಾಗೆಂದರೆ ವರ್ಷದ ಕೆಲವು ದಿನಗಳು ಭೂಮಿ ಸೂರ್ಯನ ಹತ್ತಿರವಾಗಿಯೂ (ಪುರರವಿ), ಇನ್ನು ಕೆಲವು ದಿನ ಸೂರ್ಯನಿಂದ ದೂರವಾಗಿಯೂ (ಅಪರವಿ) ಇರುತ್ತದೆ. ಸ್ವಾಭಾವಿಕವಾಗಿಯೇ ಯಾವಾಗ ಭೂಮಿ ಸೂರ್ಯನ ಹತ್ತಿರವಾಗುತ್ತದೆಯೋ ಆವಾಗ ಸೂರ್ಯನ ಗಾತ್ರ ನಮಗೆ ಸ್ವಲ್ಪ ದೊಡ್ಡದಾಗಿಯೂ, ಯಾವಾಗ ದೂರವಾಗಿರುತ್ತದೆಯೋ ಆವಾಗ ಅದರ ಗಾತ್ರ ಸ್ವಲ್ಪ ಸಣ್ಣದಾಗಿಯೂ ಕಾಣುತ್ತದೆ. ಈ ವ್ಯತ್ಯಾಸ ಬರೇ ೭% ಆಗಿರುವುದರಿಂದ ಬರಿಗಣ್ಣಿಗೆ ನಮಗೆ ಈ ವ್ಯತ್ಯಾಸ ಗೊತ್ತಾಗುವುದೇ ಇಲ್ಲ. ಇದು ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಚಂದ್ರನಿಗೂ ಅನ್ವಯಿಸುತ್ತದೆ. 

ಮುಂದಿನ ವಾರ, ಅಂದರೆ ಡಿಸೆಂಬರ್ ೨೬ರಂದು ಘಟಿಸುವ ಸಂಪೂರ್ಣ ಸೂರ್ಯ ಗ್ರಹಣವು ಈ ವಿಚಾರದಲ್ಲಿ ವಿಶೇಷತೆಯನ್ನು ಪಡೆದಿದೆ. ಅಂದು ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಸ್ವಲ್ಪ ಹೆಚ್ಚು ದೂರದಲ್ಲಿ ಇರುತ್ತಾನಾದ್ದರಿಂದ ಅವನ ಗಾತ್ರ ತುಸು ಸಣ್ಣದಾಗಿ ಗೋಚರಿಸುತ್ತದೆ. ಸೂರ್ಯನ ಬಿಂಬವನ್ನು ಆವರಿಸಿದಾಗ ಚಂದ್ರನ ತಟ್ಟೆ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಹಾಗಾಗಿ ಚಂದ್ರನು ಸೂರ್ಯನ ಮಧ್ಯೆ ಬಂದಾಗ ನಡುವಿನಲ್ಲಿ ಕಪ್ಪನೆಯ ಚಂದ್ರನೂ, ಅವನ ಸುತ್ತಲೂ ಸೂರ್ಯನ ಬೆಳಕಿನ ವೃತ್ತವೂ ಕಾಣಿಸುತ್ತದೆ. ಗ್ರಹಣದ ಮಧ್ಯಕಾಲದಲ್ಲಿ ಇದು ಸುಂದರವಾದ ಬಳೆಯ ಹಾಗೆ ಕಂಡುಬರುವುದರಿಂದ, ಈ ಗ್ರಹಣವನ್ನು ಕಂಕಣ ಸೂರ್ಯಗ್ರಹಣ ಎನ್ನುತ್ತಾರೆ.   

ಕಟ್ಟೆಚ್ಚರಿಕೆ!

ಗ್ರಹಣವಾಗುವ ಯಾವುದೇ ಸಮಯದಲ್ಲೂ ಬರಿಗಣ್ಣಿನಿಂದ ಸೂರ್ಯನನ್ನು ನೋಡಲೇಬೇಡಿ. ಹಗಲಿನ ಯಾವುದೇ ಸಮಯದಲ್ಲಿಯೂ ಸೂರ್ಯನನ್ನು ನೇರವಾಗಿ ನೋಡಬಾರದು. ಸಾಮಾನ್ಯವಾಗಿ ನಾವು ಯಾರೂ ಕಣ್ಣೆತ್ತಿ ಸೂರ್ಯನನ್ನು ನೋಡುವುದೇ ಇಲ್ಲ. ಏಕೆಂದರೆ ಯಾವಾಗಲೂ ಸೂರ್ಯ ಅಲ್ಲಿದ್ದೇ ಇರುತ್ತಾನೆ, ಅವನಲ್ಲಿ ಯಾವ ವಿಶೇಷತೆ? ಆದರೆ, ಒಂದು ಗ್ರಹಣದ ದಿವಸ ಆಕಾಶದಲ್ಲಿ ಒಂದು ವಿಶೇಷ ಘಟನೆ ಸಂಭವಿಸುತ್ತದೆ ಎನ್ನುವ ಅಂಶ, ನಮ್ಮ ದೃಷ್ಟಿಯನ್ನು ಅತ್ತ ನೋಡುವಂತೆ ಮಾಡುತ್ತದೆ. ಆದರೆ ಹಾಗೆ ನೇರವಾಗಿ ಸೂರ್ಯನನ್ನು ನೋಡುವುದು ಅಪಾಯ. ಸನ್‌ಗ್ಲಾಸ್ ಅಥವಾ ತಂಪು ಕನ್ನಡಕ ಹಾಕಿಕೊಂಡು ನೋಡುವುದೂ ಅಪಾಯ! ಹಾಗೆ ನೋಡುವುದರಿಂದ ಕಣ್ಣಿನ ರೆಟಿನಾ ಪರದೆ ಸುಟ್ಟುಹೋಗುವ ಸಾಧ್ಯತೆಯಿದೆ. ಗ್ರಹಣವನ್ನು ವಿಶೇಷ ಕನ್ನಡಕವನ್ನು ಬಳಸಿಯೇ ನೋಡಬೇಕು. ಪಿನ್‌ಹೋಲ್‌ನಿಂದ ಅಥವಾ ಎಕ್ಸ್‌ರೇ ಹಾಳೆಯನ್ನು ಮೂರು ಮಡಿಕೆ ಮಡಿಸಿ ನೋಡಬಹುದು. ಪರೋಕ್ಷವಾಗಿ ನೋಡಬಹುದಾದ ರೀತಿಗಳು: ಹಂಚಿನ-ಹುಲ್ಲಿನ ಮನೆಗಳಲ್ಲಿ ಮೇಲೆ, ಸೂರಿನ ಸಣ್ಣ ಸಂದುಗಳಿಂದ ಒಳಬರುವ ಸೂರ್ಯನ ಕಿರಣಗಳು ಗೋಡೆಯ ಮೇಲೆ ಬಿದ್ದಾಗ ಅದು ಗ್ರಹಣದ ರೂಪವನ್ನೇ ಪಡೆದಿರುತ್ತದೆ. ಗಾಢಬಣ್ಣದ ನೀರಿನಲ್ಲಿ ಅಥವಾ ಸೆಗಣಿಯ ನೀರಿನಲ್ಲಿ ಸೂರ್ಯನ ಪ್ರತಿಫಲನವನ್ನು ನೋಡುವುದರಲ್ಲಿ ಯಾವುದೇ ಅಪಾಯವಿಲ್ಲ.

ಸಾಮಾನ್ಯವಾಗಿ ಯಾವುದೇ ಖಗ್ರಾಸ ಸೂರ್ಯಗ್ರಹಣದಲ್ಲಿಯೂ ಚಂದ್ರನ ಬಿಂಬ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವ ಕಾಲ ಅತ್ಯಲ್ಪ, ಅಂದರೆ ಒಂದು-ಒಂದೂವರೆ ನಿಮಿಷ. ಬಹಳ ಹೆಚ್ಚೆಂದರೆ ಏಳೂವರೆ ನಿಮಿಷ. ಮತ್ತು ಈ ಅಪೂರ್ವ ಗ್ರಹಣ ಭೂಮಿಯ ಮೇಲೆ ಬರೇ ಅರ್ಧ ಕಿಲೋಮೀಟರ್ ವಿಸ್ತಾರದ ಪಟ್ಟಿಯಲ್ಲಿ ಮಾತ್ರ ಕಂಡುಬರುತ್ತದೆ. ಚಂದ್ರನ ಬಿಲ್ಲೆ ಸೂರ್ಯನದಕ್ಕಿಂತ ಚಿಕ್ಕದಾಗಿರುವುದರಿಂದ ಈ ವಿಸ್ತಾರ ಹೆಚ್ಚುತ್ತದೆ. ಡಿಸೆಂಬರ್ ೨೬ರಂದು ಬೆಳಿಗ್ಗೆ ಅಂದಾಜು ೮.೦೫ಕ್ಕೆ ಪ್ರಾರಂಭವಾಗಿ, ಹಗಲು ೧೦.೦೩ಕ್ಕೆ ಮುಕ್ತಾಯಗೊಳ್ಳುವ ಈ ಗ್ರಹಣ, ಕೊಡಗಿನ ಮಟ್ಟಿಗೆ, ಉತ್ತರದಲ್ಲಿ ಮಡಿಕೇರಿಯಿಂದ ಮತ್ತು ದಕ್ಷಿಣದಲ್ಲಿ ಕುಟ್ಟದವರೆಗೆ ಕಾಣಬಹುದು. ಆದರೆ, ಸುಮಾರು ೪೦ ಕಿಮೀ ಅಗಲದ ಈ ಪಟ್ಟಿಯಲ್ಲಿ ಕೊಡಗಿನ ಕೂಡಿಗೆ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲೀಪೇಟೆ ನಗರಗಳು ಈ ಬಾರಿಯ ಸಂಪೂರ್ಣ ಗ್ರಹಣದಲ್ಲಿ ಕಾಣುವುದಿಲ್ಲ. 

ಕಂಕಣ ಸೂರ್ಯಗ್ರಹಣವಾದಾಗ ಚಂದ್ರನು ಪೂರ್ವದ ಕಡೆಯಿಂದ ನಿಧಾನವಾಗಿ ಸೂರ್ಯನ ಬಿಂಬವನ್ನು ಮುಚ್ಚುತ್ತಾ
ಪಶ್ಚಿಮದೆಡೆಗೆ ಹಾದು ಹೋಗುವುದನ್ನು ಕಾಣುವಿರಿ. ಗ್ರಹಣದ ಮಧ್ಯ ಸಮಯದಲ್ಲಿ ಚಂದ್ರನ ತಟ್ಟೆ ಸೂರ್ಯನ ದಕ್ಷಿಣ ಭಾಗವನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಆ ಸಮಯ ಇಡೀ ವಾತಾವರಣದಲ್ಲಿ ತುಸು ಮಬ್ಬುಗತ್ತಲು ಆವರಿಸುತ್ತದೆ. ಹೆಚ್ಚೆಂದರೆ ಸೂರ್ಯನ ಪೂರ್ವಕ್ಕೆ ಗುರುಗ್ರಹ, ಅಥವಾ ಪೂರ್ವ ದಿಗಂತದಲ್ಲಿ ಆಗ ತಾನೇ ಉದಯಿಸುತ್ತಿರುವ ಶುಕ್ರಗ್ರಹ ಕಾಣಬಹುದು. ಉಳಿದಂತೆ ಆ ಬೆಳಕಿನಲ್ಲಿ ಆಕಾಶದಲ್ಲಿರುವ ಬುಧನಾಗಲೀ, ಶನಿಗ್ರಹವಾಗಲೀ ಕಾಣುವುದಿಲ್ಲ.  

ಇಷ್ಟೆಲ್ಲ ಆದರೂ ನಾವು ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ, ಕೊಡಗಿನಲ್ಲಿ ಈ ಗ್ರಹಣದ ನಡುಮಧ್ಯ ರೇಖೆ ಹಾದು ಹೋಗುವುದಿಲ್ಲ. ಅಂದರೆ, ಚಂದ್ರನು ಸೂರ್ಯನ ನಡುಮಧ್ಯೆ ಬಂದು ನಿಲ್ಲುವುದಿಲ್ಲ. ಈ ನಡುಮಧ್ಯ ರೇಖೆ ಕರ್ನಾಟಕದ ಇನ್ನೂ ದಕ್ಷಿಣಕ್ಕೆ ಅಂದರೆ, ಕೇರಳದ ನೀಲೇಶ್ವರ, ಪೇರಾವೂರು, ವೈನಾಡ್ ಅಲ್ಲಿಂದ ತಮಿಳುನಾಡಿನ ಗುಡಲೂರು, ಕೊಯಮತ್ತೂರಿನ ಮೂಲಕ ಹಾದು ಹೋಗುತ್ತದೆ. (ಚಿತ್ರ ನೋಡಿ).

ಇಲ್ಲಿಯವರೆಗೆ ಕೊಡಗಿನಲ್ಲಿ ಯಾವೊಂದು ಸಂಪೂರ್ಣ ಸೂರ್ಯಗ್ರಹಣವೂ ಘಟಿಸಿದ ಉಲ್ಲೇಖವೇ ಇಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮುಂದಿನ ಹಲವು ಶತಮಾನಗಳವರೆಗೆ ಮತ್ತೊಂದು ಸಂಪೂರ್ಣ ಸೂರ್ಯಗ್ರಹಣ ಕೊಡಗಿನಲ್ಲಿ ಕಾಣಲಾಗುವುದಿಲ್ಲ. ಹಾಗಾಗಿ ಕೊಡಗಿನ ಮಟ್ಟಿಗೆ ಡಿಸೆಂಬರ್ ೨೬ರ ಕಂಕಣ ಸೂರ್ಯಗ್ರಹಣ ಅಪೂರ್ವ ಘಟನೆ ಎಂದೇ ಹೇಳಬಹುದು. 

ಸಾರ್ವಜನಿಕರು, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸೂರ್ಯಗ್ರಹಣದ ವೈಭವವನ್ನು ನೋಡಿ ಆನಂದಿಸಬೇಕು. ಈ ವಿಶೇಷ ಜನಜಾಗೃತಿಯ ಕಾರ್ಯಕ್ರಮದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ, ವಿಜ್ಞಾನ ಪರಿಷದ್ ಕೈಗೂಡಿಸುತ್ತಿದ್ದಾರೆ.  ಎಲ್ಲರೂ ಮನೆಯಿಂದ ಹೊರಬಂದು ಈ ಗ್ರಹಣವನ್ನು ಅನುಭವಿಸಬೇಕು. ದಯವಿಟ್ಟು ಯಾರೂ ಕೂಡ ನೇರವಾಗಿ ಸೂರ್ಯನನ್ನು ದೃಷ್ಟಿಸಿ ನೋಡಲೇಬಾರದು. 

ಡಿಸೆಂಬರ್ 26ನೇ 2019 ರಂದು (ಗುರುವಾರ) ಬೆಳಿಗ್ಗೆ 8.05 ರಿಂದ 11.05 ಗಂಟೆಯವರೆಗೆ  ಕೊಡಗಿನಲ್ಲಿ ಹೆಚ್ಚು ಸಂಭವಿಸಿ  ಗೋಚರಿಸಲಿರುವ  ಅಪರೂಪದ ಹಾಗೂ ಕೌತುಕ ಸನ್ನಿವೇಶದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್  ಹಾಗೂ ಮತ್ತಿತರ ಸಂಸ್ಥೆಗಳ ವತಿಯಿಂದ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಗ್ರಹಣ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸೌರ ಕನ್ನಡಕಗಳನ್ನು ವಿಜ್ಞಾನ ಪರಿಷತ್ತಿನ ವತಿಯಿಂದ ಪೂರೈಸಲು ಕ್ರಮ ವಹಿಸಲಾಗಿದೆ. ಸೌರ ಕನ್ನಡಕಗಳು ಫಿಲ್ಟರ್ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ.15, 20 & 25 ರೂ ಗಳಲ್ಲಿ ದೊರೆಯಲಿವೆ. ಹಾಗೆಯೇ, ಗ್ರಹಣ ಹೆಚ್ಚು ಪ್ರಮಾಣದಲ್ಲಿ ಸಂಭವಿಸಲಿರುವ ಕುಟ್ಟ ಸಮೀಪದ ಕಾಯಿಮನಿ ಎಂಬ ಸ್ಥಳದಲ್ಲಿ ಗ್ರಹಣ ವೀಕ್ಷಣೆಗೆ ರಾಜ್ಯ ವಿಜ್ಞಾನ ಪರಿಷತ್ತು ಮೈಸೂರಿನ ಸೈನ್ಸ್ ಪೌಂಡೇಶನ್, ಪುಣೆಯ ಂಈಟ್ಟೀ ಸಂಸ್ಥೆಯ ಸಹಯೋಗದಲ್ಲಿ ಸ್ಥಳೀಯರ ಸಹಯೋಗದಲ್ಲಿ ಏರ್ಪಡಿಸಲಾಗಿದೆ.


ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ

 ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ

ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರಕ್ಕೆ ಮುನ್ನ ಭಾರತದಲ್ಲಿ ರಾಮರಾಜ್ಯವನ್ನು ಕಟ್ಟುವ ಅಭಿಲಾಶೆಯನ್ನು ಇಟ್ಟುಕೊಂಡಿದ್ದರು. ನಮ್ಮ ದೇಶ ಸ್ವಾತಂತ್ರ್ಯ ಕಂಡು ಇಂದಿಗೆ ಎಪ್ಪತ್ತ ಮೂರು ವರ್ಷಗಳು ಕಳೆದಿವೆ. ಮಹಾತ್ಮರ ರಾಮರಾಜ್ಯದ ಕನಸು ಈಡೇರಿದೆಯೆ ಎಂದು ನಾವು ಆತ್ಮಾವಲೋಕನೆ ಮಾಡಿಕೊಳ್ಳುವ ಕಾಲ ಬಂದಿದೆ. 

ಗಾಂಧೀಜಿಯವರ ರಾಮರಾಜ್ಯ ಎಂದರೆ, ಅದು ಗ್ರಾಮರಾಜ್ಯವಾಗಿತ್ತು. ಈವತ್ತೂ ನಾವು ನಮ್ಮ ದೇಶ ಎಂದರೆ, ಅದು ಹಳ್ಳಿಗಳಿಂದ ಕೂಡಿದ ದೇಶ, ಜನಪದ ಸಂಗೀತ, ಕರಕುಶಲ ಕಲೆ, ಗ್ರಾಮ್ಯ ಭಾಷೆಯ ಸೊಗಡು, ಇವೆಲ್ಲ ನಮ್ಮ ದೇಶದ ಬೆನ್ನೆಲುಬು ಎಂದೆಲ್ಲ ಭಾವಿಸುತ್ತಾ ಬಂದಿದ್ದೇವೆ. ಆದರೆ ಇವು ಎಷ್ಟರ ಮಟ್ಟಿಗೆ ಸರಿ?

ಬ್ರಿಟಿಷರು ನಮ್ಮ ದೇಶವನ್ನು ಸುಮಾರು ಒಂದೂವರೆ ಶತಕಗಳ ಕಾಲ ಆಳಿದರು. ದೇಶವನ್ನು, ದೇಶದ ಜನರನ್ನು ಒಡೆದು, ಜನರ ಒಗ್ಗಟ್ಟನ್ನು ಛಿದ್ರ ಮಾಡಿ, ಆ ಮೂಲಕ ಇಡೀ ದೇಶದ ಜನರಲ್ಲಿ ಪರಸ್ಪರ ದ್ವೇಷದ ಬೀಜವನ್ನು ಬಿತ್ತಿದರು. ಹೀಗೆ ಭಾರತವನ್ನು ಅವರ ರಾಜಕೀಯ ಇಚ್ಛಾಶಕ್ತಿಗೆ ಪೂರಕವಾಗಿ ಬಳಸಿಕೊಂಡರು. ಈ ಒಡೆದಾಳುವ ನೀತಿಯನ್ನೇ, ಸ್ವಾತಂತ್ಯಾ ನಂತರ ದೇಶವನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಮುಂದುವರಿಸಿಕೊಂಡು ಬಂದಿವೆ.

ಹಿಂದೆ, ಅಂದರೆ, ಜಾತಿಯ ವಿಷವೃಕ್ಷ ಮೊಳಕೆಯೊಡೆಯುವ ಮುನ್ನ, ಒಂದು ಹಳ್ಳಿಯಲ್ಲಿ ರೈತ, ಹರಿಜನ, ಕುಂಬಾರ, ಕಂಬಾರ, ಪೂಜಾರಿ, ಜೌಳಿಗ, ಗೌಳಿಗ, ಕ್ಷೌರಿಕ, ದರ್ಜಿ, ಚಿನಿವಾರ, ಚಮ್ಮಾರ, ಬಳೆಗಾರ, ಜಾಡಮಾಲಿ, ದನಗಾಹಿ, ಕುರಿಗಾಹಿ ಮುಂತಾದವರು ತಮ್ಮ ಬಗೆಬಗೆಯ ಕುಲಕಸುಬನ್ನು ಮಾಡಿಕೊಂಡು ತಮ್ಮ ಬದುಕನ್ನು ಕಂಡುಕೊಂಡಿದ್ದರು. ಅವರ ದೈನಂದಿನ ಕಾರ್ಯಗಳು ಮತ್ತು ಉತ್ಪನ್ನಗಳು ಆಯಾ ಗ್ರಾಮದ ಮಂದಿಗೆ ಪೂರೈಕೆಯಾಗುತ್ತಿದ್ದವು. ಕಾಲಾಕಾಲಕ್ಕೆ ಜರುಗುತ್ತಿದ್ದ ಹಬ್ಬ-ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಎಲ್ಲರೂ ಒಂದುಗೂಡಿ ಸಂತೋಷದಿಂದ ಸಂಭ್ರಮಿಸುತ್ತಿದ್ದರು. ಜನಪದ ಪ್ರತಿಭೆಗಳು ಆ ಸಮಯಗಳಲ್ಲಿ ವಿಜ್ರಂಭಿಸಿದವು. ಅವರ ವಿವಿಧ ವೃತ್ತಿಗಳು ಇಡೀ ಹಳ್ಳಿಯನ್ನು ಒಂದುಗೂಡಿಸಿತ್ತು. ದಿನನಿತ್ಯದ ಬದುಕಿಗೆ ಒಬ್ಬೊಬ್ಬರ ವೃತ್ತಿಯೂ ಆ ಹಳ್ಳಿಗೆ ಸೀಮಿತಗೊಂಡಿತ್ತು ಮತ್ತು ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಅನಿವಾರ್ಯವಾಗಿದ್ದರು. ಹಳ್ಳಿಯಲ್ಲಿ ಪ್ರತಿಯೊಂದು ವೃತ್ತಿಯವರಿಗೂ ವಿಶಿಷ್ಟ ಸ್ಥಾನ ಹಾಗೂ ಗೌರವವಿತ್ತು. ಜಾನಪದ ಹಾಡುಗಳಲ್ಲಿ, ಸಾಂಸ್ಕೃತಿಕ ಪರಂಪರೆ-ಆಚರಣೆಗಳಲ್ಲಿ ಅದನ್ನು ಇಂದೂ ನಾವು ಕಾಣಬಹುದಾಗಿದೆ.

ಅವರ ಒಂದೊಂದು ಕುಲವೃತ್ತಿಯೂ ತಲೆತಲಾಂತರದಿಂದ ವಂಶವಾಹಿನಿಯಲ್ಲಿ ಹರಿದು ಅದು ಅವರಲ್ಲಿ ರಕ್ತಗತವಾಗಿ, ಒಬ್ಬೊಬ್ಬರೂ ಅವರವರ ವೃತ್ತಿಯಲ್ಲಿ ಪ್ರವೀಣರೂ, ವಿಶೇಷಜ್ಞರೂ ಆಗಿದ್ದರು! ಅದು ಅವರ ಆತ್ಮವಿಕಾಸಕ್ಕೂ, ಸ್ವಾಭಿಮಾನಕ್ಕೂ ಆತ್ಮನಿರ್ಭರತೆಗೂ ಪೂರಕವಾಗಿತ್ತು. ಹೀಗೆ ಪ್ರತಿಯೊಂದು ಗ್ರಾಮವೂ ಸ್ವಯಂಪೂರ್ಣವಾದ, ಸ್ವಾವಲಂಬನೆಯ, ಸ್ವರಾಜ್ಯವಾಗಿತ್ತು.

ನಾವು ಇಲ್ಲಿ ಒಂದು ವಿಷಯವನ್ನು ಗಂಭೀರವಾಗಿ ಗಮನಿಸಬೇಕು: ಮೇಲೆ ಹೇಳಿದ ಯಾರೂ ಕೂಡ ಇಂದಿನ ಆಧುನಿಕ ಪದ್ಧತಿಯ ವಿದ್ಯಾಭ್ಯಾಸವನ್ನೂ ಮಾಡಿರಲಿಲ್ಲ, ಯಾರೂ ಯಾವ ಡಿಗ್ರಿ ಪ್ರಶಸ್ತಿ ಪತ್ರವನ್ನೂ ಪಡೆದಿರಲಿಲ್ಲ. ಆದರೆ, ಅವರೆಲ್ಲ ಅವರವರ ವೃತ್ತಿಯಲ್ಲಿ ಸಂಪೂರ್ಣ ನಿಪುಣರಾಗಿದ್ದರು. ಮತ್ತು ಅವರೆಲ್ಲ ಅವರ ಕಾರ್ಯ ಚಟುವಟಿಕೆಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೈಗೂಡಿಸಿಕೊಂಡಿದ್ದರು. ಒಂದು ದೃಷ್ಟಿಯಿಂದ ನೋಡುವುದಾದರೆ, ಅವರೆಲ್ಲ ವಿಜ್ಞಾನಿಗಳೇ ಆಗಿದ್ದರು! ಹಳ್ಳಿಯ ವಿಶಾಲ ಹೊಲ-ಗದ್ದೆ, ಬೆಟ್ಟ-ಗುಡ್ಡ, ಹಸು-ಕುರಿ ಕೊಟ್ಟಿಗೆಗಳೇ ಅವರ ಪ್ರಯೋಗಾಲಯ! ಹಾಗಿಲ್ಲದಿದ್ದಲ್ಲಿ, ಈಗ ನಾವು ಕಾಣುತ್ತಿರುವ ನೂರಾರು ತಳಿಯ ಭತ್ತ, ಜೋಳ, ಗೋಧಿ, ಹಸು, ಕೋಳಿ, ಕುರಿ ಮುಂತಾದುವುಗಳು ಇರುತ್ತಿರಲಿಲ್ಲ. ನಿಮಗೆ ಆಶ್ಚರ್ಯವಾಗಬಹುದು: ಇವು ಯಾವುವೂ ಆಧುನಿಕ ವಿಜ್ಞಾನಿಗಳಿಂದ ಪ್ರಯೋಗಾಲಯಗಳಲ್ಲಿ ಸಂಶೋಧಿಸಲ್ಪಟ್ಟ ಆವಿಷ್ಕಾರಗಳೇ ಅಲ್ಲ!

ಇಂದು ಪ್ರತಿಯೊಂದು ಕುಲ ವೃತ್ತಿಯೂ ಮಣ್ಣುಪಾಲಾಗಿವೆ. ಪ್ರತಿಯೊಂದು ಕುಲಕಸುಬೂ ಕೂಡ ಒಂದೊಂದು ಜಾತಿಯಾಗಿ ಪರಿವರ್ತಿತಗೊಂಡಿದೆ. ನೂರಾರು ವರ್ಷಗಳಿಂದ ಅನುಕ್ರಮವಾಗಿ ಬಂದಂತಹ ಸರ್ಕಾರಗಳು ಈ ಎಲ್ಲ ನಾಗರಿಕರನ್ನೂ ಒಬ್ಬರಿಂದ ಮತ್ತೊಬ್ಬರನ್ನು ಸಮರ್ಥಕವಾಗಿ ಬೇರ್ಪಡಿಸಿದರು. ಎಲ್ಲರನ್ನು ತುಚ್ಛವಾಗಿ, ಕೀಳಾಗಿ ಕಂಡರು. ಅಷ್ಟೇ ಅಲ್ಲ, ಈ ಎಲ್ಲ ವೃತ್ತಿಗಳೂ ಕೀಳು ಎಂಬ ಭಾವನೆ ಅವರಲ್ಲಿ ಆಳವಾಗಿ ಬೇರೂರುವಂತೆ ಮನಗೆಡಿಸಿದರು! ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಪ್ರತಿಯೊಂದು ಜಾತಿಯೂ ಇಂದು ಹರಿದು ಹಂಚಿಹೋಗಿದೆ. 

ಅಷ್ಟೇ ಅಲ್ಲ, ಹೀಗೆ ಭಾರತ ದೇಶವಾಸಿಗಳನ್ನೆಲ್ಲ ಹಿಂದುಳಿದವರು, ತುಳಿತಕ್ಕೊಳಪಟ್ಟವರು, ದಲಿತರು, ನಿರ್ಗತಿಕರು ಎಂದು ಅವರನ್ನು ಪ್ರತಿಬಿಂಬಿಸಲ್ಪಟ್ಟಿದೆ. ಪ್ರತಿಯೊಂದು ಜಾತಿಯೂ, ಅವರವರ ಜನಸಂಖ್ಯೆಯ ಆಧಾರದಲ್ಲಿ, ಎಷ್ಟೆಷ್ಟು ಕೀಳು ಎಂದು ಪಟ್ಟಿ ಮಾಡಲಾಗಿದೆ. ಈ ಹಣೆಪಟ್ಟಿ ಹಚ್ಚುವುದಲ್ಲದೆ, ಎಲ್ಲರಿಗೂ ಜಾತಿ ಸರ್ಟಿಫ಼ಿಕೇಟನ್ನು ಕೊಡಲಾಗಿದೆ. ಇದು ವ್ಯವಸ್ಥಿತವಾಗಿ ತಲೆತಲಾಂತರಕ್ಕೂ ಮುಂದುವರೆಯುವಂತೆ ನೋಡಿಕೊಂಡಿದ್ದಾರೆ. ಇದರೊಂದಿಗೆ ಭಾರತೀಯರೇ ಆದ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಕ್ಕರು, ಜೈನರು ಮುಂತಾದ ವಿವಿಧ ಮತದವರನ್ನು ಅಲ್ಪಸಂಖ್ಯಾತರು ಎಂದು ಒಡೆಯಲಾಗಿದೆ.

ಸಾಮಾಜಿಕ ನಿಚ್ಚಣಿಕೆಯಲ್ಲಿ ಅವರೆಲ್ಲ ಬಹಳ ಕೆಳ ಮೆಟ್ಟಿಲುಗಳಲ್ಲಿದ್ದಾರೆ ಎಂಬ ಭ್ರಮೆ ಹುಟ್ಟಿಸಿ, ಅವರನ್ನು ಸಾಮಾಜಿಕವಾಗಿ ಮೇಲೆತ್ತುವ ಪ್ರಕ್ರಿಯೆ ಎಡೆಬಿಡದೆ ಸಾಗಿದೆ. ಇದೊಂದು ರಾಜಕೀಯ ನಾಟಕವಷ್ಟೆ. ಮೇಲೆತ್ತುವುದು ಎಂದರೆ, ಅವರನ್ನೆಲ್ಲ ವೈದ್ಯರು, ಇಂಜಿನಿಯರುಗಳು, ಹಾಗೂ ವಿವಿಧ ಕಾಲೇಜು-ಶಿಕ್ಷಣವನ್ನು ಪಡೆದು ವಿವಿಧ ಡಿಗ್ರಿಗಳನ್ನು ಪಡೆದ ಪದವೀಧರರನ್ನಾಗಿ ಮಾಡುವುದು, ಸರ್ಕಾರದ ಹುದ್ದೆಗಳನ್ನು ಅಲಂಕರಿಸುವುದು ಎಂದರ್ಥ! ಹೀಗೆ, ದೊಡ್ಡ ದೊಡ್ಡ ಪದವಿ ಪಡೆಯುವುದೇ, ಸರ್ಕಾರಿ ಹುದ್ದೆಯನ್ನು ಪಡೆಯುವುದೇ ಒಬ್ಬ ವ್ಯಕ್ತಿಯ ಜೀವನದ ಗುರಿ, ಹಾಗಾದರೆ ಮಾತ್ರ ಅವನಿಗೆ ಸಮಾಜದಲ್ಲಿ ಗೌರವ ಎಂಬ ಭಾವನೆ ಈಗ ಎಲ್ಲರ ಮನದಲ್ಲಿಯೂ ತಳವೂರಿಬಿಟ್ಟಿದೆ! 

ಇದರೊಂದಿಗೆ ಮತ್ತೊಂದು, ಮತ್ತು ಅಷ್ಟೇ ಹೀನ, ಸಂಸ್ಕೃತಿ ಕಂಡುಬರುತ್ತಿದೆ. ಇವರನ್ನೆಲ್ಲ ರಾಜಕೀಯ ದಾಳಗಳನ್ನಾಗಿಸಿ, ಪ್ರತಿಯೊಂದು ಜಾತಿಯೂ ವೋಟ್-ಬ್ಯಾಂಕ್‌ಗಳನ್ನಾಗಿ ಪರಿವರ್ತಿತಗೊಳಿಸುವ ಪ್ರಕ್ರಿಯೆ ಸಮರ್ಥವಾಗಿ ನಡೆಯುತ್ತಿದೆ! ಭಾರತದ ಸಂವಿಧಾನದಲ್ಲಿ ನಮ್ಮದು ಜಾತ್ಯಾತೀತ ದೇಶ ಎಂದು ದಪ್ಪನಾದ ಅಕ್ಷರದಲ್ಲಿ ಬರೆದಿದ್ದರೂ, ಸ್ವಾತಂತ್ರ್ಯ ದೊರಕಿ ಏಳೆಂಟು ದಶಕಗಳು ಕಳೆದರೂ ಜಾತಿ ವೈಷಮ್ಯಗಳು, ವೈಪರೀತ್ಯಗಳು ಒಂದಿಷ್ಟೂ ಬದಲಾಗಿಲ್ಲ ಮತ್ತು ಈ ಪರಿಸ್ಥಿತಿ ಹೆಚ್ಚುತ್ತಿರುವದನ್ನೇ ನಾವು ಕಾಣುತ್ತಿದ್ದೇವೆ. ಇಂದು ಪ್ರತಿಯೊಂದು ಜಾತಿಯೂ ರಾಜಕೀಯ ಲಾಭವನ್ನು ಪಡೆಯಲು, ಹೆಚ್ಚು ಹೆಚ್ಚು ಹಿಂದುಳಿಯಲು ಪ್ರಯತ್ನಿಸುತ್ತಿವೆ! ತಮ್ಮ ಮುಂದಿನ ಪೀಳಿಗೆಗಳಿಗೂ ಎಲ್ಲ ಸರಕಾರದ ಸವಲತ್ತುಗಳು ದೊರಕಬೇಕೆಂಬ ನಿಟ್ಟಿನಲ್ಲಿ ಎಲ್ಲರಲ್ಲಿಯೂ ತಾವು ಹಿಂದುಳಿಯಬೇಕೆಂಬುದೇ ಧ್ಯೇಯವಾಗಿಬಿಟ್ಟಿದೆ. 

ನಾವೆಲ್ಲ ಭಾರತೀಯರು, ದೇಶವನ್ನು ಎಲ್ಲರೂ ಒಂದುಗೂಡಿ ಮುಂದಕ್ಕೆ ತರಬೇಕು ಎಂಬ ವಿಚಾರವೇ ನೇಪಥ್ಯಕ್ಕೆ ಸರಿದಿದೆ. ರಾಷ್ಟ್ರಭಕ್ತಿ, ದೇಶಪ್ರೇಮ ಮುಂತಾದ ಆದರ್ಶಗಳು ಮಾಯವಾಗಿವೆ. ಹಣ ಗಳಿಸುವುದೇ ರಾಜಕೀಯದ ಉದ್ದೇಶವಾದ್ದರಿಂದ ಎಲ್ಲ ಆಡಳಿತ ನಡೆಸುವ ಅಧಿಕಾರ ವ್ಯವಸ್ಥೆಗಳಲ್ಲಿ ಮೋಸ, ಲಂಚಗುಳಿತನ, ತಾಂಡವವಾಡುತ್ತಿದೆ. ಗೂಂಡಾಗಿರಿ, ಕ್ರೌರ್ಯ, ಸಮಾಜಘಾತುಕತನ ಇವೇ ಇಂದು ಯುವ ನಾಯಕತ್ವದ ಗುಣಗಳಾಗಿವೆ! ದೇಶದ ನಾಗರಿಕರ ಮೂಲ ಅವಶ್ಯಕತೆಗಳಾದ ವಿದ್ಯಾಭ್ಯಾಸ, ಆರೋಗ್ಯ, ಎಲ್ಲವೂ ರಾಜಕೀಯ ವ್ಯಕ್ತಿಗಳ ಕೌಟುಂಬಿಕ ವ್ಯವಹಾರಗಳಾಗಿವೆ.

ಈ ಎಲ್ಲ ದುರ್ವ್ಯವಹಾರಗಳೂ ದೊಡ್ಡ ದೊಡ್ಡ ನಗರಗಳಲ್ಲಿ ಹುಟ್ಟಿ, ಗ್ರಾಮಗಳಿಗೆ ಪಸರಿಸುತ್ತಿವೆ. ಪಟ್ಟಣಗಳು ಸುತ್ತಮುತ್ತಲ ಹಳ್ಳಿಗಳನ್ನು ನುಂಗಿ ಯಾವುದೇ ಎಗ್ಗಿಲ್ಲದೆ ಬೆಳೆಯುತ್ತಿವೆ. ದೊಡ್ಡ ದೊಡ್ಡ ಉದ್ಯಮಗಳು ತಲೆಯೆತ್ತುತ್ತಿವೆ. ಇದರಿಂದ ಗ್ರಾಮೋದ್ಯೋಗಗಳು ಮಾಯವಾಗಿ, ಗ್ರಾಮಾಂತರ ಜೀವನಗಳು ನಿರ್ಭರವಾಗುತ್ತಿದೆ. ಹಳ್ಳಿಗರು ತಮ್ಮ ಕುಲಕಸುಬನ್ನು ಬಿಟ್ಟು, ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಿ, ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ಗ್ರಾಮ ಸಂಸ್ಕೃತಿ, ಗುಡಿ ಕೈಗಾರಿಕೆಗಳು ಮಾಯವಾಗಿವೆ. ಹಳ್ಳಿಯ ಯುವಕರು ಯಾವುದೇ ಕೆಲಸವಿಲ್ಲದೆ, ಯಾವುದೇ ವೃತ್ತಿಯಲ್ಲೂ ಪ್ರಣೀತರಾಗದೆ, ಪುಂಡ ಪೋಕರಿಗಳಾಗಿ, ವಿವಿಧ ವ್ಯಸನಿಗಳಾಗಿ, ಸರ್ಕಾರ ನೀಡುವ ಉಚಿತ ಸೌಲಭ್ಯಗಳನ್ನು ಪಡೆದು, ಸೋಮಾರಿಗಳಾಗಿ, ಅಡ್ಡದಾರಿ ಹಿಡಿದು ದೇಶಕ್ಕೆ ಮಾರಕರಾಗುತ್ತಿದ್ದಾರೆ.

ಈ ಎಲ್ಲ ಪರಿಸ್ಥಿತಿಯನ್ನು ಹಿಮ್ಮೊಗವಾಗಿ ತಿರುಗಿಸಲು ಸಾಧ್ಯವೆ? ಇವಕ್ಕೆ ಪರಿಹಾರಗಳೇನು? 

೧. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಬೇಕು. 

೨. ಸರ್ಕಾರವು ಉಚಿತ ಪಡಿತರ ಮುಂತಾದ ಸಾಮಗ್ರಿಗಳನ್ನು ನೀಡುವುದು ತಪ್ಪಬೇಕು.

೩. ಕಾರ್ಮಿಕರಿಗೆ, ಆರ್ಥಿಕವಾಗಿ ಹಿಂದುಳಿದ ಜನರಿಗೆ, ಅವರ ವೃತ್ತಿಗೆ ಅವಶ್ಯವಾದ ಸಾಮಗ್ರಿಗಳನ್ನು ನೀಡಿ, ಕೆಲಸ ಮಾಡಲು ಪ್ರೋತ್ಸಾಹಿಸಬೇಕು.  

೪. ಜಾತಿ ವ್ಯವಸ್ಥೆ ದೇಶಕ್ಕೇ ಮಾರಕ. ಇದು ಯುವಕರ ಸ್ವಾಭಿಮಾನ, ಆತ್ಮಸ್ಥೈರ್ಯಗಳನ್ನು ಕುಗ್ಗಿಸಿದೆ. ಇದನ್ನು ಮೊದಲು ತೊಡೆಯಬೇಕು.

೫. ಕುಲಕಸುಬು-ವೃತ್ತಿಧರ್ಮಗಳನ್ನು ಎಲ್ಲರೂ ಗೌರವಿಸುವಂತಾಗಬೇಕು. ಸರ್ಕಾರದಿಂದ ಅವುಗಳಿಗೆ ಪ್ರೋತ್ಸಾಹ, ಸವಲತ್ತುಗಳು ದೊರಕಬೇಕು. 

೬. ಪ್ರತಿಯೊಂದು ಹಳ್ಳಿಯಲ್ಲಿಯೂ ನಮಗೀಗ ಉತ್ತಮ ನಡೆವಳಿಕೆಯ, ದೇಶದ ಬಗ್ಗೆ ಕಳಕಳಿಯುಳ್ಳ, ನಿಸ್ವಾರ್ಥ ಯುವ ಕಟ್ಟಾಳುಗಳು ಬೇಕಿದ್ದಾರೆ.

೭. ಇಂತಹ ಯುವ ನಾಯಕರನ್ನು ಗ್ರಾಮದ ಹಿರಿಯರು ಪ್ರೋತ್ಸಾಹಿಸಿ, ಬೆಳೆಸಬೇಕು. ಗ್ರಾಮದ ಪುಂಡರನ್ನು, ನಿಷ್ಪ್ರಯೋಜಕರನ್ನು ತಿರಸ್ಕರಿಸಬೇಕು. 

೮. ಗ್ರಾಮಾಂತರ ಪ್ರದೇಶಗಳ ಗಡಿಗಳನ್ನು ಗುರುತಿಸಿ, ಉಳಿಸಬೇಕು ಮತ್ತು ಅವು ಪರರ ಪಾಲಾಗುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು.

೯. ಅದರಲ್ಲೂ ಕೃಷಿಭೂಮಿಯನ್ನು, ವಾಣಿಜ್ಯದ ಉದ್ದೇಶಕ್ಕೆ ಪರಿವರ್ತಿಸುವ ಆದೇಶ ಖಂಡಿತ ನಿಲ್ಲಬೇಕು.

೧೦. ಜನ ಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಂಡು, ಪ್ರಾಮಾಣಿಕ ಯುವಕರೊಡಗೂಡಿ, ಗ್ರಾಮಾಭಿವೃದ್ಧಿಗೆ ನಿಷ್ಠೆಯಿಂದ ಕೈಜೋಡಿಸಬೇಕು.

ಹೀಗೆ ಆದಾಗ ಮಾತ್ರ ನಾವು ಗಾಂಧೀಜಿಯವರ ರಾಮರಾಜ್ಯ, ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ್ ಮುಂತಾದ ಕನಸುಗಳನ್ನು ನನಸಾಗಿಸಲು ಮತ್ತು ನಮ್ಮ ದೇಶವನ್ನು ಪ್ರಪಂಚದ ಮುಂಚೂಣಿಗೆ ತರಲು ಸಾಧ್ಯ.



WILDLIFE MESSAGES 2018

 

DIVERSITY: THE LIFE-BREATH

Thursday, 27 September 2018

Dear friend, 

Early morning the first thing we do is to brush our teeth. We do not know who manufactured the tooth brush that we are using, nor we know where the tooth paste came from. We bought them from the same nearby store. Likewise, the water that we use was disinfected, pumped to our house, the pipeline, taps fitted by unknown men. We use them without bothering about who really were responsible for these works.

 

Similarly, an unsung village farmer from an unknown corner of the country has grown
the cereals, vegetables and the fruits that have found place in our kitchen. We are not concerned about who the farmer is and the hardship he faced to produce them. We just pay money and get them all. In fact, we depend on others for all our needs because, we cannot manufacture or grow them for ourselves. Starting from a tiny pin to the television, from a small screw to a car, somewhere, somebody have created them for us. Ultimately they become an inseparable part of our life.

 We are so accustomed to these things that we cannot imagine our life without them. Each thing is produced in accordance with our demands and requirements. Our life becomes miserable even if one of these links is cut off; life turns into chaos and ultimately our life may cease!

 In this system, every one knows his obligations and responsibilities. He also is proud that without his role, the society is put to distress. Lastly he is also aware that if he minds, he can make the life of his cohabitants miserable.

 Now I will take you to another world: Visualise a dense forest. There wanders a wildboar. It is night and the boar is in search of its food. It digs the ground hither and thither to find the roots and tubers. Early next morning a deer comes along grazing and drops it dung allover. There is a tall plum tree nearby. With full of fruits, it attracts birds and animals. A Hornbill devours the plums and rushes to his family, locked inside the tree hole nest, to feed them. He evacuates his bowel on his way and the seeds drop to the ground. Likewise, a monkey spits a mango seed closeby.

 Some days later, there is a cloudburst and the whole land is dampened by the life-giving water. The seeds miraculously spring into action. They sprout, grow and become large trees. The whole wood gets filled with a variety of plants and trees. In this whole natural process, none of the animals -- the wildboar or porcupine, deer or gaur, hornbill or monkey -- know that they are responsible for the emergence of the magnificent forest! Each and every animal in the wild, participates in this endeavour selflessly. They never celebrate their achievement!

 In Nature, every life form bestows its might for the healthy coexistence and contributes to make it rich and diverse, considered by Nature to be important and desirable.

 With greed, selfishness and cruelty only humans have the ability to halt this process. If we do not interfere in this sustained natural phenomenon everything remains beautiful for our future generations.

 
Let us join hands to make our only Earth, a place where all elements of life can live in health, happiness and harmony. 

 Special Wildlife Messenger of This Year

Golden Oriole (Oriolus oriolus): These attractive birds are slim, bright golden yellow birds which live among the leaves of big trees. Females have dull yellowish-green body. Rather shy birds, despite their gaudy colour, usually they are more heard rather than seen. Their flight is attractive: rapid, strong and undulating. The voice is a melodious fluty, moist pee.loo.loo. They build a hammock-like nest in the fork of a tall tree, with grass and fibre, bound by cobweb. 

Total of hand-painted cards made: this year 2015; in 34 years 68,445. Total recipients: this year 1,270; in 34 years 12,004.  WILDLIFE MESSAGE CARDS are individually hand-painted and sent to individuals throughout the world to mark the Wildlife Week.

ವೈವಿಧ್ಯತೆ: ಜೀವದ ಉಸಿರು


ನಾವು ಪ್ರತಿದಿನ ಬೆಳಿಗ್ಗೆ ಎದ್ದು ಮೊದಲು ಹಲ್ಲುಜ್ಜುತ್ತೇವಲ್ಲ, ನಾವು ಬಳಸುವ ಟೂತ್‌ಬ್ರಶ್ ಎಲ್ಲಿಯೋ ತಯಾರಾಗಿರುತ್ತದೆ, ಟೂತ್‌ಪೇಸ್ಟನ್ನು ಇನ್ನಾರೋ ತಯಾರಿಸಿರುತ್ತಾರೆ. ಅವೆರಡನ್ನೂ ನಾವು ಒಂದೇ ಅಂಗಡಿಯಿಂದ ಕೊಂಡಿರುತ್ತೇವೆ. ಹಾಗೆಯೇ, ನಾವು ಬಳಸುವ ನೀರಿನ ಶುದ್ಧೀಕರಣ, ಅದರ ಸರಬರಾಜು, ಪೈಪುಗಳ ಅಳವಡಿಕೆ, ನಲ್ಲಿ ಇವೆಲ್ಲ ಯಾರು ಯಾರೋ ನಮ್ಮ ಮನೆಯಲ್ಲಿ ಜೋಡಿಸಿರುತ್ತಾರೆ. ಅದರ ಯಾವುದೇ ಗೋಜಿಗೆ ಹೋಗದೆ ನಾವು ಅವನ್ನೆಲ್ಲ ಉಪಯೋಗಿಸುತ್ತೇವೆ. 

ಅದೇ ರೀತಿ ದೇಶದ ಯಾವುದೋ ಮೂಲೆಯಲ್ಲಿ ಅಪರಿಚಿತ ರೈತನೊಬ್ಬ ತನ್ನ ಬೆವರು ಸುರಿಸಿ ಬೆಳೆದ ಪ್ರತಿಯೊಂದು ಧಾನ್ಯವೂ, ತರಕಾರಿ-ಹಣ್ಣು ಹಂಪಲುಗಳೂ ನಮ್ಮ ಮನೆ ಸೇರಿರುತ್ತದೆ. ಇವುಗಳಲ್ಲಿ ಯಾವೊಂದು ವಸ್ತುವಿನ ಮೂಲವನ್ನಾಗಲೀ, ಅದನ್ನು ಬೆಳೆಯಲು ಆ ರೈತನು ಪಟ್ಟ ಪರಿಶ್ರಮವನ್ನಾಗಲೀ, ನಾವು ಆಲೋಚಿಸುವುದೇ ಇಲ್ಲ. ಯಾವುದೇ ಒಂದನ್ನೂ ನಾವು ತಯಾರಿಸಿಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲ ವಸ್ತುಗಳೂ ಹಣ ಕೊಟ್ಟೊಡನೆ ನಮಗೆ ದೊರಕುತ್ತವೆ. ಒಂದು ಸೂಜಿಯಿಂದ ಹಿಡಿದು ಟಿವಿಯವರೆಗೆ, ಒಂದು ಸ್ಕ್ರೂನಿಂದ ಹಿಡಿದು ಕಾರಿನವರೆಗೆ, ಯಾರೋ, ಎಲ್ಲಿಯೋ, ಯಾವಾಗಲೋ ತಯಾರು ಮಾಡಿದ ವಸ್ತುಗಳು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುತ್ತವೆ; ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿರುತ್ತವೆ.

ನಾವು ಈ ವ್ಯವಸ್ಥೆಗೆ ಎಷ್ಟು ಹೊಂದಿಕೊಂಡಿದ್ದೇವೆಂದರೆ ಅವುಗಳು ಇಲ್ಲದೆ ನಮ್ಮ ಜೀವನ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಇತರರ ಬೇಕು-ಬೇಡಿಕೆಗಳಿಗನುಸಾರವಾಗಿ ತಮ್ಮ ವಸ್ತುಗಳನ್ನು ಉತ್ಪಾದಿಸುತ್ತಾರೆ. ಯಾವುದಾದರೂ ಒಂದು ಕೊಂಡಿ ಕಳಚಿ ಹೋದರೆ ನಮ್ಮ ದಿನಚರಿ ಅಸ್ತವ್ಯಸ್ತಗೊಳ್ಳುತ್ತದೆ; ಅಲ್ಲೋಲ ಕಲ್ಲೋಲವಾಗಿಬಿಡುತ್ತದೆ; ಕೊನೆಗೆ ಜೀವನವೇ ಸ್ತಬ್ದಗೊಳ್ಳುತ್ತದೆ.

ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಪಾತ್ರದ-ಜವಾಬ್ದಾರಿಯ ತಿಳಿವು, ತಾನಿಲ್ಲದಿದ್ದರೆ ಸಮಾಜದಲ್ಲಿ ಏರುಪೇರಾಗುವುದೆಂಬ ಅರಿವು ಇರುತ್ತದೆ. ಹಾಗೆಯೇ ತಾನು ಅಂತಹ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂಬ ಗರ್ವವೂ ಸೇರಿಕೊಳ್ಳುತ್ತದೆ.  

ಈಗ ನಿಮ್ಮ ಮುಂದೆ ಮತ್ತೊಂದು ಚಿತ್ರಣವನ್ನಿಡುತ್ತೇನೆ: ಒಂದು ದಟ್ಟವಾದ ಅಡವಿ; ಅಲ್ಲೊಂದು ಕಾಡುಹಂದಿ. ಇರುಳಿನ ವೇಳೆ ಆಹಾರವನರಸುತ್ತ ಆ ಹಂದಿ ಅಲ್ಲಲ್ಲಿ ನೆಲವನ್ನು ಬಗೆಬಗೆದು ಗೆಡ್ಡೆ-ಗೆಣಸುಗಳನ್ನು ತಿನ್ನುತ್ತದೆ. ಮರುದಿನ ಮುಂಜಾವು ಹುಲ್ಲು ಮೇಯುತ್ತ ಬರುವ ಒಂದು ಜಿಂಕೆ ಅಲ್ಲೆಲ್ಲ ಸೆಗಣಿಯನ್ನು ಹಾಕುತ್ತಾ ಸಾಗುತ್ತದೆ. ಅಲ್ಲೇ ಪಕ್ಕದಲ್ಲಿ ಮುಗಿಲೆತ್ತರಕ್ಕೆ ಬೆಳೆದ ಒಂದು ಧೂಪದ ಮರ ಹಣ್ಣುಗಳಿಂದ ತುಂಬಿ ಪ್ರಾಣಿ-ಪಕ್ಷಿಗಳನ್ನು ಆಕರ್ಷಿಸುತ್ತಿದೆ. ಆ ಹಣ್ಣನ್ನು ತಿಂದ ಒಂದು ಗಂಡು ಮಂಗಟ್ಟೆ ಹಕ್ಕಿ, ಗೂಡಿನಲ್ಲಿ ತನಗೇ ಕಾಯುತ್ತಿರುವ ಪತ್ನಿ ಹಾಗೂ ಮಕ್ಕಳಿಗೆ ಆಹಾರವನ್ನು ಒಯ್ಯುತ್ತಾ, ಮೇಲಿನಿಂದಲೇ ಹಿಕ್ಕೆಯನ್ನು ಹಾಕುತ್ತದೆ. ಹೀಗೆ ಧೂಪದ ಮರದ ಬೀಜವೊಂದು ನೆಲ ಸೇರುತ್ತದೆ. ಹಾಗೆಯೇ ಕಪಿಯೊಂದು ತಾನು ತಿಂದ ಮಾವಿನ ಗೊರಟನ್ನು ಉಗಿದುಹೋಗುತ್ತದೆ.

ಮುಂದೊಂದು ದಿನ ಆಕಾಶದಲ್ಲಿ ಸಂಚರಿಸುವ ಮೋಡವೊಂದು ಹನಿ ಮಳೆಗರೆದು ಇಡೀ ಕಾನನವನ್ನು ತೋಯಿಸುತ್ತದೆ. ಫಲವತ್ತಾದ ಭೂಮಿಯ ಮೇಲೆ ಬಿದ್ದ ಒಂದೊಂದು ಬೀಜವೂ ಮೊಳಕೆಯೊಡೆದು, ಗಿಡವಾಗಿ, ಹೆಮ್ಮರವಾಗುತ್ತದೆ. ಇಡೀ ಕಾಡು ವಿಧವಿಧದ ಸಸ್ಯಗಳಿಂದ ಕಂಗೊಳಿಸುತ್ತದೆ. ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ ಕಾಡುಹಂದಿಗಾಗಲೀ, ಜಿಂಕೆ-ಕಡವೆಗಳಿಗಾಗಲೀ, ಮಂಗಟ್ಟೆ-ಕಪಿಗೇ ಆಗಲೀ, ತಾವು ಒಂದು ಅದ್ಭುತವಾದ ಸಾಧನೆ ಮಾಡಿದ್ದೇವೆಂದು ತಿಳಿದೇ ಇರುವುದಿಲ್ಲ; ಯಾವೊಂದು ಜೀವಿಯೂ ತನ್ನಿಂದಲೇ ಈ ಕಾರ್ಯ ನಡೆದಿದೆ ಎಂದು ಹೆಮ್ಮೆಯಿಂದ ಬೀಗುವುದಿಲ್ಲ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ! ನಿಸರ್ಗದಲ್ಲಿ ಪ್ರತಿಯೊಂದು ಜೀವಿಯೂ ಒಂದಕ್ಕೊಂದು ಪೂರಕವಾಗಿ, ನಿಸ್ಪೃಹತೆಯಿಂದ ತನ್ನ ಪಾತ್ರವನ್ನು ನಿಭಾಯಿಸಿ, ಇಳೆಯ ಇಡೀ ಜೀವಸಂಕುಲ ಯಾವುದೇ ಅಡೆತಡೆಗಳಿಲ್ಲದೆ ಬಾಳಾಟ ನಡೆಸಲು ಅನುವು ಮಾಡಿಕೊಡುತ್ತದೆ.

ಪ್ರಕೃತಿಯಲ್ಲಿ ನಡೆಯುತ್ತಿರುವ ಈ ವಿಸ್ಮಯಕಾರಿ, ಸ್ವಾಭಾವಿಕ ಕಾರ್ಯಗತಿಯನ್ನು ತಡೆಯಬಲ್ಲ ವಿಕೃತಶಕ್ತಿ ಇರುವುದು ಮಾನವನಿಗೊಬ್ಬನಿಗೆ ಮಾತ್ರ. ಸ್ವಾರ್ಥ-ದುರಾಸೆ-ಕ್ರೌರ್ಯಗಳನ್ನು ಬಿಟ್ಟು, ಜೀವ ವೈವಿಧ್ಯತೆಯಿಂದ ಕೂಡಿದ ನಿತ್ಯಸುಂದರ ಭೂಮಿಯನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. 

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ   ಹೊನ್ನಕ್ಕಿ: ಉಜ್ವಲ ಹೊನ್ನಿನ ಬಣ್ಣದ, ಸಪೂರವಾದ ದೇಹದ, ನಾಚಿಕೆ ಸ್ವಭಾವದ, ಮರದ ಮೇಲೆ ವಾಸಿಸುವ ಹಕ್ಕಿ. ಹೆಣ್ಣು ಹಕ್ಕಿಗಳಿಗೆ ತುಸು ಹಸುರುಮಿಶ್ರಿತ ದೇಹ. ಜೋಡಿಯಾಗಿ ಮರದ ಎಲೆಗಳ ಮರೆಯಲ್ಲಿ ಅವಿತುಕೊಳ್ಳುವುದರಿಂದ ಈ ಹಕ್ಕಿಗಳನ್ನು ನಾವು ಕಾಣುವುದಕ್ಕಿಂತ ಕೇಳುವುದೇ ಹೆಚ್ಚು. ಆಲ-ಅರಳಿ-ಅತ್ತಿ ಹಣ್ಣುಗಳು, ಮಕರಂದ, ಕೀಟಗಳು ಇವುಗಳ ಆಹಾರ. ಇಂಪಾದ ಕೊಳಲಿನ ಪೀ.ಲೂ..ಲೂ ಸ್ವರ. ಮರದ ತುದಿ-ಕವಲುಗಳಲ್ಲಿ ಹುಲ್ಲು-ನಾರು-ಬೇರುಗಳಿಂದ ನೇಯ್ದ ಸುಂದರವಾದ ತೂಗುಯ್ಯಾಲೆ ಗೂಡು ಕಟ್ಟುತ್ತವೆ. 

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ೨೦೧೫; ಕಳೆದ ೩೪ ವರ್ಷಗಳಲ್ಲಿ ೬೮,೪೪೫.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೨೭೦; ಕಳೆದ ೩೪ ವರ್ಷಗಳಲ್ಲಿ ೧೨,೦೦೪. 




Monday, September 28, 2020

WILDLIFE MESSAGES 2019

 


 Thursday, 26 September 2019


LEADING A HEALTHY LIFE WITH NATURE
Dear friend,

Our body has a marvelous built-in defense system or immune system where it recognises and fights diseases and keeps the marauding organisms at bay. This process is seen in all the living beings. The human body has acquired this character from millions of years of genetic pool. Naturally grown fruits, vegetables and nuts impart a lot of immunity to our body.           
But, in its excitement to recognise any thing that is foreign, the defense system sometimes becomes over-enthusiastic! As such, there are hundreds of things in the air, including street and house dust, pollens and micro-organisms, most of which are either harmless or not a matter of concern. For a trivial reason, when the body is exposed to them, it reacts severely. We generally call this type of stupid reaction as allergies. The body itches, swells, there is sneezing, wheezing and sometimes it may lead to severe illness, shock and even death.
Over the years, I have noticed that this phenomenon is more pronounced in urban dwellers than in village population. The people in villages are inherently tough. From the childhood, their body is thrown open to these allergens and their immune system learns to ignore most of the things when it is exposed to. 
I think that there is a complex connection between the immune system and our brain. Many elite, worry unnecessarily or excessively about things that are around them. They fuss about the smell of this or the taste of that… and, in a way, they inadvertently train their system to readily recognise anything foreign, which are otherwise harmless. Their body is put on a 'high-alert' all the time. And because of this attitude, they suffer and make a miserable life for themselves!           
Whereas, a village lad, always surrounded by these, is happy and without much suffering. I feel that this is a sort of mental attitude of the body cells! They learn to live compatibly with all the natural things around them, as far as they are not meant to be harmful. This is indeed a sign of perfect health!           
The moral of the story is that our body is meant to live along with nature and develop a harmonious relationship with it, so that we can lead a healthy life.

Let us join hands to make our only Earth, a place where all elements of life can live in health, happiness and harmony. Thank you.                    

  
Special Wildlife Messenger of This Year 
Asian Paradise-Flycatcher (Terpsiphone paradisi)  This insectivorous bird belongs to the family of Monarch Flycatchers, and is characterised by the long, stark white trailing tail feathers in breeding males. The agile, fairy like movements of the male bird, as he twists and turns in the air after insects, with his tail-ribbons looping and tracking behind, is a spectacle of exquisite charm! It nests between February and July. Builds a nest made of fine grasses and fibres, plastered with cobweb in the fork of a twig. Breeding male calls with pleasant musical notes.

Total of hand-painted cards made: this year 2280; in 35 years 70,725. Total recipients: this year 1190; in 35 years 12,304.
THE WILDLIFE MESSAGE CARDS are individually hand-painted and sent free to individuals throughout the world to mark the Wildlife Week.
For previous years’ messages, please visit me at http://drsvnarasimhan.blogspot.com


ಪ್ರಕೃತಿಯೊಂದಿಗೆ ಆರೋಗ್ಯಪೂರ್ಣ ಜೀವನ

 ಮಿತ್ರರೆ,

ನಮ್ಮ ದೇಹದಲ್ಲಿ ಒಂದು ಅದ್ಭುತವಾದ ರೋಗನಿಯಂತ್ರಣ ವ್ಯವಸ್ಥೆಯಿದೆ. ಅದು ನಮ್ಮ ದೇಹದ ಮೇಲೆ ದಾಳಿ ಮಾಡುವ ಕ್ಷುದ್ರ ಜೀವಿಗಳನ್ನೂ, ಅಪಾಯಕಾರಿ ರಾಸಾಯನಿಕಗಳನ್ನೂ  ಆಗಿಂದಾಗಲೇ ಗುರುತಿಸಿ, ಅನಾರೋಗ್ಯಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ, ಅವು ಮತ್ತೊಂದು ಬಾರಿ ಹತ್ತಿರ ಬಾರದಂತೆ ದೂರವಿಡುತ್ತದೆ. ಈ ಗುಣವನ್ನು ನಾವು ಎಲ್ಲ ಜೀವಿಗಳಲ್ಲೂ ಕಾಣುತ್ತೇವೆ. ಕೋಟಿ ಕೋಟಿ ವರ್ಷಗಳಿಂದ ವಿಕಾಸ ಹೊಂದಿ, ಈ ವಿಶಿಷ್ಟ ಗುಣವನ್ನು ನಮ್ಮ ದೇಹ ತನ್ನ ವರ್ಣತಂತುಗಳಲ್ಲಿ ಪಡೆದಿದೆ. ಸಹಜವಾಗಿ ಬೆಳೆದ ಹಣ್ಣು-ತರಕಾರಿಗಳು, ಕಾಳು-ಬೀಜಗಳನ್ನು ತಿನ್ನುವುದರಿಂದ ಈ ಶಕ್ತಿಯನ್ನು ನಾವು ವೃದ್ಧಿಗೊಳಿಸಬಹುದು. 
ಆದರೆ, ಈ ಅಭ್ಯಾಗತರನ್ನು ಪತ್ತೆ ಹಚ್ಚುವ ಸಂಭ್ರಮದಲ್ಲಿ ಕೆಲವು ಸಾರಿ ನಮ್ಮ ದೇಹ ಅತಿಯಾದ ಬುದ್ಧಿವಂತಿಕೆಯನ್ನು ತೋರಿಸುವುದುಂಟು! ಹೇಳಿ-ಕೇಳಿ, ನಮ್ಮ ಸುತ್ತಲ ವಾತಾವರಣದಲ್ಲಿ ಹಾದಿ-ಬೀದಿಯ ಧೂಳು, ಮನೆಯ ಧೂಳು, ಹೂ-ಪರಾಗಗಳು, ಸೂಕ್ಷ್ಮಜೀವಿಗಳು, ಹೀಗೆ ನೂರಾರು ವಸ್ತುಗಳು ಇರುತ್ತವೆ. ಯಾವುದರಿಂದ ನಮಗೆ ಅಪಾಯ ಎಂಬುದನ್ನು ಗುರುತಿಸುವುದನ್ನು ಬಿಟ್ಟು, ನಿರುಪದ್ರವಿಯಾದ, ನಿರಪಾಯಕಾರಿಯಾದ ವಸ್ತುಗಳಿಗೂ ನಮ್ಮ ದೇಹ ಅತಿ ಉಗ್ರವಾಗಿ ಪ್ರತಿಕ್ರಯಿಸುತ್ತದೆ. ಇದನ್ನೇ ನಾವು ಅಲರ್ಜಿ ಎನ್ನುತ್ತೇವೆ. ಅಂತಹ ಸಂದರ್ಭಗಳಲ್ಲಿ ನಮಗೆ ತುರಿಕೆ, ಊತ, ಉಬ್ಬಸ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಲವು ಸಾರಿ ಇದು ಅಪಾಯಕಾರಿ ಮಟ್ಟಕ್ಕೂ ಹೋಗಿ, ಸಾವು ಕೂಡ ಸಂಭವಿಸಬಹುದು. 
             ಈ ರೀತಿಯ ತೀಕ್ಷ್ಣ ಪ್ರತಿಕ್ರಿಯೆ, ಹಳ್ಳಿಗರಿಗಿಂತ ನಗರವಾಸಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಹಲವು ವರ್ಷಗಳಿಂದ ನಾನು ಗಮನಿಸಿದ್ದೇನೆ. ಗ್ರಾಮಸ್ಥರು ಕಷ್ಟಜೀವಿಗಳು ಮತ್ತು ಸಹಿಷ್ಣುಗಳು. ಅವರ ದೇಹ ಬಾಲ್ಯದಿಂದಲೇ ಇಂತಹ ಪರಕೀಯ ವಸ್ತುಗಳಿಗೆ ತೆರೆದುಕೊಂಡಿರುತ್ತದೆ. ಯಾವ ಹೊತ್ತೂ ಅವೆಲ್ಲ ತಮ್ಮ ಸುತ್ತುಮುತ್ತಲೇ ಇರುವುದರಿಂದ ಅವುಗಳಿಂದ ತಮಗೆ ಅಪಾಯವಿಲ್ಲ ಎಂಬುದನ್ನು ಮನಗಂಡು ಅವುಗಳ ಇರುವಿಕೆಯನ್ನು ಅಲಕ್ಷಿಸುವುದನ್ನು ಕಲಿತಿರುತ್ತದೆ. 
            ನಮ್ಮ ರೋಗನಿಯಂತ್ರಣ ಶಕ್ತಿಗೂ, ನಮ್ಮ ಮೆದುಳಿಗೂ ಒಂದು ರೀತಿಯ ಸಂಕೀರ್ಣ ಸಂಬಂಧವಿದೆಯೆಂದು ನನಗನ್ನಿಸುತ್ತದೆ. ನಗರಜೀವಿಗಳು ಸುಖಜೀವಿಗಳು, ಆರೋಗ್ಯದ ಬಗ್ಗೆ ಅರಿವು ಮತ್ತು ಅತೀವ ಕಾಳಜಿ ಇರುವವರು. ತಮ್ಮ ಸುತ್ತಮುತ್ತಲ ವಿಷಯಗಳಿಗೆ ಅನಾವಶ್ಯಕವಾಗಿ ಹಾಗೂ ಅತಿಯಾಗಿ ಸ್ಪಂದಿಸುತ್ತಾರೆ. ತನಗೆ ಆ ವಾಸನೆ ಆಗದು, ಈ ರುಚಿ ವಾಕರಿಕೆ ಬರಿಸುತ್ತದೆ, ಮತ್ತೊಂದನ್ನು ಕಂಡರೆ ಹಿಡಿಸುವುದಿಲ್ಲ.... ಹೀಗೆ ಅವರಿಗರಿವಿಲ್ಲದೆಯೇ ಪ್ರತಿಯೊಂದು ವಸ್ತುವನ್ನೂ ಪರಕೀಯ ಎಂಬ ದೃಷ್ಟಿಯಿಂದ ನೋಡುವಂತೆ, ತಮ್ಮ ದೇಹಪ್ರಕೃತಿಯನ್ನು ಒಂದು ರೀತಿಯಲ್ಲಿ ತರಬೇತಿಗೊಳಿಸುತ್ತಾರೆ. ಅವರ ಇಡೀ ಶರೀರ ಯಾವಾಗಲೂ ಜಾಗರೂಕ ಸ್ಥಿತಿಯಲ್ಲಿರುತ್ತದೆ! ಈ ಮನೋಭಾವದಿಂದಾಗಿ ದಿನನಿತ್ಯ ನರಳುತ್ತಾರೆ, ಅವರ ಜೀವನವೇ ಕ್ಲೇಶಮಯಗೊಳ್ಳುತ್ತದೆ! 
            ಅದೇ ಸದಾ ನಿಸರ್ಗದ ಮಡಿಲಲ್ಲಿ ವಾಸಮಾಡುವ ಒಬ್ಬ ಹಳ್ಳಿಗ ಇದಾವುದರ ಪರಿವೆಯೇ ಇಲ್ಲದೆ ನಿರಾತಂಕದಿಂದ, ನೆಮ್ಮದಿಯ ಜೀವನ ನಡೆಸುತ್ತಾನೆ. ಇದೊಂದು ರೀತಿಯಲ್ಲಿ, ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮನಸ್ಥಿತಿಯೆಂದು ನಾನು ಭಾವಿಸುತ್ತೇನೆ. ಎಲ್ಲಿಯವರೆಗೆ ತನಗೆ ಈ ಪರಕೀಯ ವಸ್ತುಗಳಿಂದ ಅಪಾಯವಿಲ್ಲವೋ ಅಲ್ಲಿಯವರೆಗೆ ಎಲ್ಲವೂ ತನ್ನದು, ಎಲ್ಲರೂ ತನ್ನವರು ಎಂಬ ದೃಷ್ಟಿಯನ್ನು ಅದು ಬೆಳೆಸಿಕೊಳ್ಳುತ್ತದೆ. ಇದೇ ಅಲ್ಲವೆ ನಿಜವಾದ ಆರೋಗ್ಯದ ಲಕ್ಷಣ! 
            ಆದ್ದರಿಂದ ನಾವು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ, ನಾವು ಪ್ರಕೃತಿಯೊಂದಿಗೆ ಬೆರೆತು, ಸಾಮರಸ್ಯದಿಂದ ಬದುಕಲು ಕಲಿತರೆ ಸತತ ಆರೋಗ್ಯದ ಜೀವನ ನಮ್ಮದಾಗುತ್ತದೆ.
ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ. ವಂದನೆಗಳು. 

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ  ರಾಜಹಕ್ಕಿ: ಪ್ರಜನನ ಋತುವಿನಲ್ಲಿ ಗಂಡು ಹಕ್ಕಿಗೆ, ದೇಹಕ್ಕಿಂತ ಬಹಳ ಉದ್ದವಾಗಿ ಬೆಳೆಯುವ, ಅಚ್ಚ ಬಿಳಿ ಬಣ್ಣದ ಎರಡು ಬಾಲದ ಗರಿಗಳಿಂದ ಈ ಕೀಟಾಹಾರಿ ಪಕ್ಷಿಯನ್ನು ಗುರುತಿಸಬಹುದು.  ಬಹು ಚಾಕಚಕ್ಯತೆಯಿಂದ, ಲೀಲಾಜಾಲವಾಗಿ ಗಿಡಗಂಟಿಗಳ ಮಧ್ಯೆ ಕೀಟಗಳನ್ನು ಅಟ್ಟಿಸಿಕೊಂಡು ಹೋಗುವಾಗ, ಅದರ ಹಿಂದೆಯೇ ಬಗೆಬಗೆಯ ವಿನ್ಯಾಸದ ಚಿತ್ತಾರಗಳನ್ನು ರಚಿಸುತ್ತಾ ಚಲಿಸುವ ಆ ಬಾಲದ ಗರಿಗಳು ನಿಮ್ಮ ಮುಂದೆ ಒಂದು ಗಂಧರ್ವ ಲೋಕವನ್ನೇ ಸೃಷ್ಟಿಸಿಬಿಡುತ್ತದೆ! ದಂಪತಿಗಳು ಗಿಡದ ಕವಲುಗಳಲ್ಲಿ ತೆಳುವಾದ ಒಣಹುಲ್ಲು-ನಾರುಗಳನ್ನು ಜೇಡರ ಬಲೆಯ ಎಳೆಗಳಿಂದ ಅಂಟಿಸಿ ಮಾಡಿದ ಮುದ್ದಾದ ಗೂಡು ಕಟ್ಟುತ್ತವೆ. ಈ ಸಮಯದಲ್ಲಿ ಗಂಡು ಹಕ್ಕಿ ತನ್ನ ಇಂಪಾದ ಸ್ವರಗಳಿಂದ ಸಂಗಾತಿಯನ್ನು ಕರೆಯುತ್ತದೆ.           

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ೨೨೮೦; ಕಳೆದ ೩೫ ವರ್ಷಗಳಲ್ಲಿ ೭೦,೭೨೫
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧೧೯೦; ಕಳೆದ ೩೫ ವರ್ಷಗಳಲ್ಲಿ ೧೨,೩೦೪.