Saturday, February 6, 2010

ಕಂಕಣ ಸೂರ್ಯನ ಭವ್ಯಾನುಭವ

ಮೊನ್ನೆ ಜನವರಿ ಹದಿನೈದರ ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವ ತವಕ ನನಗೆ ಉಂಟಾದದ್ದು ಹದಿನಾರು ವರ್ಷಗಳ ಹಿಂದೆ. ಆಗ ನನ್ನ ಕಂಪ್ಯೂಟರ್‌ನಲ್ಲಿ ಹೊಸದಾಗಿ ಅಳವಡಿಸಿದ ಖಗೋಳ ತಂತ್ರಾಂಶವನ್ನು ಉಪಯೋಗಿಸಿ, ಮುಂದೆ ಭಾರತದಲ್ಲಿ ನಡೆಯಲಿರುವ ಸಂಪೂರ್ಣ ಸೂರ್ಯಗ್ರಹಣಗಳ ಬಗ್ಗೆ ಕುತೂಹಲದಿಂದ ನೋಡುತ್ತ ನೋಡುತ್ತ ಹೋದಾಗ ೨೦೧೦ ಜನವರಿ ೧೫ರಂದು ಘಟಿಸುವ ಖಗ್ರಾಸ ಸೂರ್ಯಗ್ರಹಣ ನನ್ನ ಗಮನ ಸೆಳೆದಿತ್ತು. ಈ ಗ್ರಹಣದ ವಿಶೇಷತೆ ಏನೆಂದರೆ, ಚಂದ್ರನು ಸೂರ್ಯನ ತಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಿಯೂ ಮುಚ್ಚಲಾರದೆ ನಡುಮಧ್ಯೆ ನಿಲ್ಲುವ ನೋಟವನ್ನು ನೋಡಿದ ನನಗೆ ಹೀಗೂ ಒಂದು ಸೂರ್ಯಗ್ರಹಣ ನಡೆಯಬಹುದೆ ಎಂದು ಅಚ್ಚರಿಯಾಗಿತ್ತು. ಇದಕ್ಕೆ ಉತ್ತರ ಪ್ರೊ. ಜಿ. ಟಿ. ನಾರಾಯಣರಾಯರಲ್ಲದೆ ಇನ್ನಾರಿಗೆ ಗೊತ್ತಿದ್ದೀತು ಎಂದು ನೇರವಾಗಿ ಅವರನ್ನೇ ಸಂಪರ್ಕಿಸಿದೆ.

‘ಇದನ್ನು ಕಂಕಣ ಗ್ರಹಣ ಎನ್ನುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಂದ್ರನು ಭೂಮಿಯಿಂದ ಸ್ವಲ್ಪ ಹೆಚ್ಚು ದೂರದಲ್ಲಿರುವುದರಿಂದ ಅವನ ಸೈಜ್ ಸ್ವಲ್ಪ ಚಿಕ್ಕದಾಗಿ ತೋರುತ್ತದೆ. ಹಾಗಾಗಿ ಈ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಮಧ್ಯದಲ್ಲಿ ಚಂದ್ರ ಮತ್ತು ಅವನ ಸುತ್ತಲೂ ಸೂರ್ಯನ ಕಿರಣಗಳು ದೊಡ್ಡ ಬಳೆಯ ರೀತಿ ಕಾಣಿಸುತ್ತದೆ’ ಎಂಬ ವಿಷಯ ತಿಳಿಸಿದರು. ಈ ಗ್ರಹಣ ನಾನಿರುವ ಊರಿನಿಂದ ಕೆಲವೇ ನೂರು ಕಿಲೋಮೀಟರುಗಳ ದೂರದಲ್ಲಿ ನಡೆಯುವುದರಿಂದ ಅದನ್ನು ನೋಡಲೇಬೇಕೆಂಬ ಚಪಲ ಅಲ್ಲಿಂದಲೇ ಶುರುವಾಯಿತು.

ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದೇ ಒಂದು ವಿಶೇಷವಾದ, ವರ್ಣನಾತೀತವಾದ ಅನುಭವ. ಹಿಂದೆ ೧೯೮೦ರ ಫೆಬ್ರವರಿ ಹದಿನಾರರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗ್ರಹಣವನ್ನು ಬಹಳ ಸಾಹಸಪಟ್ಟು ನೋಡಿದ್ದೆ. ಇದರಲ್ಲಿ ಸಾಹಸ ಎಂಥದ್ದು ಎಂದು ನೀವು ಕೇಳಬಹುದು. ಆ ಅನುಭವವನ್ನು ಇಷ್ಟು ವರ್ಷಗಳಲ್ಲಿ ನೂರಾರು ಬಾರಿ ಪುನಃಪುನಃ ಮನಸ್ಸಿನಲ್ಲಿಯೇ ಮನನ ಮಾಡಿದ್ದೇನೆ; ಹತ್ತು-ಹಲವು ಮಂದಿಯೊಂದಿಗೆ ಹೇಳಿ ಸಂಭ್ರಮಿಸಿದ್ದೇನೆ. ಆದ್ದರಿಂದ ಅದಿನ್ನೂ ನನ್ನ ನೆನಪಿನ ಅಂಗಳದಲ್ಲಿ ಹಚ್ಚಹಸುರಾಗಿಯೇ ಇದೆ! ಆದ್ದರಿಂದ ಈ ಲೇಖನದ ಮೊದಲ ಕಂತಿನಲ್ಲಿ ನನ್ನ ಹಳೆಯ ಅನುಭವವನ್ನು ಬರೆದು, ಮುಂದಿನ ವಾರ ರಾಮೇಶ್ವರದ ಕತೆಯನ್ನು ಹೇಳಲು ತೀರ್ಮಾನಿಸಿದ್ದೇನೆ.

ಕೊಡಗಿನಿಂದ ಉತ್ತರ ಕನ್ನಡ ಜಿಲ್ಲೆಯನ್ನು ತಲುಪಲು ಸುಮಾರು ೩೨೫ ಕಿಮೀ ಪ್ರಯಾಣ ಮಾಡಬೇಕು. ಅಂದರೆ ಸುಮಾರು ಎಂಟು-ಒಂಭತ್ತು ಘಂಟೆಗಳ ಪ್ರಯಾಣ. ಸಾಧಾರಣವಾಗಿ ಬಾಕಿ ಎಲ್ಲಾ ದಿನಗಳಲ್ಲಿ ಇಲ್ಲಿಂದ ಮಂಗಳೂರು ತಲುಪಿದರೆ, ಅಲ್ಲಿಂದ ಕುಂದಾಪುರದ ಕಡೆಗೆ ಹತ್ತಾರು ಬಸ್‌ಗಳು ಸಿಕ್ಕುತ್ತವೆ ಎಂದು ಕೇಳಿ ತಿಳಿದುಕೊಂಡೆ. ಸಂಪೂರ್ಣಗ್ರಹಣ ಹಿಡಿಯುವುದು ಮಧ್ಯಾಹ್ನ ಮೂರೂವರೆ ಘಂಟೆಗೆ ತಾನೇ? ಬೆಳಿಗ್ಗೆ ಹೊತ್ತಿಗೆ ಮುಂಚೆ ಹೊರಟರೆ, ಮಧ್ಯಾಹ್ನದ ಮೂರು ಘಂಟೆಯ ಹೊತ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ತಲುಪಬಹುದು. ಅಲ್ಲಿಗೆ ಯಾವತ್ತೂ ಬಸ್ಸುಗಳಿಗೆ ಕೊರತೆಯಿರುವುದಿಲ್ಲ. ಬಹುಶಃ ನಾನೂ ಆವತ್ತು ಹಾಗೆ ಆಲೋಚಿಸಿದ್ದೆ. ಅದು ಆವತ್ತಿನ ಮಟ್ಟಿಗೆ ಸುಳ್ಳಾಗುವುದೆಂದು ಕನಸಿನಲ್ಲೂ ಎಣಿಸಿರಲಿಲ್ಲ!

‘ಸುಮ್ಮನೆ ಒಂದು ಗ್ರಹಣವನ್ನು ನೋಡಲು ಅಷ್ಟು ದೂರ ಯಾಕೆ ಹೋಗುತ್ತೀಯ’ ಎಂದು ಅಮ್ಮ ಹಿಂದಿನ ರಾತ್ರಿಯೇ ಕೊಕ್ಕೆ ಹಾಕಿದ್ದರು. ಏನೇ ಆಗಲಿ ಈ ಗ್ರಹಣವನ್ನು ನೋಡಲೇಬೇಕೆಂದು ವೀರಾಜಪೇಟೆಯಿಂದ ಬೆಳಿಗ್ಗೆ ಐದೂವರೆ ಘಂಟೆಗೆ ಮಡಿಕೇರಿಯ ಬಸ್ ಹತ್ತಿದೆ. ಮಡಿಕೇರಿ ತಲುಪುವಾಗ ಆರೂವರೆ ಘಂಟೆಯಾಗಿತ್ತು. ಯಾವುದೋ ಒಂದು ಪ್ರೈವೇಟ್ ಬಸ್ ಮಂಗಳೂರಿಗೆ ಹೋಗುತ್ತದೆ ಎಂದು ತಿಳಿದಾಕ್ಷಣ ಓಡಿ ಆ ಬಸ್ಸನ್ನು ಹತ್ತಿದೆ.

ಕುಂದಾಪುರಕ್ಕೆ, ಅಲ್ಲಿಂದ ಕಾರವಾರದ ಕಡೆಗೆ ಹೋಗುವುದಿದ್ದರೆ ಮಂಗಳೂರಿಗೆ ಯಾಕೆ ಹೋಗಬೇಕು, ಬಿಸಿ ರೋಡ್ ತಲುಪಿದರೆ ಅಲ್ಲಿಂದಲೇ ನೇರವಾಗಿ ಯಾವುದಾದರೂ ವಾಹನ ಸಿಕ್ಕಿಯೇ ಸಿಕ್ಕುತ್ತದೆ ಎಂದು ಸಹ ಪ್ರಯಾಣಿಕರು ಹೇಳಿದ ಮೇರೆಗೆ, ಬಿಸಿ ರೋಡಿಗೇ ಟಿಕೆಟ್ ತೆಗೆದುಕೊಂಡೆ. ಪುತ್ತೂರು ತಲುಪುವಾಗ ಒಂಭತ್ತು ಘಂಟೆ ಕಳೆದಿತ್ತು. ಅದೇಕೋ ಆವತ್ತು ಬಹಳ ಬೇಗನೆ ತಲುಪಿದ್ದೇನೆ ಅನ್ನಿಸಿತು. ಬಸ್ಸಿನವರಿಗೆ ಅದೇನು ತೋಚಿತೋ ಇದ್ದಕ್ಕಿದ್ದಂತೆ ಪುತ್ತೂರಿನಲ್ಲಿ ಬಸ್ಸಿನ ಪ್ರಯಾಣಕ್ಕೆ ಫುಲ್ ಸ್ಟಾಪ್ ಹಾಕಿ ನಿಲ್ಲಿಸಿಬಿಟ್ಟರು. ಎಲ್ಲರೂ ಬಸ್ಸಿನಿಂದ ಇಳಿಯತೊಡಗಿದರು. ಈ ಬಸ್ಸಿಗೇನಾಯ್ತು?

ದಾರಿಯುದ್ದಕ್ಕೂ ಆಲೋಚಿಸುತ್ತಿದ್ದೆ: ಇದೇನಿದು? ಒಂಭತ್ತು ಘಂಟೆಯಾದರೂ ಯಾವ ಮಕ್ಕಳೂ ಶಾಲೆಗೆ ಹೋಗುವುದು ಕಾಣುತ್ತಿಲ್ಲವಲ್ಲ? ಈವತ್ತು ಯಾವುದಾದರೂ ರಜೆಯೆ? ಅಷ್ಟು ಹೊತ್ತಾದರೂ ಯಾವ ಅಂಗಡಿಯೂ ಇನ್ನೂ ತೆರೆದದ್ದು ಕಾಣಲಿಲ್ಲ. ಆಶ್ಚರ್ಯವಾಯಿತು. ಬಸ್ಸಿನಿಂದ ಇಳಿದು ಸುತ್ತಲೂ ನೋಡಿದೆ. ಎಲ್ಲಿಯೂ ಯಾವ ಬಸ್ಸಿನ ಸುಳಿವೂ ಇರಲಿಲ್ಲ. ಜನರೂ ಒಬ್ಬಿಬ್ಬರು ಮಾತ್ರ ಅಲ್ಲಿ-ಇಲ್ಲಿ ನಿಂತಿದ್ದರು. ಇದೇನಿದು? ಎಲ್ಲವೂ ಸ್ತಬ್ದ? ಈ ಊರಿನಲ್ಲಿ ಯಾವುದಾದರೂ ಬಂದ್ ಘೋಷಣೆಯಾಗಿದೆಯೇ ಎಂದು ಯಾರನ್ನೋ ಕೇಳಿದೆ. ಈವತ್ತು ಗ್ರಹಣವಾದದ್ದರಿಂದ ಹೀಗೆ ಅಂತ ಗೊತ್ತಾಯಿತು. ಎಂಥ ವಿಪರ್ಯಾಸ! ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣದ ಬಗ್ಗೆ ತಿಳಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ಬೇಕೇ? ಶಾಲೆಗೆ ರಜಾ ಕೊಟ್ಟು ಮಕ್ಕಳನ್ನು ಸಂಪೂರ್ಣವಾಗಿ ಕತ್ತಲಿನಲ್ಲಿಡುತ್ತಿದ್ದಾರಲ್ಲ! ಛೆ!

ಮುಂದೇನು, ಎಂದು ಆಲೋಚಿಸಿದೆ. ಅದೇ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿದ್ದರೆ ಅಲ್ಲಿಂದ ಹೇಗಾದರೂ ಪ್ರಯಾಣ ಮುಂದುವರಿಸಬಹುದಿತ್ತೇನೋ. ಹೀಗೆ ಎಲ್ಲಾ ಬಿಟ್ಟು ಪುತ್ತೂರಿನಲ್ಲಿ ಸಿಕ್ಕಿಕೊಂಡೆನಲ್ಲ! ಹಾಗೆಂದುಕೊಳ್ಳುವ ಹೊತ್ತಿಗೆ ಮತ್ತೊಂದು ಮಂಗಳೂರಿಗೆ ಹೋಗುವ ಬಸ್ ಬಂದಿತು. ಬಸ್ಸಿಗೆ ಬಸ್ಸೇ ಖಾಲಿ ಖಾಲಿ! ಬಿಸಿ ರೋಡ್ ಹೇಗೂ ತಲುಪುವಷ್ಟರಲ್ಲಿ ಹತ್ತೂವರೆಯಾಗಿತ್ತು. ಎಲ್ಲಿಯೂ ನಿಲ್ಲದೆ ನಾನ್ ಸ್ಟಾಪ್ ಬಸ್‌ನಂತೆ ಪ್ರಯಾಣ. ತಿನ್ನಲು ಯಾವ ಅಂಗಡಿಯೂ ಇಲ್ಲ, ಹೋಟಲ್ಲೂ ಇಲ್ಲ. ಮೊದಲೇ ತಿಳಿದಿದ್ದರೆ ತಿನ್ನಲು ಏನನ್ನಾದರೂ ಕಟ್ಟಿಸಿಕೊಂಡು ಬರಬಹುದಿತ್ತು.

ರಸ್ತೆಯೆಲ್ಲ ಭಣಗುಟ್ಟುತ್ತಿತ್ತು. ಒಂದೆರಡು ಲಾರಿ-ಟ್ರಕ್‌ಗಳನ್ನು ಬಿಟ್ಟರೆ ಯಾವ ವಾಹನವೂ ಕಂಡುಬರಲಿಲ್ಲ. ಆಗೊಂದು ಈಗೊಂದು ಕಾರು ಭರ್ರನೆ ಹಾದುಹೋಗುತ್ತಿದ್ದವು. ಯಾರಾದರೂ ಕುಂದಾಪುರ-ಕಾರವಾರದ ಕಡೆಗೆ ಹೋಗುವವರಿದ್ದರೆ! ಏನಾದರಾಗಲಿ ಎಂದು ಒಂದೊಂದು ಕಾರಿಗೂ ಕೈ ತೋರಿಸತೊಡಗಿದೆ. ಕೊನೆಗೂ ನನ್ನ ಅದೃಷ್ಟಕ್ಕೆ ಬ್ರಹ್ಮಾವರಕ್ಕೆ ಹೋಗುತ್ತಿದ್ದ ಒಂದು ಕಾರು ಸಿಕ್ಕಿತು. ಅರ್ಜೆಂಟ್, ಕಾರವಾರಕ್ಕೆ ಹೋಗಬೇಕು ಎಂದು ಹೇಳಿ ಹತ್ತಿದೆ. ರಸ್ತೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಬಿಟ್ಟ ಬಾಣದ ಹಾಗೆ ಕಾರು ಮೂಡಬಿದರೆ, ಕಾರ್ಕಳ ದಾರಿಗಾಗಿ, ಉಡುಪಿಯಲ್ಲಿ ನನ್ನನ್ನು ಇಳಿಸಿ ಹೋಯಿತು. ಸಾಲದ್ದಕ್ಕೆ ೫೦ ರೂಪಾಯಿಗಳನ್ನೂ ತೆರಬೇಕಾಯಿತು. ಆಗ ವೇಳೆ ಮಧ್ಯಾಹ್ನ ಒಂದೂವರೆ ಘಂಟೆ!

ಏನೇ ಆದರೂ ನಾನು ಮೂರೂವರೆಯೊಳಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಬೇಕಿತ್ತು. ಸಂಪೂರ್ಣ ಸೂರ್ಯಗ್ರಹಣವನ್ನು ನೋಡಬೇಕಾದರೆ ಕನಿಷ್ಟ ಬಟ್ಕಳವನ್ನಾದರೂ ತಲುಪಲೇ ಬೇಕಿತ್ತು. ಈಗ ಉಳಿದಿರುವುದು ಎರಡು ತಾಸುಗಳು ಮಾತ್ರ! ಆ ದಾರಿಗಾಗಿ ಹೋಗುವ ಎಲ್ಲ ವಾಹನಗಳಿಗೂ ಕೈತೋರುತ್ತಲೇ ಇದ್ದೆ. ಎಲ್ಲರಿಗೂ ಅದೇನು ಅರ್ಜೆಂಟೋ ಒಬ್ಬರೂ ನಿಲ್ಲಿಸುವ ಕರುಣೆ ತೋರಿಸಲಿಲ್ಲ. ಕೊನೆಗೆ ಏನೂ ತೋಚದೆ ಕೈಸನ್ನೆ ಮಾಡುತ್ತಾ ಒಂದು ಕಾರಿನ ಹಿಂದೆಯೇ ಓಡಿದೆ. ಅವರಿಗೆ ಅದೇನನ್ನಿಸಿತೋ, ಸ್ವಲ್ಪ ದೂರ ಹೋಗಿ ನಿಲ್ಲಿಸಿದರು. ಕುಮಟಾದಲ್ಲಿ ಯಾರದ್ದೋ ಸಾವು ನೋಡಲು ಹೋಗುತ್ತಿದ್ದವರು. ಬಹುಶಃ ನನ್ನ ಆತಂಕದ ಮುಖ ನೋಡಿ ನನಗೂ ಅಂತಹದ್ದೇ ಅನಿವಾರ್ಯ ಪರಿಸ್ಥಿತಿ ಇರಬಹುದೇನೋ ಅನ್ನಿಸಿರಬೇಕು! ಕಾರು ಹತ್ತಿದ ಮೇಲೆ ನಾನು ಹೊರಟ ಉದ್ದೇಶ ತಿಳಿಸಿದೆ. ಕಾರಿನಲ್ಲಿದ್ದ ಯಾರಿಗೂ ನನ್ನ ಘನಕಾರ್ಯ ರುಚಿಸಿದ ಹಾಗೆ ಕಾಣಲಿಲ್ಲ. ಆದರೂ ಹತ್ತಿಸಿಕೊಂಡು ಆಗಿತ್ತು, ಪ್ರಯಾಣ ಮುಂದುವರೆಸಿದರು. ನನ್ನ ಪುಣ್ಯಕ್ಕೆ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲವಾದ್ದರಿಂದ ನಮ್ಮ ಕಾರು ವೇಗವಾಗಿ ಹೋಗಲು ಸಾಧ್ಯವಾಗಿತ್ತು. ಎರಡೂವರೆ ಘಂಟೆಗೇ ಕುಂದಾಪುರವನ್ನು ತಲುಪಿದೆವು.

ಯಾವ ಗ್ರಹಣವನ್ನು ನೋಡಬೇಕೆಂದು ಇಲ್ಲಿಯವರೆಗೆ ಬಂದಿದ್ದೆನೋ ಅದು ೨.೨೦ಕ್ಕೇ ಹಿಡಿಯಲು ಶುರುವಾಗಿತ್ತು. ನಾನು ಮತ್ತೊಂದು ಪೆದ್ದು ಕೆಲಸವನ್ನು ಮಾಡಿದ್ದೆ. ಸೂರ್ಯನನ್ನು ನೋಡಲು ತೆಗೆದಿರಿಸಿಕೊಂಡಿದ್ದ ಎಕ್ಸ್‌ರೇ ಹಾಳೆಯನ್ನು ಮನೆಯಲ್ಲೇ ಬಿಟ್ಟುಬಂದಿದ್ದೆ!

ಗ್ರಹಣದ ಸಮಯದಲ್ಲಿ ಸೂರ್ಯನನ್ನು ನೋಡಬಾರದೆಂದು ಎಲ್ಲರೂ ಸತತವಾಗಿ ಎಚ್ಚರಿಕೆ ನೀಡುವುದನ್ನು ಕೇಳಿದ್ದೇನೆ. ಇದು ಯಾಕೋ ನನಗೆ ತಿಳಿಯದು. ಹಾಗೆ ನೋಡಿದರೆ, ಯಾವ ಹೊತ್ತೂ ಸೂರ್ಯನನ್ನು ನೋಡಲೇಬಾರದು. ಮುಂಜಾನೆಯ ಮತ್ತು ಸಂಜೆಯಲ್ಲಿ ಕಾಣುವ ಎಳೆ ಸೂರ್ಯನನ್ನು ಮಾತ್ರ ನೇರವಾಗಿ ನೋಡಲು ಸಾಧ್ಯ. ಸಾಧಾರಣವಾಗಿ ನಾವು ಯಾರೂ ಪ್ರಖರವಾದ ಸೂರ್ಯನನ್ನು ನೇರವಾಗಿ ದೃಷ್ಟಿಸಿ ನೋಡುವುದಕ್ಕೆ ಆಗುವುದೇ ಇಲ್ಲ. ಆ ಕಿರಣಗಳು ನಮ್ಮ ದೃಷ್ಟಿಪಟಲವನ್ನು ಸುಟ್ಟುಹಾಕುವ ಶಕ್ತಿ ಹೊಂದಿರುತ್ತವೆ. ಅಲ್ಲದೆ ಸಾಮಾನ್ಯ ದಿನಗಳಲ್ಲಿ ಅವನಲ್ಲಿ ಯಾವ ಆಕರ್ಷಣೆ ಕೂಡಾ ಇಲ್ಲವಲ್ಲ!

ಆದರೆ ಗ್ರಹಣದ ಸಮಯದಲ್ಲಿ ಹಾಗಲ್ಲ; ಅವನ ಮೇಲೆ ಅದೇನೋ ವಿಶೇಷತೆ ನಡೆಯುತ್ತದೆ, ಅದು ನಮ್ಮನ್ನು ಆಕರ್ಷಿಸುತ್ತದೆ. ಆ ಸಮಯದಲ್ಲಿ ಸೂರ್ಯನಿಂದ ಯಾವ ಪ್ರತ್ಯೇಕವಾದ ಕಿರಣಗಳೂ ಹೊರಹೊಮ್ಮುವುದಿಲ್ಲ ಅಥವಾ ಯಾವ ಹೊಸ ಪ್ರಭೆಯೂ ನಮ್ಮ ಮೇಲೆ ಬಿದ್ದು ಹೊಸದಾದ ದುಷ್ಪರಿಣಾಮ ಬೀರುವುದಿಲ್ಲ. ಯಾವತ್ತೂ ಸೂರ್ಯನನ್ನು ನೇರವಾಗಿ ನೋಡಬಾರದು, ಆ ಸಮಯದಲ್ಲೂ ಅವನನ್ನು ನೋಡಬಾರದು. ಅಷ್ಟೆ.

ಕಾರಿನಲ್ಲಿದ್ದ ಯಾರಿಗೂ ಗ್ರಹಣದ ಬಗ್ಗೆ ಕುತೂಹಲವಾಗಲೀ ಆಸಕ್ತಿಯಾಗಲೀ ಇದ್ದಂತಿರಲಿಲ್ಲ. ಎಕ್ಸ್‌ರೇ ಶೀಟ್ ಇರಲಿಲ್ಲವಾದ್ದರಿಂದ ಒಂದು ಕ್ಷಣ ಕತ್ತೆತ್ತಿ ಕಾರಿನ ಹೊರಗೆ ಸೂರ್ಯನನ್ನು ನೋಡುವುದು, ತಕ್ಷಣ ಕಣ್ಣು ಮುಚ್ಚಿಕೊಳ್ಳುವುದು. ಅಷ್ಟಕ್ಕೇ ಅವನ ಚಿತ್ರ ಸ್ಪಷ್ಟವಾಗಿ ದೃಷ್ಟಿಗೆ ಗೋಚರವಾಗಿ ಬಿಡುತ್ತಿತ್ತು!

ಬೈಂದೂರು ತಲುಪುವಾಗ ಮಧ್ಯಾಹ್ನ ಮೂರು ಘಂಟೆ; ಸ್ವಲ್ಪ ಸ್ವಲ್ಪವಾಗಿ ಚಂದ್ರ ಸೂರ್ಯನನ್ನು ನುಂಗುತ್ತಿದ್ದ; ಆ ವೇಳೆಗೆ ಸೂರ್ಯನನ್ನು ಅರ್ಧಭಾಗ ನುಂಗಿಯಾಗಿತ್ತು. ಅಲ್ಲಿಂದ ೩.೨೦ಕ್ಕೆ ಶಿರೂರು. ಅಂತೂ ದಕ್ಷಿಣ ಕನ್ನಡ ದಾಟಿ, ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಆಗಿತ್ತು. ಇಲ್ಲಿಂದ ಉತ್ತರಕ್ಕೆ ಯಾವುದೇ ಜಾಗದಲ್ಲಿಯೂ ಸಂಪೂರ್ಣ ಗ್ರಹಣದ ನೋಟ ಲಭ್ಯ. ಕೊಟ್ಟಕೊನೆಗೂ ಭಟ್ಕಳವನ್ನು ೩.೩೦ಕ್ಕೆ ತಲುಪಿದೆವು. ಗ್ರಹಣ ಶೇಕಡ ೮೦ರಷ್ಟು ಆವರಿಸಿತ್ತು. ಇಲ್ಲೇ ಇಳಿದುಬಿಟ್ಟರೆ ಸಂಪೂರ್ಣ ಗ್ರಹಣವನ್ನು ನೋಡಬಹುದು ಎಂದು, ಇಲ್ಲೇ ಇಳಿದುಕೊಳ್ಳುತ್ತೇನೆ. ನಿಮಗೆಲ್ಲ ತುಂಬಾ ಥ್ಯಾಂಕ್ಸ್ ಎಂದು ಹೇಳಿದೆ. ಅಲ್ಲಿ ನನ್ನನ್ನು ಇಳಿಸಿದ ಕಾರು ಕುಮಟಾ ಕಡೆಗೆ ಮುಂದುವರಿಯಿತು.

ರಸ್ತೆಯ ಬದಿಯಲ್ಲೇ ಇಳಿದಿದ್ದೆ. ಆ ತುದಿಯಿಂದ ಈ ತುದಿಯವರೆಗೂ ಎಲ್ಲವೂ ನೀರವ! ಒಂದು ನರಪಿಳ್ಳೆಯೂ ಕಾಣುತ್ತಿರಲಿಲ್ಲ. ಏನಾಗಿದೆ ಈ ಜನಕ್ಕೆ! ಎಲ್ಲರೂ ಎಲ್ಲಿ ಹೋದರು? ಇಂಥ ಒಂದು ಅದ್ಭುತ ಸಂಗತಿ ತಮ್ಮೂರಿನಲ್ಲೇ ನಡೆಯುತ್ತಿರುವಾಗ ಮನೆಯೊಳಗೆ ಅವಿತು ಕುಳಿತಿದ್ದಾರಲ್ಲ? ಹಾಗೇ ತುಸು ದೂರ ನಡೆದು ಹೋದೆ. ಒಂದು ಶಾಲೆಯ ಮುಂದುಗಡೆ ವಿಶಾಲವಾದ ಆವರಣದಲ್ಲಿ ಸುಮಾರು ೫೦-೫೫ ಜನ ನೆರೆದಿದ್ದರು. ಹಲವು ವಿದ್ಯಾರ್ಥಿಗಳೂ ಇದ್ದರು. ವಿಶೇಷ ಕನ್ನಡಕಗಳನ್ನು ಬಳಸಿ ಗ್ರಹಣವನ್ನು ವೀಕ್ಷಿಸುತ್ತಿದ್ದರು. ಸದ್ಯ, ಜೊತೆಗೆ ಸ್ವಲ್ಪವಾದರೂ ವೈಜ್ಞಾನಿಕ ಮನೋಭಾವವಿರುವ ಮಂದಿ ಸಿಕ್ಕಿದರಲ್ಲ ಎಂದು ನಾನೂ ಗುಂಪಿನಲ್ಲಿ ಸೇರಿಕೊಂಡೆ.

೩.೩೫ರ ವೇಳೆಗೆ ಸುತ್ತಲೂ ಕತ್ತಲು ಆವರಿಸತೊಡಗಿತು. ಇದು ಸಂಜೆಯ ಕತ್ತಲಿನ ಹಾಗೆ ಕೆಂಪು-ಕಿತ್ತಳೆ ಛಾಯೆಗಳಿಂದ ಕತ್ತಲಿನೆಡೆಗೆ ನಿಧಾನವಾಗಿ, ಸ್ವಲ್ಪಸ್ವಲ್ಪವಾಗಿ ವ್ಯಾಪಿಸಲಿಲ್ಲ. ಒಂದು ರೀತಿಯ ವಿಚಿತ್ರವಾದ ಕಪ್ಪು ಛಾಯೆ! ಐದೇ ನಿಮಿಷಗಲ್ಲಿ ಕತ್ತಲಾಗಿಬಿಟ್ಟಿತು. ವ್ಹಾ! ನೆತ್ತಿಯ ಬಳಿ ಮೊದಲು ಕಂಡದ್ದು ಶುಕ್ರ ಗ್ರಹ! ಈಗ ಸೂರ್ಯನನ್ನು ಯಾವುದೇ ಕಪ್ಪು ಹಾಳೆಯಿಲ್ಲದೆ, ನೇರವಾಗಿ ನೋಡತೊಡಗಿದೆವು.


ಚಂದ್ರ ಸೂರ್ಯನನ್ನು ಮುಚ್ಚುತ್ತಿದ್ದಂತೆಯೇ ಅವನ ಸುತ್ತಲೂ ಒಂದು ಪ್ರಭಾವಲಯ ಕಾಣತೊಡಗಿತು. ಬರಬರುತ್ತ ಅದು ದಟ್ಟವಾಗಿ, ನೋಡನೋಡುತ್ತಿದ್ದಂತೆಯೇ ಮೇಲಿನ ಎಡಬದಿಯಲ್ಲಿ ಒಂದು ಬೆಳಕಿನ ಉಂಡೆ ಝಗ್ಗನೆ ಉಬ್ಬಿ ನಿಂತಿತು. ಇದನ್ನು ವಜ್ರದುಂಗುರ ಎನ್ನುತ್ತಾರೆ. ಸಮಯ ಸರಿಯಾಗಿ ೩.೪೦. ಈ ಉಂಗುರ ನಾಲ್ಕು ಸೆಕೆಂಡುಗಳ ಕಾಲ ಮಾತ್ರ ಕಾಣಲು ಲಭ್ಯ. ಸುತ್ತಲೂ ನಕ್ಷತ್ರಗಳು ಒಂದೊಂದೇ ಪಿಳಪಿಳನೆ ಕಾಣತೊಡಗಿದವು. ನಾನು ಗುರುತಿಸಿದ ನಕ್ಷತ್ರಗಳು, ಅಶ್ವಿನೀ, ಕೃತ್ತಿಕಾ, ರೋಹಿಣೀ, ಮೃಗಶಿರಾ, ಆರ್ದ್ರಾ, ಇವಲ್ಲದೆ ಉತ್ತರದಲ್ಲಿ ಧ್ರುವ, ಶ್ರವಣ, ಅಭಿಜಿತ್, Deneb, Capella ಮತ್ತು ದಕ್ಷಿಣದಲ್ಲಿ Achernar, Fomalhaut, ಅದರೊಂದಿಗೆ ಸೂರ್ಯನ ಸಮೀಪವೇ ಬುಧಗ್ರಹ! ಅಲ್ಲದೆ ಸುತ್ತಲೂ ಕಾಣುತ್ತಿದ್ದ ಎಲ್ಲ ನಕ್ಷತ್ರಪುಂಜಗಳನ್ನೂ ಗುರುತಿಸಿದೆ.

ಸೂರ್ಯನ ಸುತ್ತ ಬೆಳ್ಳಿಯ ಪ್ರಭೆ ವಿಜ್ರಂಭಿಸುತ್ತಿದ್ದ ಹಾಗೇ ಕತ್ತಲು ಆವರಿಸಿದ ಇಡೀ ಆಕಾಶ ಒಂದೂವರೆ ನಿಮಿಷಗಳ ಕಾಲ ಸ್ತಬ್ದವಾಗಿ ನಿಂತಿತು. ಎಂಥ ರಮ್ಯ ನೋಟ! ಎಲ್ಲರೂ ಹೋ! ಎಂದು ಕೂಗುತ್ತಾ ಸಂಭ್ರಮಿಸಿದರು. ಇದನ್ನು ಅನುಭವಿಸಲು ಇಲ್ಲಿಯವರೆಗೆ ಬಂದೆನೇ? ಇಷ್ಟು ಪರಿಪಾಡಲು ಪಟ್ಟೆನೆ? ಸಂತೋಷದಿಂದ ನನಗೆ ಕಣ್ಣಲ್ಲಿ ನೀರೇ ಬಂದುಬಿಟ್ಟಿತು! ಬೆಳಿಗ್ಗೆಯಿಂದ ಪಟ್ಟ ಕಷ್ಟವೆಲ್ಲ ಮಂಗಮಾಯವಾಗಿತ್ತು! ೩.೪೩ಕ್ಕೆ ಪುನಃ ಸೂರ್ಯನ ಕೆಳ ಎಡಬದಿಯಲ್ಲಿ ವಜ್ರದುಂಗುರ ಕಾಣಿಸಿಕೊಂಡಿತು. ಪುನಃ ಎಲ್ಲರೂ ಚಪ್ಪಾಳೆ ತಟ್ಟಿ ಹೋ! ಎಂದು ಕುಣಿದರು.


ಅದಾದ ಒಂದೇ ನಿಮಿಷದಲ್ಲಿ ಫಕ್ಕನೆ ಆಕಾಶದಲ್ಲಿ ಬೆಳಕು ಕಂಡಿತು. ನಕ್ಷತ್ರಗಳೆಲ್ಲ ಮಾಯವಾದವು. ಕ್ಷಣಕ್ಷಣಕ್ಕೂ ವಾತಾವರಣ ಪ್ರಕಾಶಮಾನವಾಯಿತು. ಸೂರ್ಯನ ಒಂದೇ ಒಂದು ತುಣುಕು ಚಂದ್ರನ ಎಡೆಯಿಂದ ಇಣುಕಿದರೂ ಆ ಬೆಳಕು ವಿಶಾಲ ಆಕಾಶವನ್ನು ಬೆಳಗಲು ಸಾಕು ಎಂಬುದನ್ನು ಕಣ್ಣಾರೆ ಕಂಡೆ.




ನೆರೆದ ಹಿರಿಯ-ಕಿರಿಯ ಮಿತ್ರರೆಲ್ಲರೂ ಬಹಳ ಸಂತೋಷದಿಂದ ಒಬ್ಬರಿಗೊಬ್ಬರು ತಮಗೆ ತೋಚಿದ ರೀತಿಯಲ್ಲಿ, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಮಧ್ಯೆ ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಕಂಡಿದ್ದೆ. ಹಕ್ಕಿಗಳು ಗಲಿಬಿಲಿಗೊಂಡೋ, ಗಾಬರಿಯಿಂದಲೋ ಚಿಲಿಪಿಲಿಗುಟ್ಟುತ್ತಾ ದಿಕ್ಕಾಪಾಲಾಗಿ ಹಾರಾಡುತ್ತಿದ್ದವು; ನಾಯಿಗಳು ವಿಚಿತ್ರ ಸ್ವರದಲ್ಲಿ ಕೂಗುತ್ತಿದ್ದವು; ದೂರದಲ್ಲಿ ಹಸು-ಕರುಗಳೂ ಕೂಗುವುದು ಕೇಳಿಸಿತು. ನಿಸರ್ಗದ ಈ ವಿಸ್ಮಯವನ್ನು ಮೂಕನಾಗಿ ಅನುಭವಿಸಿದೆ. ಒಟ್ಟಾರೆ ಆಕಾಶದಲ್ಲಿ ಬಹು ಅಪರೂಪಕ್ಕೆ ನಡೆಯುವ ಸೂರ್ಯ-ಚಂದ್ರರ ನೆರಳು-ಬೆಳಕಿನಾಟದ ವೈಭವವನ್ನು ನೋಡುವ ಭಾಗ್ಯ ನನ್ನದಾಯಿತು.

ಸಂಜೆ ಐದು ಗಂಟೆಯಾಗುವುದರೊಳಗೆ ಸರಿಸುಮಾರು ಎಲ್ಲ ಅಂಗಡಿಗಳ ಬಾಗಿಲುಗಳೂ ತೆರೆದಿದ್ದವು. ತಕ್ಷಣ ನೆನಪಾಯಿತು. ನಾನು ಅಂದು ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಸೂರ್ಯಗ್ರಹಣವನ್ನು ನೋಡುವ ಸಂಭ್ರಮದಲ್ಲಿ ನಿಜಕ್ಕೂ ನನಗೆ ಹಸಿವೆಯೇ ಆಗಿರಲಿಲ್ಲ!

ಗ್ರಹಣದ ದಿನ ಉಪವಾಸ ಮಾಡಬೇಕೆಂಬ ಸಂಪ್ರದಾಯ ಯಾಕೆ ಎಂದು ಹಲವಾರು ಬಾರಿ ಆಲೋಚಿಸಿದ್ದೇನೆ. ಉಪವಾಸ ಅಂದರೆ ಏನನ್ನೂ ತಿನ್ನದೆ ಹೊಟ್ಟೆಯನ್ನು ಖಾಲಿ ಕೆಡವುವುದು ಎನ್ನುವುದು ಸಾಮಾನ್ಯವಾಗಿ ನಾವೆಲ್ಲ ಅಂದುಕೊಂಡಿರುವ ಅರ್ಥ. ಆದರೆ ಈ ಪದದ ಅರ್ಥವಿಸ್ತಾರ ಬಹಳ ದೊಡ್ಡದು. ಉಪವಾಸ ಎಂದರೆ ಭಗವಂತನ ಜೊತೆ ವಾಸ ಮಾಡುವುದು ಎಂದರ್ಥ. ಭಗವಂತ ಎಂದರೆ ಯಾರು? ಆತ ಪರಮಸತ್ಯದ ಸಾಕಾರಮೂರ್ತಿ. ನನ್ನ ಪ್ರಕಾರ, ಸತ್ಯಾನ್ವೇಷಣೆಯಲ್ಲಿರುವ ಎಲ್ಲ ಜ್ಞಾನಿ-ವಿಜ್ಞಾನಿಗಳಿಗೂ ತಮ್ಮ ತಮ್ಮ ಅಧ್ಯಯನದಲ್ಲಿ ಹೆಚ್ಚು ಶ್ರದ್ಧೆ ಮತ್ತು ಆಸಕ್ತಿಯಿಂದ ತೊಡಗಿಸಿಕೊಳ್ಳುವುದೇ ಉಪವಾಸದ ಗುರಿ. ತಿಂಗಳ ಅಥವಾ ವರ್ಷದ ಕೆಲವು ವಿಶೇಷ ದಿನಗಳಂದು ಹೀಗೆ ಉಪವಾಸ ಮಾಡಿದರೆ ಒಬ್ಬ ವಿದ್ಯಾರ್ಥಿಯ ಬುದ್ಧಿ ಜಾಗೃತವಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಎಂದು ನಾನಂದುಕೊಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ಹೊಟ್ಟೆಯ ಪಾತ್ರ ಗೌಣ.

ಉಪವಾಸದ ಸಾರ್ವತ್ರಿಕ ಅರ್ಥಕ್ಕೆ ಮತ್ತೊಂದು ವಿವರಣೆಯನ್ನೂ ಕೊಡಬಹುದು. ನಾವು ಏನನ್ನೂ ತಿನ್ನದೆ ಹೊಟ್ಟೆ ಹಸಿದುಕೊಂಡಿದ್ದರೆ ಅಥವಾ ನಮ್ಮ ದೇಹಕ್ಕೆ ಪೂರಕವಾದ ಇಂಧನವನ್ನು ಸ್ವಲ್ಪ ಕಾಲ ಪೂರೈಸದೆ ಹೋದರೆ, ನಮ್ಮ ದೇಹ ಒಂದು ರೀತಿಯ ದಂಡನೆಗೆ ಒಳಗಾಗುತ್ತದೆ. ಹೀಗೆ ದಂಡನೆಗೊಳಗಾದ ಸಂದರ್ಭಗಳಲ್ಲಿ ದೇಹದಲ್ಲಿ ಹಲವಾರು ವಿಶೇಷ ರಾಸಾಯನಿಕ ದ್ರವ್ಯಗಳು ಸ್ರವಿಸಲ್ಪಡುತ್ತವೆ. ಇತ್ತೀಚೆಗೆ ವಿಜ್ಞಾನಿಗಳು ಈ ವಿಶೇಷ ರಾಸಾಯನಿಕ ಪದಾರ್ಥಗಳನ್ನು ಗುರುತಿಸಿದ್ದಾರೆ ಮತ್ತು ಅವುಗಳನ್ನು ಒಟ್ಟಾರೆ Anti-oxidants ಎಂದು ಕರೆಯುತ್ತಾರೆ. ಇವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕ್ಯಾನ್ಸರ್‌ನಂಥ ರೋಗಗಳನ್ನೂ ತಡೆಗಟ್ಟುವುದು ಎಂದು ವೈದ್ಯಕೀಯವಾಗಿ ಧೃಢಪಟ್ಟಿದೆ. ನನಗೆ ಅರಿವಿಲ್ಲದೆಯೇ ನಾನು ಆವತ್ತು ಉಪವಾಸ ಮಾಡಿದ್ದೆ!

ಅಂದು ರಾತ್ರಿ ಅಲ್ಲೇ ಒಂದು ಲಾಡ್ಜ್‌ನಲ್ಲಿ ಉಳಿದು ಮಾರನೆ ದಿನ ಮನೆಗೆ ಹಿಂದಿರುಗಿದೆ. ಸೂರ್ಯಗ್ರಹಣದ ಆ ಕ್ಷಣಗಳನ್ನು ಯಾವತ್ತೂ ಮರೆಯಲು ಅಸಾಧ್ಯ.

ಓದುಗರೆ, ಈ ಲೇಖನದೊಂದಿಗೆ ನೀವು ಕಾಣುವ ಚಿತ್ರಗಳು ನಾನು ಕ್ಯಾಮೆರಾದಿಂದ ತೆಗೆದ ಫೋಟೋಗಳಲ್ಲ. ಆಗ ನನ್ನ ಹತ್ತಿರ ಒಳ್ಳೆಯ ಕ್ಯಾಮೆರಾ ಇರಲಿಲ್ಲ. ಆದರೆ ಜನವರಿ ೧೫ರಂದು ರಾಮೇಶ್ವರದಲ್ಲಿ ಘಟಿಸಿದ ಕಂಕಣ ಸೂರ್ಯಗ್ರಹಣದ ಚಿತ್ರಗಳನ್ನು ನಾನೇ ತೆಗೆದಿದ್ದೇನೆ. ಮುಂದಿನ ವಾರ ಅದರ ಬಗ್ಗೆ ಸುದೀರ್ಘವಾಗಿ ಬರೆಯುವವನಿದ್ದೇನೆ.

ನಿಮ್ಮ ನಿಷ್ಪಕ್ಷ ಅಭಿಪ್ರಾಯಗಳನ್ನು ಸಂಕೋಚವಿಲ್ಲದೆ ತಿಳಿಸಿ. ಅಲ್ಲಿಯವರೆಗೆ,

ನಿಮ್ಮವ,

ನರಸಿಂಹನ್.

2 comments:

shivaprakash said...

sundara anubhavada sarala vivarane, monne kiriya geleyana anubhava surlyadalli Hige agittu.

Anonymous said...

Good read. The mail became more interesting following the reply from Dr. S. N. Prasad.

Thank you.